ಕಲಬುರಗಿ: ಮನೆಯ ಅಲಮಾರಿಯಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿದ್ದ ಪ್ರಕರಣವನ್ನು ರಟಕಲ್ ಪೊಲೀಸರು ಭೇದಿಸಿ, ಆರೋಪಿಯನ್ನು ಬಂಧಿಸಿ 8.20 ಲಕ್ಷ ರೂ. ಮೌಲ್ಯದ ಕಳ್ಳತನದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ರಾಣೇಶ ಪೀರ ದರ್ಗಾ ಆಶ್ರಯ ಕಾಲೋನಿ ನಿವಾಸಿ ಸುಧಾಕರ ತಿಪ್ಪಣ್ಣ ಪಾಣೇಗೇರ ಬಂಧಿತ ಆರೋಪಿಯಾಗಿದ್ದಾನೆ.

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಸಂಗಾರೆಡ್ಡಿ ತಂದೆ ತಿಪ್ಪಾರೆಡ್ಡಿ ಬಸರೆಡ್ಡಿ ಅವರ ಮನೆಯಲ್ಲಿ ಸೆಪ್ಟೆಂಬರ್ 8ರಂದು ಮಧ್ಯರಾತ್ರಿ ಕಳ್ಳತನ ನಡೆದಿತ್ತು. ಮನೆಯ ಅಲಮಾರಿಯಲ್ಲಿದ್ದ ಸುಮಾರು 51 ಗ್ರಾಂ ಚಿನ್ನಾಭರಣ, 26 ಗ್ರಾಂ ಬೆಳ್ಳಿ ಆಭರಣ ಹಾಗೂ 50 ಸಾವಿರ ರೂ. ನಗದು ಸೇರಿದಂತೆ ಒಟ್ಟು 8,20,200 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ಚಿಂಚೋಳಿ ಉಪವಿಭಾಗದ ಡಿವೈಎಸ್ಪಿ ಸಂಗಮನಾಥ ಹಿರೇಮಠ ಅವರ ಮಾರ್ಗದರ್ಶನದಲ್ಲಿ, ಸುಲೇಪೇಟ ವೃತ್ತದ ಸಿಪಿಐ ಕೃಷ್ಣಕುಮಾರ ನೇತೃತ್ವದಲ್ಲಿ ಪಿಎಸ್‌ಐ ಶೀಲಾದೇವಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ತನಿಖೆಯ ವೇಳೆ ಆರೋಪಿಯನ್ನು ಬಂಧಿಸಿದ ಪೊಲೀಸರು, ಕಳವಾಗಿದ್ದ 51 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ 7.65 ಲಕ್ಷ ರೂ.), 26 ಗ್ರಾಂ ಬೆಳ್ಳಿ ಆಭರಣ (5,200 ರೂ.) ಹಾಗೂ 50 ಸಾವಿರ ರೂ. ನಗದು ಸೇರಿದಂತೆ ಒಟ್ಟು 8,20,200 ರೂ. ಮೌಲ್ಯದ ಮುದ್ದೆಮಾಲನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚಿ ಸಂಪೂರ್ಣ ಮುದ್ದೆಮಾಲನ್ನು ವಶಪಡಿಸಿಕೊಂಡ ರಟಕಲ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor