×
Ad

Kalaburagi | ಅಂತರ-ಶಾಲಾ ಸ್ಪರ್ಧೆ: ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ

Update: 2026-06-26 17:20 IST

ಕಲಬುರಗಿ : ನಗರದ ಸೈಯದ್ ಅಕ್ಬರ್ ಹುಸೇನಿ ಪ್ರೌಢಶಾಲೆ (ICSE/ISC-KG to XII)ಯಲ್ಲಿ ಕರ್ನಾಟಕ ICSE ಶಾಲೆಗಳ ಸಂಘದ ಆಶ್ರಯದಲ್ಲಿ ಉತ್ತರ ಕರ್ನಾಟಕದ ವಿವಿಧ ICSE ಶಾಲೆಗಳ ವಿದ್ಯಾರ್ಥಿಗಳಿಗಾಗಿ ಅಂತರ-ಶಾಲಾ ಸ್ಪರ್ಧೆಯನ್ನು ಗುರುವಾರ ಯಶಸ್ವಿಯಾಗಿ ಆಯೋಜಿಸಲಾಯಿತು.

ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಜ್ಞಾನ, ಸಂವಹನ ಕೌಶಲ್ಯ, ಕಲಾತ್ಮಕ ಪ್ರತಿಭೆ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮವು ಎಂಟನೇ ತರಗತಿಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಳಿಕ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಶಾಲಾ ಗೀತೆ ಪ್ರಸ್ತುತಪಡಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿ ಮಿರ್ಜಾ ಉಜಿರೆ ಬೇಗ್ ಸ್ವಾಗತ ಭಾಷಣ ಮಾಡಿದರು.

ಕೆಬಿಎನ್ ಸೊಸೈಟಿಯ ಕಾರ್ಯದರ್ಶಿ ಬೆನ್ನಿ ಕುರಿಯಾಕೋಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ಸಾಹ, ಪ್ರಾಮಾಣಿಕತೆ ಹಾಗೂ ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಶಾಲೆಯ ಪ್ರಾಂಶುಪಾಲ ಲಿಜೀಶ್ ತುರುತಿಲ್ ಮಾತನಾಡಿ, ಅಂತರ-ಶಾಲಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ನಾಯಕತ್ವ, ಸಾಂಘಿಕ ಕಾರ್ಯ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಘೋಷಣೆ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಚಿತ್ರಕಲೆ, ಬಣ್ಣಚಿತ್ರ ಹಾಗೂ ಸೃಜನಾತ್ಮಕ ಬರವಣಿಗೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಸ್ಪರ್ಧೆಗಳ ಬಳಿಕ ಪ್ರಾಂಶುಪಾಲ ಲಿಜೀಶ್ ತುರುತಿಲ್ ವಿಜೇತರನ್ನು ಘೋಷಿಸಿ ಅಭಿನಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು.

ಈ ಸಂದರ್ಭದಲ್ಲಿ ವೈಸ್ ಪ್ರಿನ್ಸಿಪಾಲ್ ಲಿಸ್ಸಿ ಬೆನ್ನಿ, ಶೈಕ್ಷಣಿಕ ಸಂಯೋಜಕಿ ಸೈಯದಾ ಫೌಜಿಯಾ, ಸಾಂಸ್ಕೃತಿಕ ಸಂಯೋಜಕಿ ಅಂಜುಮೋಲ್ ಬೆನ್ನಿ, ಸಾಂಸ್ಕೃತಿಕ ಉಸ್ತುವಾರಿಗಳಾದ ನಾಸಿರ್, ನಸೀರಾ, ಅಜ್ಮಾ ನೂರ್, ಅಬೂಬಕರ್, ರಾಜೇಶ್ವರಿ ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News