×
Ad

Kalaburagi | ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ ಆರೋಪ; 18 ಅಧಿಕಾರಿಗಳಿಗೆ 1.50 ಲಕ್ಷ ರೂ. ದಂಡ : ಬಿ. ವೆಂಕಟಸಿಂಗ್

Update: 2026-05-08 16:46 IST

ಕಲಬುರಗಿ: ಮಾಹಿತಿ ಹಕ್ಕು ಅಧಿನಿಯಮ (RTI) ಅಡಿಯಲ್ಲಿ ಸಕಾಲಕ್ಕೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದುದು, ವಿಚಾರಣೆಗೆ ಗೈರು ಹಾಜರಾಗಿದ್ದು ಹಾಗೂ ಆಯೋಗದ ನೋಟಿಸ್‌ಗಳಿಗೆ ಸ್ಪಂದಿಸದ ಹಿನ್ನೆಲೆ ವಿವಿಧ ಇಲಾಖೆಗಳ 18 ಅಧಿಕಾರಿಗಳಿಗೆ ಒಟ್ಟು 1.50 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ತಿಳಿಸಿದ್ದಾರೆ.

ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ವಿಚಾರಣೆ ವೇಳೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಂಡ ವಿಧಿಸಲ್ಪಟ್ಟವರಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಅವರಿಗೆ 10 ಸಾವಿರ ರೂ., ಗಂಗಾವತಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವಣ್ಣ ಕಟ್ಟಿ ಅವರಿಗೆ 15 ಸಾವಿರ ರೂ. ಹಾಗೂ ರಾಯಚೂರು ತಾಲೂಕು ಗ್ರೇಡ್-2 ತಹಶೀಲ್ದಾರ್ ಪರಶುರಾಮ್ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ.

ಇದೇ ರೀತಿ ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಲ್ಲಿಕಾರ್ಜುನ, ಸುರಪುರ ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ರಾಜಕುಮಾರ ಸುಬೆದಾರ, ಮಾನ್ವಿ ತಾಲೂಕಿನ ಆರೋಳಿ ಗ್ರಾಮ ಪಂಚಾಯತ್ ಪಿಡಿಒ ರಘುನಾಥ, ಆಳಂದ ತಾಲೂಕಿನ ಯಲಸಂಗಿ ಗ್ರಾಮ ಪಂಚಾಯತ್ ಪಿಡಿಒ ಜಗದೀಶ್, ಮುನ್ನಳ್ಳಿ ಗ್ರಾಮ ಪಂಚಾಯತ್ ಪಿಡಿಒ ಭೀಮರಾವ್ ಸೇರಿದಂತೆ ಹಲವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಮೇಲೂ ದಂಡ ವಿಧಿಸಲಾಗಿದೆ.

ಸುರಪುರ ತಾಲೂಕಿನ ನಗನೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಡಿವಾಳಪ್ಪ, ಶಹಾಪುರ ತಾಲೂಕಿನ ಗೋಗಿ(ಕೆ) ಗ್ರಾಮ ಪಂಚಾಯತ್ ಪಿಡಿಒ ಸಿದ್ರಾಮ, ಸಂಡೂರು ತಾಲೂಕಿನ ಹೊಸದರೋಜಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕಲ್ಲಪ್ಪ, ಯಾದಗಿರಿ ತಾಲೂಕಿನ ಸೈದಾಪುರ ಗ್ರಾಮ ಪಂಚಾಯತ್ ಪಿಡಿಒ ಮುದುಕಣ್ಣ, ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಯಂಕನಗೌಡ, ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜ್ಯೋತಿ ರೆಡ್ಡರ್, ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ವೇದಾಂಗ, ಲಿಂಗಸುಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಭೀಮಣ್ಣ ಹಾಗೂ ರಾಮಸಮುದ್ರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗಾಲಿಬಸಾಬ್ ಅವರಿಗೂ ದಂಡ ವಿಧಿಸಲಾಗಿದೆ.

ಇದೇ ವೇಳೆ ವಡಗೇರಾ ತಾಲೂಕಿನ ಉಲ್ಲೇಸುಗೂರು ಗ್ರಾಮ ಪಂಚಾಯತ್ ಪಿಡಿಒ, ಸೇಡಂ ತಾಲೂಕಿನ ಅಡಕಿ ಗ್ರಾಮ ಪಂಚಾಯತ್ ಪಿಡಿಒ ಹಾಗೂ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಪಂಚಾಯತ್ ಪಿಡಿಒಗಳಿಂದ ಅನುಕ್ರಮವಾಗಿ ₹5 ಸಾವಿರ, 15 ಸಾವಿರ ರೂ. ಹಾಗೂ 10 ಸಾವಿರ ರೂ. ಸೇರಿ ಒಟ್ಟು 30 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಏಪ್ರಿಲ್‌ನಲ್ಲಿ 229 ಪ್ರಕರಣಗಳ ವಿಲೇವಾರಿ :

ಏಪ್ರಿಲ್ ತಿಂಗಳಲ್ಲಿ ಒಟ್ಟು 564 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 229 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ಆಯುಕ್ತರು ತಿಳಿಸಿದ್ದಾರೆ.

ತಾವು ಅಧಿಕಾರ ಸ್ವೀಕರಿಸಿದ ಬಳಿಕ ಇದುವರೆಗೆ 3,084 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತೊಂಡು, 88 ದಿನಗಳ ವಿಚಾರಣೆಯಲ್ಲಿ 1,308 ಪ್ರಕರಣಗಳನ್ನು ವಿಲೇವಾರಿ ಮಾಡಿರುವುದಾಗಿ ಬಿ. ವೆಂಕಟಸಿಂಗ್ ಹೇಳಿದ್ದಾರೆ.

ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಮಾಹಿತಿ ಹಕ್ಕು ಕಾಯ್ದೆ ಕುರಿತು ಅಧಿಕಾರಿಗಳಿಗೆ ಅರಿವು ಮೂಡಿಸಲು ಬಳ್ಳಾರಿ, ಬೀದರ್, ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಇದೇ ತಿಂಗಳ 30ರಂದು ವಿಜಯನಗರ ಜಿಲ್ಲೆಯಲ್ಲಿ ಮತ್ತೊಂದು ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕಾರಿನಲ್ಲಿ ಮಾಹಿತಿ ಬಂಡಲ್ ಸಾಗಾಟ :

ಜೇವರ್ಗಿ ತಾಲೂಕಿನ ಹರನಾಳ್(ಕೆ) ಗ್ರಾಮದ ಬಾಬು ದೊಡ್ಡಮನಿ ಅವರು ಕೇಳಿದ್ದ ಮಾಹಿತಿಯನ್ನು ಆಯೋಗದ ಆದೇಶದಂತೆ ಜೇವರ್ಗಿ ಸಿಡಿಪಿಒ ಭೀಮರಾಯ ಅವರು ಒದಗಿಸಿದರು. ಕಚೇರಿಯಲ್ಲಿದ್ದ ದಾಖಲೆಗಳನ್ನು ಸಂಗ್ರಹಿಸಿ ಸುಮಾರು 20ಕ್ಕೂ ಹೆಚ್ಚು ಮಾಹಿತಿ ಬಂಡಲ್‌ಗಳನ್ನು ಕಾರಿನಲ್ಲಿ ತುಂಬಿಕೊಂಡು ವಿಚಾರಣೆಗೆ ತರಲಾಗಿದ್ದು, ಬಳಿಕ ಅರ್ಜಿದಾರರಿಗೆ ಹಸ್ತಾಂತರಿಸಲಾಯಿತು. ಈ ಘಟನೆ ವಿಚಾರಣೆಯಲ್ಲಿ ವಿಶೇಷ ಗಮನ ಸೆಳೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News