×
Ad

Kasaragod | ಸಿಪಿಎಂ ಕಚೇರಿ ಧ್ವಂಸಗೊಳಿಸಿದ ಆರೋಪ: ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

Update: 2026-07-02 16:09 IST

ಬಂಧಿತ ಆರೋಪಿಗಳು (Photo credit: onmanorama.com)

ಕಾಸರಗೋಡು: ಕಾಸರಗೋಡಿನ ಎನ್ನಪ್ಪರದಲ್ಲಿನ ಸಿಪಿಐ(ಎಂ) ಸ್ಥಳೀಯ ಸಮಿತಿಯ ಕಚೇರಿಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತಯನ್ನೂರ್ ನಿವಾಸಿಗಳಾದ ವಿಶಾಲ್ ಕೆ. ಬಾಬು ಮತ್ತು ಅಭಿನವ್ ಎಂದು ಗುರುತಿಸಲಾಗಿದೆ.

ಎನ್ನಪ್ಪರದಲ್ಲಿನ ಸಿಪಿಐ(ಎಂ) ಕಚೇರಿ ಬುಧವಾರ ಧ್ವಂಸಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಿಟಕಿಯ ಗಾಜುಗಳು, ಪೀಠೋಪಕರಣಗಳು ಹಾಗೂ ಧ್ವಜ ಸ್ತಂಭಗಳಿಗೆ ಹಾನಿಯೆಸಗಲಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೊತ್ತ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸಮೀಪದ ಮನೆಗಳು ಹಾಗೂ ಅಂಗಡಿಗಳ ಬಳಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವ ಮೂಲಕ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಘಟನೆಯಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿ ಪೆರಿಯಾರಂನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದನ್ನು ತನಿಖೆಯ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರೂ ಆರೋಪಿಗಳನ್ನು ಬುಧವಾರ ಸಂಜೆ ಬಂಧಿಸಿ, ವಿಚಾರಣೆಗೊಳಪಡಿಸಲಾಯಿತು ಎಂದು ವರದಿಯಾಗಿದೆ.

ನಮಗೆ ಶಾಲಾ ದಿನಗಳಿಂದಲೂ ಸಿಸಿಐ(ಎಂ) ಬಗ್ಗೆ ಅಸಮಾಧಾನವಿತ್ತು. ಸಿಪಿಐ(ಎಂ) ಪಕ್ಷವು ಶಾಲೆಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸಿತ್ತು ಎಂದು ವಿಚಾರಣೆಯ ವೇಳೆ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಪೈಕಿ ಓರ್ವ ಇತ್ತೀಚೆಗಷ್ಟೇ ವಿದೇಶದಿಂದ ರಾಜ್ಯಕ್ಕೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ವೇಳೆ ಇಬ್ಬರೂ ಆರೋಪಿಗಳು ಪಾನಮತ್ತರಾಗಿದ್ದರು ಎಂದೂ ಪೊಲೀಸರು ಶಂಕಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಿದ ಬಳಿಕ, ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News