Kasaragod | ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಭಾವಿ ವರನೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮದುವೆ ನಿಶ್ಚಯವಾಗಿದ್ದ ಬ್ಯಾಂಕ್ ಉದ್ಯೋಗಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಆಕೆಯ ಭಾವಿ ವರನೂ ಕೇರಳದಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ.
ಕಾಸರಗೋಡು ಪೂಚ್ಚಕ್ಕಾಡ್ ನಿವಾಸಿ ಪಿ. ಅನುಶ್ರೀ (25) ಮತ್ತು ಕಣ್ಣೂರು ಅಂಬಲತ್ತಟ್ಟು ನಿವಾಸಿ ವಿ. ಅಮಲ್ (27) ಮೃತರು ಎಂದು ತಿಳಿದುಬಂದಿದೆ.
ಇಬ್ಬರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳಾಗಿದ್ದರು. ಅನುಶ್ರೀ ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ಶಾಖೆಯಲ್ಲಿ ಮತ್ತು ಅಮಲ್ ಎರ್ನಾಕುಲಂನಲ್ಲಿ ಕೆಲಸ ಮಾಡುತ್ತಿದ್ದರು.
ಇವರಿಬ್ಬರ ವಿವಾಹವನ್ನು ಮುಂದಿನ ವರ್ಷ ಡಿ.26ರಂದು ನಡೆಸಲು ಕುಟುಂಬಸ್ಥರು ನಿಶ್ಚಯಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ಅನುಶ್ರೀ ಹುಣಸೂರಿನ ತಮ್ಮ ವಾಸಸ್ಥಳದಲ್ಲಿ ವಿಡಿಯೋ ಕಾಲ್ ಮಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಆಘಾತಕಾರಿ ಸುದ್ದಿ ತಿಳಿದ ಬೆನ್ನಲ್ಲೇ, ವರ ಅಮಲ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ.
ಹುಣಸೂರು ಮತ್ತು ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.