ಕನಕಗಿರಿಯಲ್ಲಿ ಸಂಭ್ರಮದಿಂದ ನಡೆದ ಕರಿ ಹರಿಯುವ ಸ್ಪರ್ಧೆ
ಕಾರ ಹುಣ್ಣಿಮೆ ಅಂಗವಾಗಿ ಸಿಂಗಾರಗೊಂಡ ಎತ್ತುಗಳ ಮೆರವಣಿಗೆ
Update: 2026-06-29 19:06 IST
ಕನಕಗಿರಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಕರಿ ಹರಿಯುವ ಸ್ಪರ್ಧೆಗಳು ನಡೆದಿದ್ದು, ಪಟ್ಟಣದಲ್ಲಿ ಸೋಮವಾರ ಸಾಯಂಕಾಲ ಮೂಲ ನಕ್ಷತ್ರದ ಹಿನ್ನೆಲೆಯಲ್ಲಿ ರೈತರು ಎತ್ತುಗಳ ಮುಖಾಂತರ ಸಾಂಪ್ರದಾಯಿಕ ಕರಿ ಹರಿಯುವ ಸ್ಪರ್ಧೆಯನ್ನು ಸಂಭ್ರಮದಿಂದ ಆಚರಿಸಿದರು.
ರೈತರು ತಮ್ಮ ಎತ್ತುಗಳಿಗೆ ಬಲೂನ್ಗಳನ್ನು ಕಟ್ಟಿ, ಕೊಂಬುಗಳಿಗೆ ವಿವಿಧ ಬಣ್ಣಗಳನ್ನು ಹಚ್ಚಿ ಅಲಂಕರಿಸಿ, ರಾಜಬೀದಿಯಲ್ಲಿ ಮೆರವಣಿಗೆ ನಡೆಸಿದರು. ಸಿಂಗಾರಗೊಂಡ ಎತ್ತುಗಳ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ಪಟ್ಟಣದ ಅಗಸಿ ಆಂಜನೇಯ ದೇವಸ್ಥಾನ ಹಾಗೂ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಹನುಮಪ್ಪ ದೇವಸ್ಥಾನದ ಆವರಣದಲ್ಲಿ ಕರಿ ಹರಿಯುವ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಜೋಡಿ ಎತ್ತುಗಳು ಭಾಗವಹಿಸಿದ್ದವು.
ಸ್ಪರ್ಧೆ ಮುಗಿದ ಬಳಿಕ ರೈತರು ತಮ್ಮ ಎತ್ತುಗಳನ್ನು ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಿದರು.