ದಸರಾ ಗಜಪಡೆಗಳ ತೂಕ ಪರೀಕ್ಷೆ: ಶ್ರೀಕಂಠ ಅತೀ ಹೆಚ್ವು ತೂಕ ಹೊಂದಿದ ಆನೆ
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆಯ ಪ್ರಮುಖ ಆಕರ್ಷಣೆ ಗಜಪಡೆ ಅರಮನೆ ಪ್ರವೇಶಿಸಿದ್ದು, ತಾಲೀಮು ಆರಂಭಕ್ಕೂ ಮುನ್ನ 9 ಆನೆಗಳ ತೂಕ ಪರೀಕ್ಷೆ ರವಿವಾರ ನಡೆಸಲಾಗಿದ್ದು, ಶ್ರೀಕಂಠ ಆನೆಯೇ ಹೆಚ್ಚು ತೂಕ ಹೊಂದಿದೆ.
ಅರಮನೆಯಿಂದ ಆನೆಗಳನ್ನು ಇರ್ವೀನ್ ರಸ್ತೆಯಲ್ಲಿರುವ ವೇಬ್ರಿಡ್ಜ್ ಗೆ ಕರೆದುಕೊಂಡು ಬಂದು ಎಲ್ಲಾ ಅನೆಗಳ ತೂಕ ಪರೀಕ್ಷೆ ನಡೆಸಲಾಯಿತು.
ಆರಂಭದಲ್ಲಿ ಮೈಸೂರು ದಸರಾ ಉತ್ಸವಕ್ಕೆ 12 ಆನೆಗಳ ಪಟ್ಟಿಯನ್ನು ಪ್ರಕಟಿಸಿದ ಅರಣ್ಯ ಇಲಾಖೆ, ಅಂಬಾರಿ ಹೊರುತ್ತಿದ್ದ ಅಭಿಮನ್ಯುವನ್ನು ಕೈ ಬಿಡುವ ಮೂಲಕ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಹೊಸ ಆನೆಯೇ ಅಂಬಾರಿ ಹೊರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈಗ ಶ್ರೀಕಂಠ ಹೆಚ್ಚು ತೂಕ ಹೊಂದುವ ಮೂಲಕ ಪ್ರಥಮ ಸ್ಥಾನ ಪಡೆದಿರುವುದನ್ನು ನೋಡಿದರೆ, ಶ್ರೀಕಂಠನೇ ಅಂಬಾರಿ ಹೊರುವ ಸಾಧ್ಯತೆ ಹೆಚ್ಚಿದೆ.
ಮೈಸೂರಿಗೆ ತಲುಪಿರುವ ಮೊದಲ ತಂಡದ ಆನೆಗಳ ತೂಕದ ಪರೀಕ್ಷೆಯಲ್ಲಿ ಶ್ರೀಕಂಠ, ಮಹೇಂದ್ರ, ಲಕ್ಷ್ಮಿ, ಪ್ರಶಾಂತ, ಧನಂಜಯ, ಶ್ರೀರಾಮ, ಕಾವೇರಿ, ಗೋಪಿ, ಏಕಲವ್ಯ ಭಾಗವಹಿಸಿತು. ಈ ಪೈಕಿ ಅತ್ಯಂತ ತೂಕದ ಆನೆಯಾಗಿ ಶ್ರೀಕಂಠ ಪ್ರಥಮ ಸ್ಥಾನಕ್ಕೇರಿದರೆ, ಕಡಿಮೆ ತೂಗಿದ ಕಾವೇರಿ ಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದಿದೆ. ಅಲ್ಲಿಗೆ, ತೂಕ ಮಾಪನಕ್ಕೆ ಒಳಪಟ್ಟ ಒಟ್ಟು 9 ಆನೆಗಳ ತೂಕವನ್ನು ಇದೀಗ ಅಂತಿಮವಾಗಿ ಪ್ರಕಟಿಸಲಾಗಿದೆ.
ಆನೆಗಳ ತೂಕದ ಪಟ್ಟಿ:
ಶ್ರೀಕಂಠ: 5,790 ಕೆಜಿ (ಪ್ರಥಮ ಸ್ಥಾನ)
ಏಕಲವ್ಯ: 5,600 ಕೆಜಿ
ಧನಂಜಯ: 5,530 ಕೆಜಿ
ಮಹೇಂದ್ರ: 5,490 ಕೆಜಿ
ಪ್ರಶಾಂತ : 5,205 ಕೆಜಿ
ಗೋಪಿ: 5,170 ಕೆಜಿ
ಶ್ರೀರಾಮ: 4,820 ಕೆಜಿ
ಲಕ್ಷ್ಮಿ:3,990 ಕೆಜಿ
ಕಾವೇರಿ: 3,075 ಕೆಜಿ ತೂಕ ಹೊಂದಿವೆ.