×
Ad

ದೇಶದಲ್ಲಿ ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ : ಸಿದ್ಧಾರ್ಥ ವರದರಾಜನ್

ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವದ ವಿಚಾರ ಸಂಕಿರಣ

Update: 2026-01-18 00:16 IST

ಮೈಸೂರು : ನಾಯಕ ಪ್ರಶ್ನಾತೀತನಾದಾಗ ಪ್ರಜಾಪ್ರಭುತ್ವ ಇಕ್ಕಟ್ಟಿಗೆ ಸಿಲುಕುತ್ತದೆ ಎಂದು ಎಚ್ಚರಿಸಿದ್ದ ಅಂಬೇಡ್ಕರ್ ಅವರು ವ್ಯಕ್ತಿ ಪೂಜೆ ವಿರೋಧಿಸಿದ್ದರು. ದೇಶದಲ್ಲಿ ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಅವರಂತೆ ಮನುಸ್ಮತಿ ಸುಟ್ಟ ಯುವತಿಯ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ. ಅಂಬೇಡ್ಕರ್ ಅವರನ್ನು ಹೊಗಳುವ ನಾಯಕರು, ಅವರ ಹೋರಾಟ ಮಾದರಿಯಲ್ಲಿ ನಡೆದವರ ವಿರುದ್ಧವೇ ಪ್ರಕರಣ ದಾಖಲಿಸುವುದು ದ್ವಂದ್ವ ನಿಲುವಲ್ಲವೇ ಎಂದು ’thewire’ನ ಪ್ರಧಾನ ಸಂಪಾದಕ ಸಿದ್ಧಾರ್ಥ ವರದರಾಜನ್ ಪ್ರಶ್ನಿಸಿದ್ದಾರೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ನಗರದ ಕಿರು ರಂಗಮಂದಿರದಲ್ಲಿ ಶನಿವಾರ ನಡೆದ ಬಹುರೂಪಿ ಬಾಬಾ ಸಾಹೇಬ್ ಸಮತೆಯಡೆಗೆ ನಡಿಗೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವವನ್ನು ಒಂದೇ ಬಾರಿ ರಕ್ಷಿಸಿದರೆ ಸಾಕು ಎಂಬ ಭ್ರಮೆ ತಪ್ಪು. ಅಂಬೇಡ್ಕರ್ ದೃಷ್ಟಿಯಲ್ಲಿ ಪ್ರಜಾಪ್ರಭುತ್ವವನ್ನು ಪ್ರತಿದಿನವೂ ಸಂಸ್ಥೆಗಳಲ್ಲೂ, ಸಾರ್ವಜನಿಕ ಚರ್ಚೆಗಳಲ್ಲೂ ಮತ್ತು ಸಾಂಸ್ಕೃತಿಕ ವಲಯದಲ್ಲೂ ಕಾಪಾಡಬೇಕಿದೆ ಎಂದು ಅವರು ಹೇಳಿದರು.

ಸಂಸ್ಕೃತಿಯನ್ನು ಪ್ರಜಾಪ್ರಭುತ್ವದ ಅಲಂಕಾರವಾಗಿ ನೋಡಬಾರದು, ಅದು ಪ್ರಜಾಪ್ರಭುತ್ವವನ್ನು ಕಾಪಾಡುವ ಒಂದು ಮಾರ್ಗ ಎಂದು ಅವರು ತಿಳಿಸಿದರು. ಅಮೆರಿಕ, ಐರೋಪ್ಯ ದೇಶಗಳಿಂದ ವಸಾಹತೀಕರಣ, ಆರ್ಥಿಕ, ಸಾಮಾಜಿಕ ವಿಮೋಚನೆ ಪಡೆಯಲು ನೂರಾರು ದೇಶಗಳಿಗೆ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನವೇ ಮಾದರಿ ಎಂದು ಅಭಿಪ್ರಾಯಪಟ್ಟರು.

ಭಾರತವು ಸಾರ್ವಭೌಮವಾಗಿ ಉಳಿಯಲು ಬೇಕಾದ ಅಡಿಪಾಯವನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದರು. ಅದು ಕೇವಲ ನಮಗೆ ಮಾತ್ರ ಸಂಬಂಧಿಸಿದ್ದಲ್ಲ ಜಗತ್ತಿನ ಎಲ್ಲ ದೇಶಗಳಿಗೂ ಮಾದರಿಯಾಗಿದೆ. 2019ರಿಂದ ನಾಗರಿಕತೆ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದ ನಂತರ ದೇಶಾದ್ಯಂತ ಜನರು ಪ್ರತಿಭಟನೆಯಲ್ಲಿ ಸಂವಿಧಾನವನ್ನು ಕೈಯಲ್ಲಿ ಹಿಡಿಯುತ್ತಿರುವುದು ಮಹತ್ವದ ಬೆಳವಣಿಗೆ ಎಂದು ಹೇಳಿದರು.

ಸಂವಿಧಾನವು ಸ್ಥಿರವಾದ ದಾಖಲೆ ಅಲ್ಲ, ಅದು ಸದಾ ಬೆಳೆಯುವ, ಹೊಸ ಹಕ್ಕುಗಳನ್ನು ಅಳವಡಿಸಿಕೊಳ್ಳುವ ಜೀವಂತ ದಾಖಲೆ. ಜನರು ಮಾತನಾಡಲು, ಸಂಘಟಿಸಿಕೊಳ್ಳಲು, ಅಧ್ಯಯನ ಮಾಡಲು ಮತ್ತು ಅಗತ್ಯವಾದ ಹೊಸ ಹಕ್ಕುಗಳಿಗಾಗಿ ಹೋರಾಡಲು ಇರುವ ಅವಕಾಶ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಸುದರ್ಶನ್, ಹಿರಿಯ ಕಲಾವಿದೆ ನಂದಿನಿ ಉಪಸ್ಥಿತರಿದ್ದರು.

ಪ್ರಭುತ್ವ ಸಂವಿಧಾನ ನಾಶ ಮಾಡುವ ಜೊತೆಗೆ ನಮ್ಮ ಧ್ವನಿಯನ್ನು ದಮನ ಮಾಡಲಾಗುತ್ತಿದೆ. ಸರ್ವಾಧಿಕಾರಿ ಆಡಳಿತವನ್ನು ದಮನ ಮಾಡಿ ಪ್ರಜಾಪ್ರಭುತ್ವ ಉಳಿಸಬೇಕಿದೆ. ದೇಶ ಉಳಿಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ.

-ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ

ವೈಜ್ಞಾನಿಕವಾಗಿ ದೇಶವನ್ನು ಕಟ್ಟಬೇಕಾದ ಪ್ರಧಾನಿ ಮೌಢ್ಯ ಬಿತ್ತುತ್ತಿದ್ದಾರೆ: ಮಹದೇವಪ್ಪ

ದೇಶವನ್ನು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದಲ್ಲಿ ಕಟ್ಟಬೇಕು ಎಂದು ಸಂವಿಧಾನ ಹೇಳಿದರೆ, ಪ್ರಧಾನಿ ನರೇಂದ್ರ ಮೋದಿ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪವಾಗ್ದಾಳಿ ನಡೆಸಿದರು.

ಈ ಹಿಂದೆ ರಾಷ್ಟ್ರಪತಿಯಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರು ಯಾರದೋ ಕಾಲು ಮುಟ್ಟಿ ನಮಸ್ಕಾರ ಮಾಡಿದರು ಎಂದು ದೇಶಾದ್ಯಂತ ಪ್ರತಿಭಟನೆ ನಡೆಯಿತು. ನಂತರ ಅವರು ಕ್ಷಮೆ ಕೇಳಿದರು. ಇಂದಿನ ಪ್ರಧಾನಿ ಕೋವಿಡ್ ಸಾಂಕ್ರಾಮಿಕ ರೋಗ ಹೋಗಲಾಡಿಸಲು ಗಂಟೆ-ಜಾಗಟೆ ಬಾರಿಸಿ ಎನ್ನುತ್ತಾರೆ. ಇದೆಲ್ಲವೂ ಸಂವಿಧಾನ ವಿರೋಧಿ ನಡೆಯಾಗಿದೆ. ವೈಚಾರಿಕ ಮನೋಭಾವ ಬಿತ್ತಬೇಕಾದ ಅವರೇ ಮೌಢ್ಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಬಹುರೂಪಿ ಬಾಬಾ ಸಾಹೇಬ್ ನಾಟಕೋತ್ಸವದಲ್ಲಿ ಕವಿಗಳು, ವಿದ್ವಾಂಸರು, ಕಲಾವಿದರು, ಹಾಡುಗಾರರು ಅಭಿವ್ಯಕ್ತಿಯನ್ನು ಕಟ್ಟಿಕೊಟ್ಟಿದ್ದಾರೆ. ಬಹುರೂಪಿ ಮಾದರಿ ಮೈಸೂರಿಗೆ ಸೀಮಿತವಾಗದೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳು ಅಧ್ಯಯನ ಕೇಂದ್ರಗಳಿಗೂ ತಲುಪಿಸಬೇಕು. ಸಚಿವರು ಬೆಂಬಲ ನೀಡಿದರೆ ನಾವು ಕರ್ನಾಟಕದಾದ್ಯಂತ ಕೊಂಡೊಯ್ಯಲು ಸಿದ್ಧ.

-ಸತೀಶ್ ತಿಪಟೂರು, ರಂಗಾಯಣದ ನಿರ್ದೇಶಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News