×
Ad

ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿಯನ್ನು ಅಪಹರಿಸಿ ಬರ್ಬರ ಹತ್ಯೆ

Update: 2026-05-23 21:50 IST

Photo Credit : thehindu.com

ಕೊಯಮತ್ತೂರು,ಮೇ 23: ಹತ್ತು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ, ಹತ್ಯೆಗೈದ ಆಘಾತಕಾರಿ ಘಟನೆ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಸಂಜೆ ನಾಪತ್ತೆಯಾಗಿದ್ದ ಈ ಬಾಲಕಿಯ ಮೃತದೇಹವು ಸುಲೂರಿನಲ್ಲಿನ ಕನ್ನಂಪಾಳಯಂ ಕೆರೆಯೊಂದರ ಬಳಿ ರಕ್ತ ಸಿಕ್ತ ಗಾಯಗಳೊಂದಿಗೆ ಶುಕ್ರವಾರ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸುಲೂರಿನಲ್ಲಿರುವ ತನ್ನ ಮನೆಯಿಂದ ದಿನಸಿ ತರಲೆಂದು ಬಾಲಕಿಯು ಗುರುವಾರ ಸಂಜೆ ಸಮೀಪದ ಅಂಗಡಿಗೆ ತೆರಳಿದ್ದಾಗ, ಆರೋಪಿಗಳು ಆಕೆಯನ್ನು ಅಪಹರಿಸಿದ್ದಾರೆ ಹಾಗೂ ಬಳಿಕ ಹತ್ಯೆಗೈದಿದ್ದಾರೆಂದು ಪೊಲೀಸರು ಆಪಾದಿಸಿದ್ದಾರೆ. ಆರೋಪಿಗಳನ್ನು ಕಾರ್ತಿಕ್ ಹಾಗೂ ಮೋಹನ್ ರಾಜ್ ಎಂದು ಗುರುತಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ‘‘ಇಂತಹ ಅಕ್ಷಮ್ಯ ಕ್ರಿಮಿನಲ್ ಕೃತ್ಯಗಳನ್ನು ನಮ್ಮ ಸಮಾಜದಲ್ಲಿ ಎಂದೂ ಸಹಿಸಲು ಸಾಧ್ಯವಿಲ್ಲ’’ ಎಂದವರು ಎಕ್ಸ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಘಟನೆಯ ತರುವಾಯ ಬಾಲಕಿಯ ಶೋ ಕತಪ್ತ ತಂದೆ, ತಾಯಿ ಹಾಗೂ ಕುಟುಂಬಿಕರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಬಗ್ಗೆ ಮುಖ್ಯಮಂತ್ರಿ ವಿಜಯ್‌ರಿಂದ ಭರವಸೆ ದೊರೆಯುವ ತನಕ ಶವಾಗಾರದಿಂದ ಮೃತದೇಹವನ್ನು ಪಡೆದುಕೊಳ್ಳಲು ಅವರು ನಿರಾಕರಿಸಿದ್ದಾರೆ.

ತಮಿಳುನಾಡು ಸಚಿವ ಎಂ.ಎಸ್.ಸಂಪತ್, ಸುಲೂರು ಕ್ಷೇತ್ರದ ಟಿವಿಕೆ ಶಾಸಕ ಎನ್.ಎಂ. ಸುಕುಮಾರ್ ಆಸ್ಪತ್ರೆಗೆ ಭೇಟಿ ನೀಡಿದ್ದು,ಸಂತ್ರಸ್ತ ಕುಟುಂಬಿಕರನ್ನು ಸಂತೈಸಿದರು. ಘಟನೆಯ ಬಗ್ಗೆ ತಾನು ಮುಖ್ಯಮಂತ್ರಿ ಜೊತೆ ಮಾತನಾಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಸಚಿವ ಸಂಪತ್ ತಿಳಿಸಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವ ಭರವಸೆಯನ್ನು ಅವರು ನೀಡಿದರು.

ಬಾಲಕಿಯ ಬರ್ಬರ ಹತ್ಯೆಯನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆ ತಡೆ ನಡೆಸಿರುವುದಾಗಿ ವರದಿಯಾಗಿದೆ.

ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕ ಸಂದೀಪ್ ರಾಯ್ ರಾಥೋಡ್ ಅವರು ಕೊಯಮತ್ತೂರಿಗೆ ಧಾವಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ ಪ್ರಕರಣವು ರಾಜಕೀಯ ತಿರುವನ್ನು ಪಡೆದುಕೊಂಡಿದ್ದು, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆಯೆಂದು ಡಿಎಂಕೆ ಪಕ್ಷವು, ನೂತನ ಟಿವಿಕೆ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ.

ಟಿವಿಕೆ ನಾಯಕರು ಸಂತ್ರಸ್ತ ಕುಟುಂಬವನ್ನು ಆಸ್ಪತ್ರೆಗೆ ಭೇಟಿಮಾಡಿದ್ದು, ನ್ಯಾಯದಾನದ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News