PC: @SupriyaShrinate/X

ಹೊಸದಿಲ್ಲಿ, ಸೆ. 3: ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಸಿಜೆಪಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪ್ರತಿಭಟನಾಕಾರರೊಬ್ಬರ ತಂದೆಯ ಮೇಲೆ ತಾನೇ ಮಾರಣಾಂತಿಕ ಹಲ್ಲೆ ನಡೆಸಿದ್ದಾಗಿ ಸ್ವಯಂ ಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್‌ ಹೇಳಿಕೊಂಡಿರುವ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ಮಾತನಾಡಿರುವ ಭಾರದ್ವಾಜ್‌, ನೀಶು ಎಂಬ ಯುವತಿಯ ತಂದೆಯ ತಲೆಯನ್ನು ತಾನೇ ಒಡೆದಿದ್ದಾಗಿ ಹೇಳಿಕೊಂಡಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿಯ ತಲೆಗೆ 60 ಹೊಲಿಗೆಗಳು ಬಿದ್ದಿದ್ದವು ಮತ್ತು ಅವರು ಆಂಬುಲೆನ್ಸ್‌ ನಲ್ಲಿ ಸಾವಿನ ಸ್ಥಿತಿಯಲ್ಲಿದ್ದರು ಎಂದೂ ಆತ ಹೇಳಿದ್ದಾನೆ.

‘ನಾನು ನೀಶು ಅವರ ತಂದೆಯ ತಲೆ ಒಡೆದೆ. ಅದಕ್ಕೆ ಹಾಕಬೇಕಾದ ಕಲಂ ಯಾವುದು ಗೊತ್ತಾ? 307. ಹಾಫ್‌ ಮರ್ಡರ್‌. ಅವರ ತಲೆಗೆ 60 ಹೊಲಿಗೆಗಳು ಬಿದ್ದಿದ್ದವು. ಅವರು ಆಂಬುಲೆನ್ಸ್‌ ನಲ್ಲಿ ಸಾಯುವ ಸ್ಥಿತಿಯಲ್ಲಿದ್ದರು’ ಎಂದು ಭಾರದ್ವಾಜ್‌ ಹೇಳಿಕೊಂಡಿದ್ದಾನೆ.

ತಂದೆಯ ಮೇಲೆ ಹಲ್ಲೆ ನಡೆದ ಬಳಿಕ ನೀಶು ಅವರು ಪೊಲೀಸ್‌ ಠಾಣೆಯ ಮುಂದೆ ನಿಂತು ನ್ಯಾಯ ಸಿಗದಿದ್ದರೆ ವಿಷ ಕುಡಿದು ಸಾಯುವುದಾಗಿ ಅಳುತ್ತಿದ್ದರು ಎಂದು ಭಾರದ್ವಾಜ್ ಹೇಳಿದ್ದಾನೆ.

‘ಆದರೆ ಮರುದಿನವೇ ನಾನು ಹೊರಗಿದ್ದೆ. ನಾನು ಜೈಲಿಗೇ ಹೋಗಲಿಲ್ಲ. ಇಡೀ ರಾತ್ರಿ ಊರೆಲ್ಲಾ ಆರಾಮವಾಗಿ ಸುತ್ತಾಡುತ್ತಿದ್ದೆ’ ಎಂದೂ ಸ್ವಯಂ ಘೋಷಿತ ಘೋಷಿತ ಗೋರಕ್ಷಕ ಭಾರದ್ವಾಜ್‌ ಹೇಳಿಕೊಂಡಿದ್ದಾನೆ.

‘ಕಪಿಲ್‌ ಮಿಶ್ರಾ ನನ್ನ ಅಣ್ಣ’

ತನ್ನ ಬಂಧನವಾಗದಿರುವುದಕ್ಕೆ ರಾಜಕೀಯ ನಾಯಕರ ಬೆಂಬಲವಿದೆ ಎಂಬ ರೀತಿಯಲ್ಲಿಯೂ ಆತ ಮಾತನಾಡಿದ್ದಾನೆ.

‘ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ನನಗೆ ಅಣ್ಣನಿದ್ದಂತೆ. ಕಪಿಲ್‌ ಮಿಶ್ರಾ ಕಡೆಯಿಂದ ಒಂದು ಫೋನ್‌ ಕರೆ ಹೋಯಿತು. ನನ್ನನ್ನು ಬಿಟ್ಟುಬಿಟ್ಟರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ಆತ ಹೇಳಿದ್ದಾನೆ.

‘ಕಪಿಲ್‌ ಮಿಶ್ರಾ ಮಾತ್ರವಲ್ಲ, ಚಿರಾಗ್‌ ಪಾಸ್ವಾನ್‌ ಕೂಡ ನನ್ನ ದೊಡ್ಡಣ್ಣ. ನರೇಂದ್ರ ಮೋದಿಯವರೂ ನನ್ನ ದೊಡ್ಡಣ್ಣನೇ. ಇವರೆಲ್ಲರ ಬೆಂಬಲ ನನಗಿದೆ’ ಎಂದು ಭಾರದ್ವಾಜ್‌ ಹೇಳಿಕೊಂಡಿದ್ದಾನೆ.

*ಸುಪ್ರಿಯಾ ಶ್ರೀನೇತ್‌ ಆಕ್ರೋಶ

ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್‌ ಅವರು ಭಾರದ್ವಾಜ್‌ ಮಾತನಾಡಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈತನೇ ಸ್ವತಂತ್ರ ಭಾರದ್ವಾಜ್‌. ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರೊಬ್ಬರ ತಂದೆಯ ಮೇಲೆ ತಾನೇ ದಾಳಿ ಮಾಡಿದ್ದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾನೆ. ಆ ವ್ಯಕ್ತಿಯ ತಲೆಗೆ 60 ಹೊಲಿಗೆಗಳು ಬಿದ್ದಿದ್ದವು ಮತ್ತು ಅವರು ಸಾವಿನ ಅಂಚಿನಲ್ಲಿದ್ದರು’ ಎಂದು ಶ್ರೀನೇತ್‌ ಹೇಳಿದ್ದಾರೆ.

ಈ ಕೃತ್ಯಕ್ಕೆ ಐಪಿಸಿ ಸೆಕ್ಷನ್‌ 307ರ ಅಡಿಯಲ್ಲಿ ಕೊಲೆಯತ್ನದ ಪ್ರಕರಣ ದಾಖಲಾಗಬೇಕಿತ್ತು. ಆದರೆ ಭಾರದ್ವಾಜ್‌ ಜೈಲಿಗೆ ಹೋಗಲಿಲ್ಲ ಮತ್ತು ಇಡೀ ರಾತ್ರಿ ಯಾವುದೇ ಭಯವಿಲ್ಲದೆ ಸುತ್ತಾಡುತ್ತಿದ್ದ ಎಂದು ಶ್ರೀನೇತ್‌ ಆರೋಪಿಸಿದ್ದಾರೆ.

ಕಪಿಲ್‌ ಮಿಶ್ರಾ ಅವರ ಒಂದು ಫೋನ್‌ ಕರೆಯಿಂದ ತನಗೆ ನಿರಾಳತೆ ಸಿಕ್ಕಿತು ಎಂದು ಭಾರದ್ವಾಜ್‌ ಹೇಳಿಕೊಂಡಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. ಕಪಿಲ್‌ ಮಿಶ್ರಾ ಮತ್ತು ಚಿರಾಗ್‌ ಪಾಸ್ವಾನ್‌ ಮಾತ್ರವಲ್ಲದೆ, ಮೋದಿ ಅವರೂ ತನ್ನ ‘ದೊಡ್ಡಣ್ಣ’ ಮತ್ತು ತನಗೆ ಎಲ್ಲರ ಬೆಂಬಲವಿದೆ ಎಂದು ಭಾರದ್ವಾಜ್‌ ಹೇಳಿಕೊಂಡಿದ್ದಾನೆ ಎಂದು ಶ್ರೀನೇತ್‌ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ಜುಲೈನಲ್ಲಿ ‘ಸಂಸತ್‌ ಚಲೋ’

ಜುಲೈನಲ್ಲಿ CJP ಸಂಘಟನೆಯ ವಿದ್ಯಾರ್ಥಿಗಳು ‘ಸಂಸತ್‌ ಚಲೋ’ ನಡೆಸಿದ್ದರು. ಈ ಸಂದರ್ಭದಲ್ಲಿ ಜಂತರ್‌ ಮಂತರ್‌ನಲ್ಲಿ ಹಿಂದುತ್ವ ಕಾರ್ಯಕರ್ತರು ಕೂಡ ಜಮಾಯಿಸಿದ್ದರು.

ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾಕಾರರು ಮತ್ತು ಹಿಂದುತ್ವ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಸಿವಿಲ್‌ ಉಡುಪಿನಲ್ಲಿದ್ದ ಪೊಲೀಸರು ಹಾಗೂ ಬಲಪಂಥೀಯ ಕಾರ್ಯಕರ್ತರು ಪ್ರತಿಭಟನಾಕಾರರ ಮೇಲೆ ಲಾಠಿ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

ಆ ಸಂದರ್ಭದಲ್ಲಿ ನೀಶು ಅವರು ರಕ್ತಸಿಕ್ತ ಸ್ಥಿತಿಯಲ್ಲಿದ್ದ ತಮ್ಮ ತಂದೆಯನ್ನು ರಕ್ಷಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದರು. ನ್ಯಾಯ ಸಿಗದಿದ್ದರೆ ವಿಷ ಕುಡಿದು ಸಾಯುವುದಾಗಿ ಹೇಳಿ ಪೊಲೀಸ್‌ ಠಾಣೆಯ ಮುಂದೆ ಕಣ್ಣೀರಿಟ್ಟಿದ್ದರು ಎಂದು ವರದಿಯಾಗಿದೆ.

ಸಿಜೆಪಿ ವಕ್ತಾರ ಸೌರವ್‌ ದಾಸ್‌ ಅವರು ಸ್ವತಂತ್ರ ಭಾರದ್ವಾಜ್‌ ನ ಹೆಸರನ್ನು ಉಲ್ಲೇಖಿಸಿ, ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು.

ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು CJP ಆರೋಪಿಸಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor