NEET UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಸರಕಾರ-NTA ಹೇಳಿಕೆಗಳಲ್ಲಿ ಗೊಂದಲ
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಎನ್ಟಿಎ ಡಿಜಿ ಅಭಿಷೇಕ್ ಸಿಂಗ್ | Photo credit : indiatoday
ಹೊಸದಿಲ್ಲಿ, ಮೇ 22: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕೇಂದ್ರ ಸರಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿರುವ ಹೇಳಿಕೆಗಳಲ್ಲಿ ಕಂಡುಬಂದಿರುವ ವ್ಯತ್ಯಾಸ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಉಂಟುಮಾಡಿದೆ.
ಮೇ 21ರಂದು ಸಂಸದೀಯ ಸಮಿತಿಯ ಮುಂದೆ ಹಾಜರಾದ NTA ಮಹಾನಿರ್ದೇಶಕ ಅಭಿಷೇಕ್ ಸಿಂಗ್, ನೀಟ್ ಪ್ರಶ್ನೆಪತ್ರಿಕೆ ‘ವ್ಯವಸ್ಥೆಯ ಮೂಲಕ ಸೋರಿಕೆಯಾಗಿಲ್ಲ’ ಎಂದು ಹೇಳಿರುವುದಾಗಿ ವರದಿಯಾಗಿದೆ. ಆದರೆ, ಕೆಲವೇ ದಿನಗಳ ಹಿಂದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ‘ಪರೀಕ್ಷಾ ಪ್ರಕ್ರಿಯೆಯ ಸರಪಳಿಯಲ್ಲಿ ಉಲ್ಲಂಘನೆ ನಡೆದಿದೆ’ ಎಂದು ಒಪ್ಪಿಕೊಂಡಿದ್ದರು. ಈ ವೈಫಲ್ಯದ ಹೊಣೆಗಾರಿಕೆಯನ್ನು ಸರಕಾರವೇ ವಹಿಸಿಕೊಳ್ಳುತ್ತದೆ ಎಂದು ಹೇಳಿದ್ದರು.
ಪರೀಕ್ಷಾ ಪ್ರಕ್ರಿಯೆಯಲ್ಲೇ ಉಲ್ಲಂಘನೆ ನಡೆದಿದೆ ಎಂದಾದರೆ, ಪ್ರಶ್ನೆಪತ್ರಿಕೆ ‘ವ್ಯವಸ್ಥೆಯ ಮೂಲಕ ಸೋರಿಕೆಯಾಗಿಲ್ಲ’ ಎಂಬ ಎನ್ಟಿಎ ಹೇಳಿಕೆಯ ಅರ್ಥವೇನು ಎಂಬ ಚರ್ಚೆ ಆರಂಭವಾಗಿದೆ.
ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರಕಾರ, ಪರೀಕ್ಷಾ ವ್ಯವಸ್ಥೆ ಎಂದರೆ ಕೇವಲ ಕಂಪ್ಯೂಟರ್ ಸರ್ವರ್ ಅಥವಾ ಡಿಜಿಟಲ್ ವ್ಯವಸ್ಥೆಯಲ್ಲ. ಪ್ರಶ್ನೆಪತ್ರಿಕೆಯ ಮುದ್ರಣ, ಪ್ಯಾಕಿಂಗ್, ಸಾಗಣೆ, ಸಂಗ್ರಹಣೆ, ವಿತರಣೆ ಮತ್ತು ಭದ್ರತೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯೂ ಅದರ ಭಾಗವಾಗಿದೆ.
ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಬಿಐ ತನಿಖೆ ಮತ್ತು ಹಲವು ಬಂಧನಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೂ, ಎನ್ಟಿಎ ತನ್ನ ಡಿಜಿಟಲ್ ವ್ಯವಸ್ಥೆಯಿಂದ ಸೋರಿಕೆ ನಡೆದಿಲ್ಲ ಎಂಬುದನ್ನೇ ಮುಖ್ಯವಾಗಿ ಒತ್ತಿ ಹೇಳುತ್ತಿರುವುದು ಅನುಮಾನ ಹೆಚ್ಚಿಸಿದೆ.
ವಿದ್ಯಾರ್ಥಿಗಳ ಅಭಿಪ್ರಾಯದಲ್ಲಿ, ಪ್ರಶ್ನೆಪತ್ರಿಕೆ ಎಲ್ಲಿಂದ ಸೋರಿಕೆಯಾಯಿತು ಎಂಬ ತಾಂತ್ರಿಕ ವಿವರಣೆಗಿಂತ, ಅದು ಪರೀಕ್ಷೆಗೆ ಮುನ್ನ ಹೊರಬಂದಿತೇ ಇಲ್ಲವೇ ಎಂಬುದೇ ಮುಖ್ಯವಾಗಿದೆ.
ಸಿಬಿಐ ಈಗಾಗಲೇ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿಯನ್ನು ಬಂಧಿಸಿದ್ದು, ಆತನನ್ನು ಪ್ರಕರಣದ ಪ್ರಮುಖ ಆರೋಪಿಯೆಂದು ಗುರುತಿಸಿದೆ. ಪರೀಕ್ಷೆಗೆ ಮುನ್ನ ರಸಾಯನಶಾಸ್ತ್ರ ಪ್ರಶ್ನೆಗಳು ಹಲವು ರಾಜ್ಯಗಳಲ್ಲಿ ಹಣಕ್ಕಾಗಿ ಹಂಚಿಕೆ ಮಾಡಲಾಗಿದ್ದವು ಎಂಬ ಆರೋಪಗಳೂ ಕೇಳಿಬಂದಿವೆ.
ಈ ನಡುವೆ, ಭವಿಷ್ಯದಲ್ಲಿ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ ನಡೆಸುವ ಸಾಧ್ಯತೆಯನ್ನೂ ಕೇಂದ್ರ ಸರಕಾರ ಪರಿಶೀಲಿಸುತ್ತಿದೆ. ಇದರಿಂದ ಈಗಿನ ವ್ಯವಸ್ಥೆಯಲ್ಲಿ ದುರ್ಬಲತೆಗಳಿವೆ ಎಂಬ ಚರ್ಚೆಗೆ ಮತ್ತಷ್ಟು ಬಲ ಸಿಕ್ಕಿದೆ.
ಪ್ರಸ್ತುತ ವಿವಾದವು ಕೇವಲ ಪ್ರಶ್ನೆಪತ್ರಿಕೆ ಸೋರಿಕೆಯ ವಿಚಾರವಾಗಿರದೆ, ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿಯೂ ಪರಿಣಮಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಪರೀಕ್ಷಾ ಪ್ರಕ್ರಿಯೆಯ ಮೇಲಿನ ನಂಬಿಕೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.