Ayodhya Ram Mandir | ದಾನ ಮಾಡಿದ್ದ 5 ಕೋಟಿ ರೂ. ಮೌಲ್ಯದ ಚಿನ್ನದ ಲೇಪಿತ ರಾಮಚರಿತ ಮಾನಸ ನಾಪತ್ತೆ: ಮಾಜಿ IAS ಅಧಿಕಾರಿಯಿಂದ ಆರೋಪ
ಅಯೋಧ್ಯೆ: ತಮ್ಮ ಕುಟುಂಬವು ದಾನ ಮಾಡಿದ್ದ ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನದ ಲೇಪಿತ ರಾಮಚರಿತ ಮಾನಸ ಪ್ರತಿಯನ್ನು ರಾಮ ಮಂದಿರದ ನಾಪತ್ತೆಯಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣನ್ ಆರೋಪಿಸಿದ್ದಾರೆ. ಆದರೆ, ದೇವಾಲಯಕ್ಕೆ ಸಲ್ಲಿಕೆಯಾಗುವ ಪ್ರತಿಯೊಂದು ಕಾಣಿಕೆಯನ್ನು ಮಂದಿರದಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣನ್ ಅವರು ಬಹಿರಂಗವಾಗಿ ಈ ಆರೋಪ ಮಾಡಿದ್ದು, ತಮ್ಮ ಕುಟುಂಬವು 2024ರ ಎಪ್ರಿಲ್ ನಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಚಿನ್ನದ ಲೇಪಿತ ರಾಮಚರಿತ ಮಾನಸ ಪ್ರತಿಯನ್ನು ದಾನ ಮಾಡಿತ್ತು ಎಂದು ತಿಳಿಸಿದ್ದಾರೆ. ಬಳಿಕ ಆ ಧಾರ್ಮಿಕ ಗ್ರಂಥವನ್ನು ದೇವಾಲಯದ ಆವರಣದಿಂದ ಸ್ಥಳಾಂತರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ದೇವಾಲಯಕ್ಕೆ ನೀಡಲಾಗುವ ಪ್ರತಿಯೊಂದು ಕಾಣಿಕೆಯನ್ನು ಮಂದಿರದಲ್ಲಿ ಪ್ರದರ್ಶಿಸುವುದು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಲಕ್ಷ್ಮಿನಾರಾಯಣನ್ ತಿಳಿಸಿದ್ದಾರೆ.
ಬೆಳ್ಳಿ ದೇಣಿಗೆ ವಿವಾದ
ಇದಕ್ಕೂ ಮುನ್ನ, ರಾಮ ಮಂದಿರಕ್ಕೆ ದಾನವಾಗಿ ನೀಡಲಾಗಿದ್ದ ದೊಡ್ಡ ಪ್ರಮಾಣದ ಬೆಳ್ಳಿ ಬಾರ್ ಗಳು ಮತ್ತು ಬೆಳ್ಳಿ ಇಟ್ಟಿಗೆಗಳು ಕಣ್ಮರೆಯಾಗಿವೆ ಎಂಬ ಆರೋಪದ ಕುರಿತು ವಿರೋಧ ಪಕ್ಷಗಳು ಹಾಗೂ ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (ಐಬಿಜೆಎ) ಆರೋಪಿಸಿದ್ದವು.
ದೇವಾಲಯ ನಿರ್ಮಾಣ ಪ್ರಕ್ರಿಯೆಯ ಸಂದರ್ಭದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ದಾನ ಮಾಡಿದ್ದ 4 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯೂ ಈ ವಿವಾದದಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಸುಮಾರು 200 ಕೆಜಿ ತೂಕದ ಬೆಳ್ಳಿ ಬಾರ್ಗಳು ಕಳವಾಗಿವೆ ಎಂಬ ಊಹಾಪೋಹವನ್ನು ತಳ್ಳಿಹಾಕಿದೆ.
ಕದ್ದ ಆಭರಣಗಳನ್ನು ಕರಗಿಸಿರುವ ಶಂಕೆ
ರಾಮ ಮಂದಿರದಲ್ಲಿ ದೇಣಿಗೆಗಳ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ಎಸ್ಐಟಿ, ದೇವಾಲಯದಿಂದ ಕಳುವಾಗಿರುವ ಚಿನ್ನದ ಆಭರಣಗಳನ್ನು ಅವುಗಳ ಗುರುತನ್ನು ಅಳಿಸುವ ಉದ್ದೇಶದಿಂದ ಕರಗಿಸಿ ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಲಾಗಿದೆಯೇ ಎಂಬ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು india today tvಗೆ ತಿಳಿಸಿವೆ.
ಮೂಲ ಆಭರಣಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗುವಂತೆ ಆರೋಪಿಗಳು ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕರಗಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಕಳ್ಳತನಕ್ಕೆ ಸಂಬಂಧಿಸಿದಂತೆ ಕಾಣೆಯಾಗಿರುವ ಆಭರಣಗಳನ್ನು ಪತ್ತೆಹಚ್ಚಲು ನಡೆಸಲಾದ ಹಲವು ಶೋಧ ಕಾರ್ಯಾಚರಣೆಗಳು ವಿಫಲವಾದ ಬಳಿಕ ಈ ಅನುಮಾನ ಮತ್ತಷ್ಟು ಬಲಗೊಂಡಿದೆ.
ದೇಣಿಗೆ ಎಣಿಕೆಯಲ್ಲಿ ಪಾತ್ರವಿಲ್ಲ: ಖಜಾಂಚಿ
ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ವಿವಾದದ ನಡುವೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ಈ ಕುರಿತು ಮೌನ ಮುರಿದು ಎರಡು ಪುಟಗಳ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ದೇಣಿಗೆಗಳ ಎಣಿಕೆ ಪ್ರಕ್ರಿಯೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಪ್ರಕರಣದ ಕುರಿತು ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ದೇವಾಲಯದ ದೇಣಿಗೆಗಳ ದುರುಪಯೋಗವನ್ನು "ನಂಬಲಾಗದ ಘಟನೆ" ಎಂದು ಹೇಳಿರುವ ಗಿರಿ, ಇದು ಭಗವಾನ್ ರಾಮನ ಭಕ್ತರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ದೇಣಿಗೆ ಕಳ್ಳತನವು ದೀರ್ಘಕಾಲದಿಂದ ನಡೆಯುತ್ತಿರಬಹುದು ಎಂಬ ವರದಿಗಳು ಭಕ್ತರಿಗೆ ಅತ್ಯಂತ ನೋವುಂಟು ಮಾಡಿವೆ ಎಂದೂ ಅವರು ತಿಳಿಸಿದ್ದಾರೆ.
ಭದ್ರತಾ ಕ್ರಮ ಬಿಗಿ
ದೇಣಿಗೆಗಳ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮ ಮಂದಿರದ ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ಜಾರಿಗೊಳಿಸಿದೆ. ಭದ್ರತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಲವು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪರಿಷ್ಕೃತ ನಿಯಮಾವಳಿಗಳ ಪ್ರಕಾರ, ದೇಣಿಗೆ ಎಣಿಕೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನು ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಎರಡು ಹಂತದ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಅಲ್ಲದೆ, ಸಿಬ್ಬಂದಿಗೆ ಹೊಸ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದ್ದು, ನಗದು ಅಥವಾ ಬೆಲೆಬಾಳುವ ವಸ್ತುಗಳನ್ನು ಮರೆಮಾಡುವ ಸಾಧ್ಯತೆಯನ್ನು ತಡೆಯಲು ಪಾಕೆಟ್ಗಳಿಲ್ಲದ ಕಡು ನೀಲಿ ಬಣ್ಣದ ಸಮವಸ್ತ್ರ ಧರಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ, ಅಮಿತ್ ಶಾ ಮೌನ ಏಕೆ?: ಕಾಂಗ್ರೆಸ್ ಪ್ರಶ್ನೆ
ಅಯೋಧ್ಯೆಯ ರಾಮ ಮಂದಿರಕ್ಕೆ ಸಲ್ಲಿಕೆಯಾಗಿರುವ ದೇಣಿಗೆಗಳ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಈ ಪ್ರಕರಣವನ್ನು 'ಘೋಟಾಲಾ' ಹಾಗೂ ಬಿಜೆಪಿ-ಆರ್ಎಸ್ಎಸ್ ವ್ಯವಸ್ಥೆಯ 'ಹಗರಣ' ಎಂದು ಹೇಳಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಿಚಾರದಲ್ಲಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದೆ.
ರಾಮ ಮಂದಿರದ ದೇಣಿಗೆ ದುರುಪಯೋಗದ ಆರೋಪಗಳು ಜೂನ್ 7ರಂದು ಬೆಳಕಿಗೆ ಬಂದಿದ್ದವು. ಬಳಿಕ, ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿ ಆಧರಿಸಿ ಜೂನ್ 25ರಂದು ಎಫ್ಐಆರ್ ದಾಖಲಿಸಲಾಗಿದೆ.
ಇದೇ ವೇಳೆ, ದೇವಾಲಯದಿಂದ ಕಳುವಾಗಿರುವ ಚಿನ್ನದ ಆಭರಣಗಳನ್ನು ಕರಗಿಸಿ ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಲಾಗಿದೆಯೇ ಎಂಬ ಕುರಿತು ಎಸ್ಐಟಿ ತನಿಖೆಯನ್ನು ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.
ಸೌಜನ್ಯ: indiatoday.in