24 ಜನವರಿ, 2000. ರಾತ್ರಿ 9.45...

Update: 2024-01-20 06:22 GMT

ಇಪ್ಪತ್ತೈದು ವರ್ಷಗಳು ಉರುಳಿವೆ; ಆ ರಾತ್ರಿಯ ಕೊನೆಯ ವಿದಾಯದ ದೃಶ್ಯ ಮಾತ್ರ ಮೊನ್ನೆ ತಾನೇ ನಡೆದಂತೆ ನನ್ನ ಕಣ್ಣೆದುರು ಹಾಗೇ ಇದೆ. ಒಂಭತ್ತೂವರೆಯ ಸುಮಾರಿಗೆ ಅವರು ತಮ್ಮ ಕಚೇರಿಯ ಕುರ್ಚಿ ಬಿಟ್ಟು ಮೇಲೆದ್ದರು. ಎಡಗೈಲಿ ಚರ್ಮದ ಹ್ಯಾಂಡ್ ಬ್ಯಾಗ್ ಹಿಡಿದಿದ್ದ ಅವರು ತಮ್ಮ ಟೇಬಲ್ಲಿನ ಮೇಲಿದ್ದ ಪುಸ್ತಕವೊಂದಕ್ಕೆ ಕೈ ಹಾಕಿದರು. ಅದು ಅವರ ಆ ರಾತ್ರಿಯ ‘ಬೆಡ್ ಸೈಡರ್’ ಆಗಲಿತ್ತೇನೋ.

ಅವರಿಗಿಂತ ಎರಡು ಗಳಿಗೆ ಮೊದಲು ಆಫೀಸಿನ ಮೆಟ್ಟಲಿನಿಂದ ಕೆಳಗಿಳಿದ ನಾನು ಬೈಕ್ ಹತ್ತುವ ಮುನ್ನ ಅವರು ಕೆಳಗಿಳಿದು ಬರುವುದನ್ನು ಸುಮ್ಮನೆ ನೋಡುತ್ತಾ ನಿಂತೆ. ಅವರು ಕೊಂಚ ತಡವರಿಕೆಯ ಹೆಜ್ಜೆ ಇಡುತ್ತಲೇ ಮೆಟ್ಟಲಿಳಿಯುತ್ತಾ, ‘ಬರ್ಲೇನೋ’ ಎಂದು ಕೊರಗುವ ದನಿಯಲ್ಲಿ ಹೇಳಿದರು. ‘ಹೂಂ ಸಾರ್’ ಅಂದೆ.

ಇಸವಿ 2000. ಜನವರಿ 24. ರಾತ್ರಿ: 9.45.

‘ಬರ್ಲೇನೋ?’ ಎಂದ ಅವರು ಬರಲಿಲ್ಲ. ಪಿ. ಲಂಕೇಶ್ ಇನ್ನು ಮರಳಿ ಬರುವುದಿಲ್ಲ ಎಂಬ ಸುದ್ದಿಯನ್ನು ಬೆಳಗ್ಗೆ ಫೋನ್ ಮಾಡಿ ಹೇಳಿದವರು ಕವಿ ಚಿಂತಾಮಣಿ ಕೊಡ್ಲೆಕೆರೆ.

‘ಇಂತಿ ನಮಸ್ಕಾರಗಳು: ಲಂಕೇಶ್-ಡಿ. ಆರ್. ನಾಗರಾಜ್ ಕುರಿತ ಸಾಂಸ್ಕೃತಿಕ ಕಥಾನಕ’ ಎಂಬ ನನ್ನ ಪುಸ್ತಕದಲ್ಲಿ ದಾಖಲಾಗಿರುವ ಆ ಕೊನೆಯ ರಾತ್ರಿಯ ಗಳಿಗೆಗಳನ್ನು ಅಕಸ್ಮಾತ್ ಓದಿರುವವರಿಗೆ ಮುಂದೆ ಕೊಟ್ಟಿರುವ ಕೆಲವು ವಿವರಗಳು ನೆನಪಿರಬಹುದು:

‘24 ಜನವರಿ. ಸೋಮವಾರ. ಅದು ಲಂಕೇಶ್ ಪತ್ರಿಕೆಯ ಹೊಸ ಸಂಚಿಕೆಯ ತಯಾರಿಯ ದಿನ. ನಾನು ಸಾಮಾನ್ಯವಾಗಿ ಸೋಮವಾರಗಳಂದು ಸಂಪಾದಕರನ್ನು ನೋಡುತ್ತಿರಲಿಲ್ಲ. ಆದರೆ ಅವತ್ತು ಮಾತ್ರ ಹೋಗಲೋ ಬೇಡವೋ ಎಂದು ಅರೆಮನಸ್ಸಿನಿಂದಲೇ ಅವರ ಛೇಂಬರಿನೊಳಕ್ಕೆ ಅಡಿಯಿಟ್ಟೆ. ಸಂಪಾದಕರು ಟೆಲಿವಿಷನ್ನಿನೆದುರು ಕೂತಿದ್ದರು. ‘ಬಾ’ ಎನ್ನುವಂತೆ ಸುಮ್ಮನೆ ಕತ್ತು ಹಾಕಿ ಮತ್ತೆ ತಮ್ಮ ಕೋಶದೊಳಗೆ ಹೂತು ಹೋದರು. ವೀಡಿಯೊದಲ್ಲಿ ಅವರ ಮೆಚ್ಚಿನ ಚಿತ್ರವಾದ ‘ಪ್ರೈಡ್ ಆ್ಯಂಡ್ ಪ್ರಿಜುಡೀಸ್’ನ ದೃಶ್ಯಗಳು ತೇಲಿ ಹೋಗುತ್ತಿದ್ದವು. ಮಾತಾಡುವುದನ್ನು ತಪ್ಪಿಸಿಕೊಳ್ಳಲೆಂದೋ ಏನೋ ಅವರು ಸಿನೆಮಾದಲ್ಲೇ ಮುಳುಗಿಬಿಟ್ಟರು. ಅವರಿಗೆ ಪ್ರಿಯವಾದ ಲಿಟರರಿ ಗಾಸಿಪ್ಪಿಗೆ ಎಳೆದರೆ ಅವರು ಕೊಂಚ ಹೊರ ಬರುತ್ತಾರೆ ಎನ್ನಿಸಿ, ‘ದೇಜಗೌ ‘ಪ್ರೈಡ್ ಆ್ಯಂಡ್ ಪ್ರಿಜುಡೀಸ್’ ಕಾದಂಬರಿಯನ್ನು ‘ಹಮ್ಮು-ಬಿಮ್ಮು’ ಎಂದು ಅನುವಾದಿಸಿದ್ದಾರಲ್ಲ!’ ಎಂದೆ. ತಕ್ಷಣ ಅವರು ದೇಜಗೌ ಬಳಸುವ ಕನ್ನಡದ ವೈಖರಿ ನೆನೆದು ನಕ್ಕರು. ‘ಆ ದೇಜಗೌಗೆ ಅನುವಾದ ಎನ್ನುವುದು ಕಾಟೇಜ್ ಇಂಡಸ್ಟ್ರೀ ಥರ. ಆತ ‘ಅನ್ನಾ ಕರೇನಿನಾ’, ‘ವಾರ್ ಆ್ಯಂಡ್ ಪೀಸ್’ ಎಲ್ಲವನ್ನೂ ಕೊಲೆ ಮಾಡಿದಂತಿದೆ!’ ಎಂದು ಮುಗುಳ್ನಕ್ಕರು.

ಅವತ್ತು ಲಂಕೇಶರು ಎಂದಿಗಿಂತ ಮುಂಚೆಯೇ ಮೇಲೆದ್ದು ಆ ರಾತ್ರಿ ಓದುವ ಪುಸ್ತಕಗಳನ್ನು ಆಯ್ದುಕೊಂಡರು. ಆಗ ಅವರ ಟೇಬಲ್ ಮೇಲಿದ್ದ ಪುಸ್ತಕವೊಂದಕ್ಕೆ ನಾನೂ ಕೈ ಹಾಕಿದೆ. ಅವರೂ ಕೈ ಹಾಕಿದರು. ಅದು ಡಿ.ಎನ್. ಶಂಕರಭಟ್ಟರ ‘ಕನ್ನಡ ಶಬ್ದರಚನೆ’ ಎಂಬ ಪುಸ್ತಕ. ನಾನು, ‘ಇಂಥ ಪುಸ್ತಕಗಳನ್ನೆಲ್ಲಾ ನೀವು ಓದುವುದಿಲ್ಲವೆಂದು ತಿಳಿದಿದ್ದೆನಲ್ಲ!’ ಎಂದೆ. ‘ನೋ, ನೋ, ಭಟ್ಟ ಬಾಳಾ ಚೆನ್ನಾಗಿ ಬರೀತಾನೆ’ ಎನ್ನುತ್ತಾ ಪುಸ್ತಕವನ್ನು ಕಾರಿನಲ್ಲಿಡಲು ಡ್ರೈವರ್ ರೇವಣ್ಣನಿಗೆ ಹೇಳಿದರು. ನಾನು ಪತ್ರಿಕೆಯ ಆಫೀಸಿನ ಮೆಟ್ಟಲಿಳಿದು ಬೈಕ್ ಹತ್ತಿ ಯಾಕೋ ಹಿಂದಿರುಗಿ ನೋಡಿದೆ: ಎಂದಿನಂತೆ ಜಾರುತ್ತಿದ್ದ ಪ್ಯಾಂಟನ್ನು ಮೇಲೆಳೆದುಕೊಳ್ಳುತ್ತಾ ಅಸ್ಥಿರವಾದ ಹೆಜ್ಜೆಗಳನ್ನಿಡುತ್ತಾ ಅವರು ಕಾರಿನ ಬಳಿ ಬರುತ್ತಿದ್ದುದನ್ನು ಕಂಡು ಪಿಚ್ಚೆನ್ನಿಸಿ ಕತ್ತಲಲ್ಲಿ ಕರಗಿದೆ.

ಇದಾದ ಕೆಲವು ವರ್ಷ ಗೆಳೆಯ ಬಸವರಾಜು ಪ್ರತೀ ವರ್ಷ ಜನವರಿ 24ರ ರಾತ್ರಿ ಪೋನ್ ಮಾಡಿ, ‘ಬನ್ನಿ! ಮೇಷ್ಟ್ರ ಹೆಸರಲ್ಲಿ ಒಂದು ಸ್ಮಾಲ್ ಹಾಕೋಣ!’ ಎನ್ನುತ್ತಿದ್ದರು. ವರ್ಷಗಳುರುಳಿದಂತೆ ಆ ದಿನಾಂಕವೂ ಮರೆತು ಹೋಗತೊಡಗಿತು. ಲಂಕೇಶರನ್ನಾಗಲೀ, ಲಂಕೇಶರ ಪತ್ರಿಕೆಯನ್ನಾಗಲೀ ಎಂದೂ ನೋಡದ ಹೊಸ ತಲೆಮಾರಿನ ಗೆಳೆಯ ಶೈಲೇಶ್ ಈಚೆಗೆ ಲಂಕೇಶರ ಬಗ್ಗೆ ಅಭಿಮಾನದಿಂದ ಮಾತಾಡುತ್ತಿದ್ದಾಗ ಇಪ್ಪತ್ತೈದು ವರ್ಷಗಳ ಹಿಂದಿನ ರಾತ್ರಿಯ ವಿವರಗಳು ಒಂದರ ಹಿಂದೊಂದರಂತೆ ನೆನಪಾದವು. ಲಂಕೇಶ್ ಕೃತಿಗಳು ಇವತ್ತಿಗೂ ಬೆಳೆಯುತ್ತಿರುವ ರೀತಿಗೆ ಹೊಸ ತಲೆಮಾರಿನ ಶೈಲೇಶ್ ಥರದವರನ್ನು ಲಂಕೇಶ್ ಕೃತಿಗಳು ಹಿಡಿದಿಟ್ಟಿರುವ ಬಗೆ ಒಳ್ಳೆಯ ಉದಾಹರಣೆ. ಶೈಲೇಶ್ ಯಾರು, ಎತ್ತ ನನಗೆ ತಿಳಿಯದು. ಅವರು ಕಂಪೆನಿಯೊಂದರ ಉದ್ಯೋಗಿ, ಸಾಹಿತ್ಯದ ಸೂಕ್ಷ್ಮ ಓದುಗ. ಇವಿಷ್ಟೇ ನನ್ನ-ಅವರ ನಂಟು.

ಲೇಖಕನೊಬ್ಬ ತೀರಿಕೊಂಡ ಮೇಲೆ ಅವನ ಕೃತಿಗಳು ಬೆಳೆಯುವ, ಬೆಳೆಯದಿರುವ ಬಗ್ಗೆ ಮುಂದೊಮ್ಮೆ ಈ ಅಂಕಣದಲ್ಲಿ ಚರ್ಚಿಸಬಹುದು. ಆದರೆ ಲಂಕೇಶರ ಕೃತಿಗಳ ಜೀವಂತ ಗುಣದಿಂದ ಹೊಸ ಉಸಿರು ಪಡೆದವರು ಅವರನ್ನು ಇನ್ನೊಬ್ಬರಿಗೆ ದಾಟಿಸುತ್ತಾ ಹೋಗುವ ರೀತಿಯನ್ನು ನಾನು ಸದಾ ಕಂಡಿರುವೆ. ಇವತ್ತಿಗೂ ಯಾರಾದರೂ ಬರವಣಿಗೆಯ ಕಲೆ ಕಲಿಯುವ ಬಗ್ಗೆ, ಅದರಲ್ಲೂ ಗದ್ಯ ಬರವಣಿಗೆ ಕಲಿಯುವ ಬಗ್ಗೆ, ನನ್ನನ್ನು ಕೇಳಿದರೆ ನಾನು ಸೂಚಿಸುವುದು ಲಂಕೇಶರ ಗದ್ಯವನ್ನೇ. ಕನ್ನಡದಲ್ಲಿ ಸುಮ್ಮನೆ ಏನಾದರೂ ಓದಬೇಕೆನ್ನಿಸಿದಾಗ ನನ್ನ ಕೈ ತಂತಾನೇ ಹೋಗುವುದು ಲಂಕೇಶರ ಪುಸ್ತಕಗಳ ಕಡೆಗೆ. ಅಲ್ಲಿ ಯಾವ ಪುಟ ತೆಗೆದರೂ ಜೀವ ಸ್ಪರ್ಶವಾಗದ ಭಾಗವೇ ಇಲ್ಲ! ಈಚೆಗೆ ಇತಿಹಾಸ ಬರವಣಿಗೆ ಕುರಿತು ನಾನೊಂದು ಕತೆ ಬರೆದಾಗ, ‘ಮೊನ್ನೆ ಮೊನ್ನೆ ತಾನೇ ಲಂಕೇಶ್, ‘ದಾಳಿ’ ಎನ್ನುವ ಐತಿಹಾಸಿಕ ಕತೆಯನ್ನೇ ಅವರ ಎಂದಿನ ಕತೆಗಳ ಭಾಷೆಯಲ್ಲೇ, ಸಹಜವಾಗೇ, ಬರೆದಿದ್ದಾರಲ್ಲ!’ ಎಂಬ ಡಯಲಾಗ್ ಕಥಾ ಪಾತ್ರದ ಬಾಯಲ್ಲಿ ಇದ್ದಕ್ಕಿದ್ದಂತೆ ಬಂತು!

ಕಳೆದ ವರ್ಷ ಕುವೆಂಪು ಯೂನಿವರ್ಸಿಟಿಯಲ್ಲಿ ಹುಡುಗ, ಹುಡುಗಿಯರಿಗಾಗಿ ಲಂಕೇಶ್ ಕಮ್ಮಟ ನಡೆಸುತ್ತಿದ್ದಾಗ ಅವರ ಕತೆಗಳ ಹೊಸ ಅರ್ಥಗಳು ಚಿಮ್ಮತೊಡಗಿದ್ದವು. ಲಂಕೇಶರ ಆರಂಭದ ಕತೆಗಳಲ್ಲೊಂದಾದ ‘ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ’ ಹುಡುಗನೊಬ್ಬ ಸ್ಕಾಲರ್ ಶಿಪ್ ಹಣ ಪಡೆಯಲು ನಡೆಸಿದ ಅವಮಾನ-ಅಸಹಾಯಕತೆಗಳ ‘ಯಾತ್ರೆ’ ಎಂಬಂತೆ ಮೇಲುನೋಟಕ್ಕೆ ಕಾಣುತ್ತದೆ; ಆದರೆ ಇದು ಹುಡುಗನೊಬ್ಬ ತನ್ನ ಕಾಮಲೋಕದ ಸಂಕೀರ್ಣ ಸ್ಥಿತಿಯ ಬಗ್ಗೆ ಜ್ಞಾನ (ಸ್ಕಾಲರ್ ಶಿಪ್) ಪಡೆದುಕೊಳ್ಳುವ ಒಳಲೋಕದ ಯಾತ್ರೆ ಎನ್ನುವುದು ನಿಧಾನಕ್ಕೆ ಅರ್ಥವಾಗಿತೊಡಗುತ್ತದೆ! ಇದು ಲಂಕೇಶ್ ಬರಹಗಳು ನಿತ್ಯ ಬೆಳೆಯುವ ರೀತಿ.

ಮೊನ್ನೆ ತಾನೇ ಮಠವೊಂದರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತಾಡುತ್ತಿರುವಾಗ, ‘ಮನುಷ್ಯ ಬಾಯಿ ಬಿಟ್ಟೊಡನೆ ಒಂದು ಸುಳ್ಳಾಡಿರ್ತಾನೆ’ ಎಂಬ ‘ಕಲ್ಲು ಕರಗುವ ಸಮಯ’ ಕತೆಯ ಸ್ವಾಮೀಜಿಯ ಸಾಲು ನನ್ನ ಬಾಯಿಂದ ಹಠಾತ್ತನೆ ಬಂತು. ಧರ್ಮಗಳ ನಡುವೆ ಜಗಳ ತಂದು ಹಾಕುವವರ ಬಗ್ಗೆ ಮಾತಾಡುತ್ತಿರುವಾಗ ‘ಇಟ್ಟಿಗೆ ಪವಿತ್ರವಲ್ಲ; ಜೀವ ಪವಿತ್ರ’ ಎಂಬ ಲಂಕೇಶರ ಗಾಂಧಿಯನ್ ಹೇಳಿಕೆ ನನ್ನ ಬಾಯಿಂದ ಬರುತ್ತದೆ. ಲಂಕೇಶರ ಬಹುತೇಕ ಎಲ್ಲ ಬರಹಗಳನ್ನೂ ಓದಿ ಮೂಡಿದ ಅರಿವಿನೆದುರು ಕೃತಜ್ಞತೆ ಉಕ್ಕುತ್ತದೆ.

1978ರ ಕೊನೆಯ ಭಾಗದಲ್ಲೊಂದು ದಿನ ಹುಳಿಯಾರ್ ಎಂಬ ನಮ್ಮೂರಿನ ನನ್ನ ಪುಟ್ಟ ರೂಮಿನ ಗೋಡೆಯ ಮೇಲೆ ‘ರೂಪತಾರಾ’ ಸಿನೆಮಾಪತ್ರಿಕೆಯ ಪುಟಗಳಿಂದ ಹೊರ ಸೆಳೆದು, ಮನೆಯಲ್ಲಿದ್ದ ಯಾರದೋ ಹಳೆಯ ಫೋಟೊದ ಕಟ್ಟು ಗಾಜು ತೆಗೆದು, ಅಂಟು ಹಾಕಿದ ಹೊಳೆವ ಹಾಳೆಯ ಫೋಟೊ ಆಗಿ ತೂಗಿದ್ದ ಲಂಕೇಶರ ಕಪ್ಪು ಬಿಳುಪು ಚಿತ್ರ ಕಣ್ಣ ಮುಂದೆ ಬರುತ್ತಿದೆ! ಆ ಫೋಟೊದಲ್ಲಿದ್ದ ಪಿ. ಲಂಕೇಶ್ ಎಂಬ ‘ಶತಮಾನದ ಪ್ರತಿಭೆ’ಯ ಕೃತಿಗಳು ಅವತ್ತಿನಿಂದಲೂ ನನ್ನೊಳಗೆ ನೆಲೆಸಿ ಹಲವು ದಿಕ್ಕಿನಲ್ಲಿ ಬೆಳೆಯುತ್ತಲೇ ಇರುವ ಪರಿ ಅದ್ಭುತ ಎನ್ನಿ ಸುತ್ತದೆ!

ಲಂಕೇಶರ ಅಧಿಕಾರವಿರೋಧಿ ಬರವಣಿಗೆಯ ಮಾದರಿ ಕನ್ನಡದ ದಿಟ್ಟ ತಲೆಮಾರುಗಳಲ್ಲಿ ಇವತ್ತಿಗೂ ಮುಂದುವರಿದಿದೆ. ಆದರೆ ಲಂಕೇಶರ ಒಟ್ಟು ಬರವಣಿಗೆಯನ್ನು ಅನೇಕರು ಅವರ ಪತ್ರಿಕಾ ಬರಹಗಳಿಗೆ ಸೀಮಿತವಾಗಿಸುತ್ತಿರುವುದು ಅಪಾಯಕರ. ಏಕರೂಪದ ಸಾಹಿತ್ಯ ಸಂಸ್ಕೃತಿಯನ್ನು ಸೃಷ್ಟಿಸುತ್ತಿರುವ ಡಿಜಿಟಲ್ ಲೋಕದ ಜೊತೆಗೆ ಸಾರವಿಲ್ಲದ ಗದ್ಯ, ವಾದ ರೂಪದ ಗದ್ಯ, ಪ್ರಗತಿಪರತೆಯ ಹೆಸರಿನಲ್ಲಿ ಏಕರಾಗದ ತೆಳು ಗದ್ಯ ಕೂಡ ಸೇರಿ ಮೀಡಿಯೋಕರ್ ಸಾಹಿತ್ಯ ಸಂಸ್ಕೃತಿಯೂ ಸೃಷ್ಟಿಯಾಗುತ್ತಿದೆ. ಇಪ್ಪತ್ತನೆಯ ಶತಮಾನದ ಎಂಭತ್ತರ ದಶಕದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ವಲಯದಲ್ಲಿ ವಿಜೃಂಭಿಸತೊಡಗಿದ್ದ ಮೀಡಿಯೋಕ್ರಿಟಿಯನ್ನು ಎದುರಿಸುವ ಸಲುವಾಗಿ ಕೂಡ ಲಂಕೇಶ್ ಜನಪ್ರಿಯ ಪತ್ರಿಕೆಯ ವೇದಿಕೆಯನ್ನು, ಹಲ ಬಗೆಯ ಓದುಗ, ಓದುಗಿಯರಿಗೆ ಹತ್ತಿರವಾದ ಜೀವಂತ ಶೈಲಿಯನ್ನು ರೂಪಿಸಿಕೊಂಡರು. ಅದು ಹಲವು ಸಿದ್ಧಾಂತಗಳನ್ನು ಅರಗಿಸಿಕೊಂಡು ಹುಟ್ಟಿದ ಎಲ್ಲರಿಗೂ ತಲುಪುವ ಶೈಲಿ ಕೂಡ.

ಇವತ್ತು ಸುಲಭವಾಗಿ, ಅತಿ ವೇಗವಾಗಿ ಓದುಗ ಓದುಗಿಯರನ್ನು ತಲುಪುವ ವೇದಿಕೆಗಳನ್ನು ಸೃಷ್ಟಿಸಿಕೊಳ್ಳುವ ಲೇಖಕ, ಲೇಖಕಿಯರಿಗೆ ಲಂಕೇಶ್ ಮಾಡೆಲ್ ನಿಜಕ್ಕೂ ಐಡಿಯಲ್ ಮಾಡೆಲ್. ಲಂಕೇಶರ ಗಂಭೀರ-ಸಂಕೀರ್ಣ-ಆರೋಗ್ಯಕರ-ಪರೀಕ್ಷಕ-ಜೀವಂತ ಬರವಣಿಗೆಯ ನೈತಿಕ ಮಾದರಿ ಎಲ್ಲ ಕ್ಷಿಪ್ರ ಬರಹಗಾರರ ಕೈ ತಡೆದು, ಕೈ ಹಿಡಿದು, ನಡೆಸಿದರೆ ಅದು ಕನ್ನಡ ಸಂಸ್ಕೃತಿಯನ್ನು ಪೊರೆಯುವ ರೀತಿ ಆರೋಗ್ಯಕರವಾಗಿರಬಲ್ಲದು!

ಇಪ್ಪತ್ತೈದು ವರ್ಷಗಳು ಉರುಳಿದ ಮೇಲೆ ಲಂಕೇಶರ ಕೊನೆಯ ರಾತ್ರಿಯನ್ನು ಮತ್ತೆ ನೆನೆಯುತ್ತಿರುವಾಗ, ಅವರ ಕೊನೆಯ ಕ್ಷೀಣ ಸ್ವರ ನನ್ನ ಕಿವಿಯಲ್ಲಿ ಮೊರೆಯುತ್ತಲೇ ಇದೆ: ‘ಬರ್ಲೇನೋ’

ನನ್ನ ಲೋಕಕ್ಕಂತೂ ಲಂಕೇಶ್ ನಿತ್ಯ ಬರುತ್ತಲೇ ಇರುತ್ತಾರೆ: ಒಳನೋಟವಾಗಿ. ವಿಮರ್ಶೆಯಾಗಿ. ನಿಷ್ಠುರ ಪರೀಕ್ಷೆಯ ಗದ್ಯವಾಗಿ. ಸದ್ಯತನ-ತಾಜಾತನಗಳ ಕತೆ, ನಾಟಕವಾಗಿ. ಆ ಕ್ಷಣದ ಲೋಕಸತ್ಯ ಕಾಣಿಸುವ ನೀಲು ಕಾವ್ಯವಾಗಿ. ಮನುಷ್ಯನ ಕೇಡನ್ನೂ, ಆಗಾಗ ಚಿಮ್ಮುವ ಒಳಿತನ್ನೂ ಕಾಣಿಸಬಲ್ಲ ಸೂಕ್ಷ್ಮ ನೋಟವಾಗಿ. ಮನುಷ್ಯನ ಊಹಾತೀತ ವರ್ತನೆಯನ್ನು ದಣಿವರಿಯದೆ ಗ್ರಹಿಸುವ ಶೋಧಕ ಕಣ್ಣಾಗಿ.

ನನ್ನ ಲೋಕಕ್ಕೆ ಹೀಗೆ ಬರುತ್ತಲೇ ಇರುವ ಲಂಕೇಶ್ ನಿಮ್ಮೊಳಗಿಗೂ ಬರುತ್ತಿರಲಿ; ಬರೆವವರ, ಓದುವವರ, ಬದುಕಲು ಬಯಸುವವರ ಮರುಹುಟ್ಟಿಗೆ ಅತ್ಯಗತ್ಯವಾದ ಜೀವದ್ರವವಾಗಿ ಲಂಕೇಶ್ ಎಂಬ ಬತ್ತದ ತೊರೆ ಹರಿಯುತ್ತಲೇ ಇರಲಿ.

https://natarajhuliyar.com

 ಲಂಕೇಶ್ ಜೊತೆ ನಟರಾಜ್ ಹುಳಿಯಾರ್ 31 ಡಿಸೆಂಬರ್ 1996

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಟರಾಜ್ ಹುಳಿಯಾರ್

contributor

Similar News