ಲಿಂಗನಮಕ್ಕಿಯಿಂದ ಬೇಸೂರು ಅಣು ಸ್ಥಾವರದವರೆಗೆ..
ಮಲೆನಾಡಿನ ಮೇಲೆ ನಿಲ್ಲದ ಜನ ವಿರೋಧಿ ಯೋಜನೆಗಳು
ಶಿವಮೊಗ್ಗ : ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಶಿವಮೊಗ್ಗ ಜಿಲ್ಲೆಯು ದಟ್ಟ ಅರಣ್ಯ,ಮಳೆ,ರಮಣೀಯ ಸೌಂದರ್ಯಕ್ಕೆ ಹೆಸರುವಾಸಿ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಮಲೆನಾಡಿನಲ್ಲಿ ಜಾರಿಯಾಗುತ್ತಿರುವ ಜನ ವಿರೋಧಿ ಯೋಜನೆಗಳ ವಿರುದ್ಧ ಅಲ್ಲಿನ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾಡಿಗೆ ಬೆಳಕು ಕೊಡಲು ಮೊದಲು 1964ರಲ್ಲಿ ಮಡೆನೂರು ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಹಾಗೂ ಹೆಚ್ಚಿನ ಜಲ ವಿದ್ಯುತ್ ಉತ್ಪಾದನೆಗಾಗಿ 1964ರಲ್ಲಿ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾದ ಲಿಂಗನಮಕ್ಕಿ ಡ್ಯಾಂ ಮತ್ತು ಆ ಜಲ ವಿದ್ಯುತ್ ಯೋಜನೆಗೆ ಪೂರಕವಾಗಿ ಚಕ್ರಾ-ಸಾವೆಹಕ್ಲು, ತಳಕಳಲೆ, ಮಾಣಿ ಹೀಗೆ ಸಾಲುಸಾಲು ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಈ ಅಭಿವೃದ್ಧಿ ಯೋಜನೆಯ ಹೆಸರಲ್ಲಿ ಲಕ್ಷಾಂತರ ಎಕರೆ ಅರಣ್ಯ, ಕಂದಾಯ ಭೂಮಿ ಮುಳುಗಡೆಯಾಗಿ ವನ್ಯಜೀವಿ ಸಂಕುಲ, ಜಲಚರಗಳು ವಿನಾಶ ಕಂಡಿರುವುದು ಜಗಜ್ಜಾಹೀರ. ಈಗ ಮತ್ತಷ್ಟು ಭೀಕರ ಯೋಜನೆಗಳನ್ನು ಜಾರಿಗೊಳಿಸಲು ಆಳುವ ಸರಕಾರಗಳು ಮುಂದಾಗಿವೆ ಎಂದು ಮಲೆನಾಡಿಗರು ಆರೋಪಿಸುತ್ತಿದ್ದಾರೆ.
ಲಿಂಗನಮಕ್ಕಿ ಅಣೆಕಟ್ಟು ಅಪಾರ ಪ್ರಮಾಣದ ಪಶ್ಚಿಮಘಟ್ಟದ ಅರಣ್ಯ ಪ್ರದೇಶವನ್ನು ಮುಳುಗಡೆ ಮಾಡಿದೆ. ಈ ಜಲಾಶಯ ನಿರ್ಮಾಣದಿಂದಾಗಿ ಶರಾವತಿ ಕಣಿವೆಯ ಜೀವವೈವಿಧ್ಯತೆಯುಳ್ಳ ದಟ್ಟ ಅರಣ್ಯ, ಜೌಗು ಪ್ರದೇಶಗಳು ಮತ್ತು ಸುಮಾರು 175ಕ್ಕೂ ಹೆಚ್ಚು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದ ಜನಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರಿದೆ.ಆರು ದಶಕಗಳ ಹಿಂದೆ ಆಗಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇಂದಿಗೂ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದೆ ಅತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಉಪ ಜಲವಿದ್ಯುತ್ ಯೋಜನೆಗಳಾದ ಚಕ್ರಾ-ಸಾವೇಹಕ್ಲು,ವರಾಹಿ,ಮಾಣಿ, ತುಂಗಾ ಮೇಲ್ದಂಡೆ,ಭದ್ರಾ ಯೋಜನೆಗಳ ಸಂತ್ರಸ್ತರ ಸಮಸ್ಯೆಗಳು ತಾರ್ಕಿಕ ಅಂತ್ಯ ಕಾಣದೆ ಅತಂತ್ರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಕಠಿಣವಾದ ಅರಣ್ಯ ಕಾನೂನು, ನ್ಯಾಯಾಲಯದ ಆದೇಶಗಳಿಂದ ಇಂದಿಗೂ ಭೂ ಹಕ್ಕು ಸಿಗದೆ ಕಂಗಾಲಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮತ್ತು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣದ ಪ್ರಸ್ತಾಪ ಮಲೆನಾಡಿಗರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರ ತೀವ್ರ ವಿರೋಧದ ನಡುವೆಯೂ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶತಾಯಗತಾಯ ಕಾರ್ಯಗತಗೊಳಿಸಲು ಸರಕಾರ ಹಠ ಹಿಡಿದು ಕುಳಿತಿದೆ. ಕೇಂದ್ರ ಸರಕಾರ ತಾತ್ಕಾಲಿಕವಾಗಿ ತಡೆಹಿಡಿದಿದ್ದರೂ ಈ ವಿಚಾರ ಮಲೆನಾಡಿನ ಜನರ ನೆಮ್ಮದಿ ಕೆಡಿಸಿದೆ. ಈ ಯೋಜನೆಗೆ 54.155 ಹೆಕ್ಟೇರ್ ಅರಣ್ಯ ಪ್ರದೇಶ, 24.31 ಹೆಕ್ಟೇರ್ ಖಾಸಗಿ ಭೂಮಿ ಬಳಕೆಯಾಗುತ್ತಿದೆ. ಯೋಜನೆಯ ಬಹುತೇಕ ರಚನೆಗಳು ಸುರಂಗದೊಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ಕನಿಷ್ಠ ಪರಿಣಾಮ ಉಂಟಾಗುತ್ತದೆ. ತಳಕಳಲೆ ಡ್ಯಾಂನಿಂದಾಗಿ 1960ರಲ್ಲಿ ಊರು ತೊರೆದು ಬಂದು ಸಾಗರ ತಾಲೂಕು ಪಶ್ಚಿಮಘಟ್ಟದ ಸಿಂಗಳೀಕ ಅಭಯಾರಣ್ಯದೊಳಗಿನ ಗುಂಡಿಬೈಲು, ಮರಾಠಿಕೇರಿ, ಹೆನ್ನಿ, ಹಿರೇಹೆನ್ನಿಯಲ್ಲಿ ಹೊಸಬದುಕು ಕಟ್ಟಿಕೊಂಡಿದ್ದ ತಲೆಮಾರಿನ ಮಕ್ಕಳು, ಮೊಮ್ಮಕ್ಕಳು ಈಗ ಮತ್ತೊಮ್ಮೆ ಊರು ಬಿಡುವಂತಾಗಿದೆ. ಶರಾವತಿಯ ಒಡಲೊಳಗೆ ತಮ್ಮ ಬದುಕು ಪದೇ ಪದೇ ಮುಳುಗೇಳುತ್ತಿರುವ ಬಗ್ಗೆ ಆ ಕುಟುಂಬಗಳ ಆಕ್ರೋಶ, ಕಣ್ಣೀರು ಅರಣ್ಯರೋದನವಾಗಿಯೇ ಉಳಿಯುತ್ತಿದೆ.
ಇತ್ತ ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ರಸ್ತೆಯ ಅಪಾಯಕಾರಿ ತಿರುವುಗಳು ಮತ್ತು ಗುಡ್ಡ ಕುಸಿತದ ಸಮಸ್ಯೆಗೆ ಪರಿಹಾರವಾಗಿ ಸುರಂಗ ಮಾರ್ಗವನ್ನು ಕೊರೆಯುವ ಯೋಜನೆ ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್)ಸಿದ್ಧಪಡಿಸಲು 2.33 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕೂಡ ಆಹ್ವಾನಿಸಿದೆ. ಈ ಎರಡು ಪ್ರಸ್ತಾಪಿತ ಯೋಜನೆಗಳ ಬಗ್ಗೆ ಮಲೆನಾಡಿನ ಜನರು, ಪರಿಸರಾಸಕ್ತ ಸಂಘಟನೆಗಳು,ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂತಹ ಹೊತ್ತಿನಲ್ಲಿಯೇ ಕೇಂದ್ರ ಸರಕಾರ ಮಲೆನಾಡಿಗರ ಮೇಲೆ ಮತ್ತೊಂದು ಪರಿಸರ ವಿರೋಧಿ, ಮನುಷ್ಯ ವಿರೋಧಿ ಯೋಜನೆಯ ನಿರ್ಮಾಣದ ಪ್ರಸ್ತಾವವನ್ನು ಮುಂದಿಟ್ಟಿದೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೋಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಾಡುವ ಕಾರ್ಯಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಕೇಂದ್ರ ಸರಕಾರದ ಅಧೀನ ಸಂಸ್ಥೆ ಎನ್ಟಿಪಿಸಿಎಲ್ ಕೋಳೂರು ಗ್ರಾಮ ಪಂಚಾಯತ್ ಗೆ ನಿರಪೇಕ್ಷಣಾ ಪತ್ರ ಕೋರಿ ಪತ್ರ ಬರೆದಿರುವುದು ಜನರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣದ ಸುದ್ದಿ ದಿನಪತ್ರಿಕೆಗಳು,ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಯೋಜನೆ ವಿರೋಧಿಸಿ ಜನಾಂದೋಲನವೇ ಆರಂಭವಾಗಿದೆ. ಗ್ರಾಮ ಮಟ್ಟದಿಂದ ಹಿಡಿದು ತಾಲೂಕು,ಜಿಲ್ಲಾ ಮಟ್ಟದವರೆಗೆ ಹೋರಾಟ ರೂಪಿಸಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಮಲೆನಾಡಿನ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಜನರಿಂದ ಹಿಡಿದು ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ.
ಶರಾವತಿ ಹಿನ್ನೀರು ಭಾಗದ ಬೇಸೂರು ಗ್ರಾಮದ ಜನರು ಎರಡೆರಡು ಬಾರಿ ಮುಳುಗಡೆಯಾಗಿ ಜೀವನ ಕಟ್ಟಿಕೊಳ್ಳುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರಕಾರ ಅಣುಸ್ಥಾವರ ನಿರ್ಮಾಣದ ಕುರಿತು ಜಿಲ್ಲಾಡಳಿತದಿಂದ ವರದಿ ಪಡೆದುಕೊಂಡಿದೆ. ಬೇಸೂರಿನಲ್ಲಿ ಜನವಸತಿ ಪ್ರದೇಶ,ಕೃಷಿ ಭೂಮಿ,ಅರಣ್ಯ ಭೂಮಿ,ಬಯಲು ಪ್ರದೇಶದ ವಿಸ್ತೃತ ವರದಿ ಪಡೆದುಕೊಂಡಿದೆ. ಖನಿಜಾಂಶಗಳ ಕುರಿತು ಹಲವು ಸುತ್ತಿನಲ್ಲಿ ವಾಯು ಸಮೀಕ್ಷೆ ಕೂಡ ನಡೆಸಲಾಗಿದೆ. ಜಿಲ್ಲಾಧಿಕಾರಿ,ಜಿಲ್ಲೆಯ ಜನಪ್ರತಿನಿಧಿಗಳು ಏನೇ ಸಮಜಾಯಿಷಿ ನೀಡಿದರೂ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ.
ಚಳವಳಿಗಳ ತವರೂರು ಶಿವಮೊಗ್ಗ ಜಿಲ್ಲೆ ಕಾಗೋಡು ಸತ್ಯಾಗ್ರಹ,ರೈತ ಚಳವಳಿ,ದಲಿತ ಚಳವಳಿ, ಪರಿಸರ ಚಳವಳಿ,ಬೆತ್ತಲೆ ಸೇವೆ ವಿರೋಧಿ ಹೋರಾಟಗಳಿಗೆ ಸಾಕ್ಷಿಯಾಗಿದೆ. ಕಾಗೋಡು ರೈತ ಚಳವಳಿಯಿಂದ ರಾಜ್ಯದಲ್ಲಿ ಉಳುವವನೆ ಹೊಲದೊಡೆಯ ಎಂಬ ಐತಿಹಾಸಿಕ ಭೂಸುಧಾರಣಾ ಕಾಯ್ದೆ (1974) ಜಾರಿಯಾಗಲು ಮೂಲ ಪ್ರೇರಣೆಯಾಯಿತು. ಕುದುರೆಮುಖದಲ್ಲಿನ ಗಣಿಗಾರಿಕೆ ವಿರುದ್ಧದ ಹೋರಾಟವು ಭಾರತದ ಅತಿ ದೊಡ್ಡ ಪರಿಸರ ಸಂರಕ್ಷಣಾ ಚಳವಳಿಗಳಲ್ಲಿ ಒಂದಾಗಿದೆ. ದಶಕಗಳ ಕಾಲ ನಡೆದ ತೀವ್ರ ಹೋರಾಟ ಹಾಗೂ ಕಾನೂನು ಸಮರದ ಪರಿಣಾಮವಾಗಿ, 2006ರಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯ (ಏIಔಅಐ) ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.ಇಂತಹ ಐತಿಹಾಸಿಕ ಹೋರಾಟ ಮಾಡಬೇಕಾದ ತುರ್ತು ಮಲೆನಾಡಿಗೆ ಬಂದೊದಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ, ಪಶ್ಚಿಮ ಘಟ್ಟದ ಹೃದಯವೇ ಆಗಿರುವ ಆಗುಂಬೆ ಸುರಂಗ ಮಾರ್ಗದ ವಿರುದ್ಧ ಬೃಹತ್ ಜನಾಂದೋಲನವೇ ರೂಪಿಸಬೇಕಿದೆ. ಮಲೆನಾಡಿನ ಪರಿಸರ, ಅಸ್ಮಿತೆ ಮೇಲೆ ಆಗುತ್ತಿರುವ ಕೌರ್ಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಬೇಕಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ, ಹಿರೇಭಾಸ್ಕರ, ವರಾಹಿ, ಮಾಣಿ ಸೇರಿದಂತೆ ಹತ್ತಾರು ಜಲವಿದ್ಯುತ್ ಯೋಜನೆಗಳಿಂದಾಗಿ ಸಾವಿರಾರು ಮಲೆನಾಡಿಗರನ್ನು ಸಂತ್ರಸ್ತರನ್ನಾಗಿ ಮಾಡಲಾಗಿದೆ. ಆರು ದಶಕಗಳ ಹಿಂದೆ ಲಿಂಗನಮಕ್ಕಿ ಯೋಜನೆಗಾಗಿ ಭೂಮಿ ಕಳೆದುಕೊಂಡ ಅನೇಕ ಕುಟುಂಬಗಳಿಗೆ ಇಂದಿಗೂ ಸೂಕ್ತ ಪರಿಹಾರ ಸಿಕ್ಕಿಲ್ಲ, ಹಕ್ಕುಪತ್ರಗಳು ದೊರೆತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣದ ಪ್ರಸ್ತಾವ ಮಾಡಿರುವುದು ಮಲೆನಾಡಿಗರ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
<ತೀ.ನಾ ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ