×
Ad

ಬಿಸಿಲನಾಡಲ್ಲಿ ‘ಅಗ್ನಿಪರೀಕ್ಷೆ’ : ವಿಜಯಪುರದಲ್ಲಿ ದಾಖಲೆ ಮಟ್ಟದ ತಾಪಮಾನ

ವಿಜಯಪುರದಲ್ಲಿ ದಾಖಲೆ ಮಟ್ಟದ ತಾಪಮಾನ

Update: 2026-05-08 11:10 IST

ವಿಜಯಪುರ, ಮೇ 6: ಬಸವನಾಡು ಈಗ ಅಕ್ಷರಶಃ ಕೆಂಡದಂತಾಗಿದೆ. ಸೂರ್ಯನ ಪ್ರಖರತೆಗೆ ಗುಮ್ಮಟ ನಗರಿ ಬೆವರುತ್ತಿದ್ದು, ಜನರ ನೆಮ್ಮದಿ ಹರಣವಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನವು 2019ರ ಗರಿಷ್ಠ ದಾಖಲೆಯಾದ 43 ಡಿಗ್ರಿ ಸೆಲ್ಸಿಯಸ್ ಅನ್ನು ಈ ಬಾರಿ ದಾಟಲಿದೆಯೇ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮನೆಮಾಡಿದೆ.

ಬಿಸಿಲಿನ ಬೇಗೆಯಿಂದ ಗಂಟಲು ಒಣಗುತ್ತಿರುವುದರಿಂದ ನಗರದ ಪ್ರತಿಯೊಂದು ವೃತ್ತಗಳಲ್ಲಿ ತಂಪು ಪಾನೀಯಗಳ ವ್ಯಾಪಾರ ಜೋರಾಗಿದೆ. ಮಧ್ಯಾಹ್ನದ ಹೊತ್ತಿಗೆ ಮನೆಯೊಳಗೂ ಇರಲಾರದಷ್ಟು ಸೆಖೆ ಇರುವುದರಿಂದ, ಜನರು ನಗರದ ಉದ್ಯಾನವನಗಳು ಹಾಗೂ ಮರಗಳ ನೆರಳಿನ ಮೊರೆ ಹೋಗುತ್ತಿದ್ದಾರೆ.

ಹಿಟ್ಟಿನಹಳ್ಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಅಂಕಿಅಂಶಗಳು ಈ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಬಿಸಿಲಿನ ತಾಪದಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 10 ಹಾಸಿಗೆಗಳ ‘ಹೀಟ್ ಸ್ಟ್ರೋಕ್ ವಾರ್ಡ್’ ಆರಂಭಿಸಲಾಗಿದೆ.

ಇಲ್ಲಿ ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯ ಸೇರಿದಂತೆ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಗಳಿವೆ. ಮೂವರು ನುರಿತ ವೈದ್ಯರು ಮತ್ತು ವಿಶೇಷ ಸಿಬ್ಬಂದಿ ವರ್ಗ 24 ಗಂಟೆಯೂ ಸೇವೆಯಲ್ಲಿದ್ದಾರೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕಾಣಿಸಿಕೊಳ್ಳುವ 40 ಡಿಗ್ರಿ ತಾಪಮಾನ, ಈ ಬಾರಿ ಎಪ್ರಿಲ್ ಅಂತ್ಯಕ್ಕೇ ದಾಖಲಾಗಿದೆ. ಕಳೆದ 15 ವರ್ಷಗಳ ಹವಾಮಾನದ ಹಾದಿಯನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ.

ಬೇಸಿಗೆ ಮುಗಿಯಲು ಇನ್ನೂ ಒಂದೂವರೆ ತಿಂಗಳು ಬಾಕಿ ಇರುವುದು ಮತ್ತು ನಿತ್ಯ ಸರಾಸರಿ 0.5 ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗುತ್ತಿರುವುದು ಜನರ ನಿದ್ದೆಗೆಡಿಸಿದೆ. ಕಳೆದ 14 ವರ್ಷಗಳ ಅಂಕಿಸಂಖ್ಯೆಯನ್ನು ನೋಡುವುದಾದರೆ ಪ್ರತಿ ಬಾರಿಯೂ ಬೇಸಿಗೆಯಲ್ಲಿ ಗರಿಷ್ಠ 40 ಡಿಗ್ರಿ ತಾಪಮಾನ ಸರ್ವೇ ಸಾಮಾನ್ಯವಾಗಿದೆ. ಆದರೆ 2019ರ ಮೇ ತಿಂಗಳ ಕೊನೆಯಲ್ಲಿ ಮಾತ್ರ 43 ಡಿಗ್ರಿಗೆ ತಲುಪಿತ್ತು. ಆದರೆ ಈ ಬಾರಿ ಎಪ್ರಿಲ್ ಕೊನೆಯ ವಾರದಲ್ಲೇ 40 ಡಿಗ್ರಿ ಕ್ರಾಸ್ ಆಗಿರುವುದರಿಂದ ಈ ವರ್ಷವೂ 43 ಡಿಗ್ರಿಗೂ ಮೀರಿ ತಾಪಮಾನ ಏರಲಿದೆಯಾ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಇನ್ನೂ ಒಂದೂವರೆ ತಿಂಗಳು ಬೇಸಿಗೆಕಾಲ ಇರುವುದಿಂದ ನಿತ್ಯ ಅರ್ಧ ಡಿಗ್ರಿಯಷ್ಟು ತಾಪಮಾನ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ವರ್ಷವಾರು ತಾಪಮಾನ..!

ತಾಲೂಕಿನ ಹಿಟ್ಟಿನಹಳ್ಳಿಯಲ್ಲಿನ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ಕೃಷಿ ಹವಾಮಾನಶಾಸ್ತ್ರದ ಅಖಿಲ ಭಾರತ ಸಮನ್ವಿತ ಸಂಶೋಧನಾ ಯೋಜನೆಯ ಕಚೇರಿಯು ಕಳೆದ 15 ವರ್ಷಗಳ ಗರಿಷ್ಠ ತಾಪಮಾನದ ಕೋಷ್ಠಕವನ್ನು ಬಿಡುಗಡೆ ಮಾಡಿದೆ.

2012 ಮೇ 20ರಂದು 41 ಡಿಗ್ರಿ, 2013 ಮೇ 22ರಂದು 40.8 ಡಿಗ್ರಿ, 2014 ಮೇ 26ರಂದು 40.8 ಡಿಗ್ರಿ, 2015 ಮೇ 22ರಂದು 42.2 ಡಿಗ್ರಿ, 2016 ಮೇ 14ರಂದು 41.2 ಡಿಗ್ರಿ, 2017 ಮೇ 26ರಂದು 41.5 ಡಿಗ್ರಿ, 2018 ಮೇ 2ರಂದು 42 ಡಿಗ್ರಿ, 2019 ಮೇ 30ರಂದು 43 ಡಿಗ್ರಿ, 2020 ಮೇ 27ರಂದು 42.5 ಡಿಗ್ರಿ, 2021 ಮೇ 11ರಂದು 38 ಡಿಗ್ರಿ, 2022 ಮೇ 10ರಂದು 41.5 ಡಿಗ್ರಿ, 2023 ಮೇ 19ರಂದು 40.6 ಡಿಗ್ರಿ, 2024 ಮೇ 7ರಂದು 42.5 ಡಿಗ್ರಿ, 2025 ಮೇ 7ರಂದು 42.5 ಡಿಗ್ರಿ, 2026 ಮೇ 2ರಂದು 40.5 ಡಿಗ್ರಿ, ಮೇ3, 2026 40.2 ಡಿಗ್ರಿ,, ಮೇ 4, 2026 40.5 ಡಿಗ್ರಿ, ಮೇ 5, 2026 40.8 ಡಿಗ್ರಿ, ಮೇ 6, 2026 41.1 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ.

ಬಿಸಿಲಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು: ಮೈಮೇಲೆ ತೆಳುವಾದ ಕಾಟನ್ ಬಟ್ಟೆ ಧರಿಸಬೇಕು ಜೊತೆಗೆ ಕಾಲಕಾಲಕ್ಕೆ ನೀರು, ಮಜಿ ್ಜಗೆ, ಅಂಬಲಿ ಸೇರಿದಂತೆ ದೇಹವನ್ನು ತಂಪಾಗಿಸುವ ಪಾನೀಯಗಳನ್ನು ಕುಡಿಯಬೇಕು. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಕ್ಕಳು, ವೃದ್ಧರು ಮನೆಯಿಂದ ಹೊರಗೆ ಬರಬಾರದು. ಅನಿವಾರ್ಯವಾದವರು ಟೋಪಿ ಹಾಕಿಕೊಳ್ಳಬೇಕು, ಕೊಡೆಗಳನ್ನು ಬಳಸುವುದು, ವಸ್ತ್ರಗಳಿಂದ ಮುಖ ಮುಚ್ಚಿ ಕೊಳ್ಳಬೇಕು.

ಬಿಸಿಲಿನ ತಾಪಕ್ಕೆ ಮಧ್ಯಾಹ್ನ ಯಾರೂ ರಸ್ತೆಗೆ ಬರುತ್ತಿಲ್ಲ. ವ್ಯಾಪಾರ ಸಂಪೂರ್ಣ ಕುಸಿದಿದೆ. ಬಿಸಿಲಿನಿಂದ ತಲೆ ಸುತ್ತು ಬರುತ್ತದೆ ಎಂಬ ಭಯ ನಮಗೂ ಇದೆ. ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆ ಚಿಕಿತ್ಸೆ ಸಿಗುತ್ತದೆ ಎಂಬ ಸುದ್ದಿ ಕೇಳಿ ಸ್ವಲ್ಪ ಸಮಾಧಾನವಾಗಿದೆ.

<ರಫೀಕ್, ಆಟೋ ಚಾಲಕರು

ಈ ಬಾರಿ ಬೇಸಿಗೆ ಮೊದಲೇ ಕಾಲಿಟ್ಟಿದೆ. ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ ನಿಜ, ಆದರೆ ಬಿಸಿಲಿನ ತೀವ್ರತೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜನರಿಗೆ ಜಾಗೃತಿ ಮೂಡಿಸಲು ಇಂತಹ ಸುದ್ದಿಗಳು ಬಹಳ ಮುಖ್ಯ.

<ಇಮ್ರಾನ ಬಾಗವಾನ, ಸ್ಥಳೀಯ ವ್ಯಾಪಾರಿ

ವರ್ಷದಿಂದ ವರ್ಷಕ್ಕೆ ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಈ ಬಾರಿ ಮಾರ್ಚ್ 5ರಿಂದಲೇ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಗಳುಳ್ಳ ಹೀಟ್ ಸ್ಟ್ರೋಕ್ ವಾರ್ಡ್ ಆರಂಭಿಸಲಾಗಿದೆ. ಈ ವಾರ್ಡಿನಲ್ಲಿ ಬಿಸಿಲಿನ ಆಘಾತದಿಂದ ಬಂದವರಿಗೆ ತುರ್ತು ಚಿಕಿತ್ಸೆ ನೀಡಲು ಬೇಕಾದ ಆಕ್ಸಿಜನ್, ವೆಂಟಿಲೆಟರ್, ಮೂವರು ವೈದ್ಯರು, ಸಿಬ್ಬಂದಿ ಸೇರಿದಂತೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಬಿಸಿಲಿಗೆ ನಿತ್ರಾಣಗೊಳ್ಳುವುದು, ತಲೆ ತಿರುಗುವುದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು ಆಗುವ ಸಂಭವವಿದೆ. ಈಗಾಗಲೇ ತಾಪಮಾನ 40 ಡಿಗ್ರಿ ದಾಟಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಗಳ ಸೇವೆಯನ್ನು ಒದಗಿಸಲಾಗಿದ್ದು, ಸಮಸ್ಯೆಗೊಳಗಾದವರು ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬಹುದು.

<ಡಾ.ಶಿವಾನಂದ ಮಾಸ್ತಿಹೊಳಿ,

ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾಸ್ಪತ್ರೆ.

ಮಧ್ಯಾಹ್ನ 11 ಗಂಟೆಯ ಹೊತ್ತಿಗೇ ಮೈ ಸುಡುವ ಬಿಸಿಲು ಶುರುವಾಗುತ್ತಿದೆ. ಹೊಲದಲ್ಲಿ ಕೆಲಸ ಮಾಡುವುದು ಅಸಾಧ್ಯವಾಗಿದೆ. ಅನಿವಾರ್ಯವಾಗಿ ಮುಂಜಾನೆಯೇ ಕೆಲಸ ಮುಗಿಸಿ ಮನೆ ಸೇರುತ್ತಿದ್ದೇವೆ. ಸರಕಾರ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಮಾಡಿದ್ದು ಒಳ್ಳೆಯದಾಯಿತು, ಬಡವರಿಗೆ ಇದು ದೊಡ್ಡ ಆಸರೆ.

<ಸಿಕಂದರ್ ದೊಡ್ಡಮನಿ

ಇಟ್ಟಂಗಿಹಾಳ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News