ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ 1.079 ಕೋಟಿ ಮತದಾರರು ಎಎಸ್‌ಡಿಡಿಒ (ಗೈರು, ಶಾಶ್ವತ ಸ್ಥಳಾಂತರ, ಮೃತರು, ನಕಲಿ ಹಾಗೂ ಇತರ)ಪಟ್ಟಿಯಲ್ಲಿ ಗುರುತಿಸಿರುವುದರಿಂದ ಅಷ್ಟು ಮತದಾರರು ಅ.27ರಂದು ಬಿಡುಗಡೆಯಾಗಲಿರುವ ಅಂತಿಮ ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.

ಎಎಸ್‌ಡಿಡಿಒ ಪಟ್ಟಿಯಲ್ಲಿ ತಪ್ಪಾಗಿ ನಮೂದಾಗಿರುವ ಅರ್ಹ ಮತದಾರರು, ದಾಖಲೆಗಳೊಂದಿಗೆ ಬಿಎಲ್‌ಒಗಳು ಅಥವಾ ಆನ್‌ಲೈನ್ ಮೂಲಕ ಹೊಸದಾಗಿ ನಮೂನೆ-6 ಸಲ್ಲಿಸಿದರೆ ಅಂತಹ ಮತದಾರರೆಲ್ಲರೂ ಅಂತಿಮ ಮತಪಟ್ಟಿಯಲ್ಲಿ ಬರುತ್ತಾರೆಂದು ರಾಜ್ಯ ಚುನಾವಣಾ ಆಯೋಗ ತಿಳಿಸಿತ್ತು. ಆದರೆ, ಇದುವರೆಗೂ ನಮೂನೆ-6 ಅರ್ಜಿಗಳು ಕೇವಲ 6.42 ಲಕ್ಷ ಸಲ್ಲಿಕೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎಸ್‌ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಜೂ.16ರ ವೇಳೆಗೆ 5,54,32,314 ಮತದಾರರಿದ್ದರು. ಈ ಪೈಕಿ 1,07,96,415 ಮಂದಿಯನ್ನು ಎಎಸ್‌ಡಿಡಿಒ ಮೂಲಕ ಡಿಲೀಟ್ ಮಾಡಲಾಗಿದೆ. ಇಷ್ಟು ಹೆಸರುಗಳು ಆ.24ರಂದು ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿರುವ ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಎಎಸ್‌ಡಿಡಿಒ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಮಾಹಿತಿ ಪಡೆದು, ತಾವು ಅರ್ಹ ಮತದಾರರಾಗಿದ್ದರೆ ಅಗತ್ಯ ಪ್ರಕ್ರಿಯೆ ಮೂಲಕ ತಮ್ಮ ಹಕ್ಕು ಪ್ರತಿಪಾದಿಸಲು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಆದರೆ, ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಇರುವುದೇ ಗೊತ್ತಿಲ್ಲದ ಮತದಾರರು ತಮ್ಮ ಹಕ್ಕನ್ನು ಪ್ರತಿಪಾದಿಸುವುದಾದರೂ ಹೇಗೆ?

80.63 ಲಕ್ಷ ಮಂದಿ ‘ಗೈರು-ಸ್ಥಳಾಂತರ’: ಎಎಸ್‌ಡಿಡಿಒ ಪಟ್ಟಿಯಲ್ಲಿರುವ 1.079 ಕೋಟಿ ಮತದಾರರ ಪೈಕಿ 65,45,679 ಮಂದಿಯನ್ನು ‘ಶಾಶ್ವತ ಸ್ಥಳಾಂತರ’ ಹಾಗೂ 15,17,042 ಮಂದಿಯನ್ನು ‘ಗೈರು/ಪತ್ತೆಯಾಗಿಲ್ಲ’ ಎಂದು ಗುರುತಿಸಲಾಗಿದೆ. ಈ ಎರಡು ವರ್ಗಗಳಲ್ಲಿ ಒಟ್ಟು 80,62,721 ಮತದಾರರು ಇದ್ದಾರೆ. ಇದರ ಜೊತೆಗೆ 16,39,864 ಮಂದಿ ‘ಮೃತರು’, 7,09,870 ಮಂದಿ ‘ನಕಲಿ’ ಹಾಗೂ 3,83,884 ಮಂದಿ ‘ಇತರ’ ವರ್ಗದಲ್ಲಿದ್ದಾರೆ.

6.42 ಲಕ್ಷ ನಮೂನೆ-6 ಮಾತ್ರ: ಚುನಾವಣಾ ಆಯೋಗದ ಸೆ.17ರ ಅಂಕಿಅಂಶಗಳ ಪ್ರಕಾರ, ಜೂ.16 ರಿಂದ ಸೆ.17ರ ವರೆಗೆ ರಾಜ್ಯದಲ್ಲಿ ನಮೂನೆ-6 ಮೂಲಕ 6,42,670 ಅರ್ಜಿಗಳು ಸ್ವೀಕರಿಸಲಾಗಿದೆ. ನಮೂನೆ-6ಎ ಮೂಲಕ 4,302, ನಮೂನೆ-7ರ ಮೂಲಕ 41,972 ಹಾಗೂ ನಮೂನೆ-8ರ ಮೂಲಕ 10,24,425 ಅರ್ಜಿಗಳು ಬಂದಿವೆ. ಒಟ್ಟು 17,13,369 ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ.

ನಮೂನೆ-6 ಮತ್ತು ನಮೂನೆ-6ಎ ಎರಡೂ ಸೇರಿ 6,46,972 ಅರ್ಜಿಗಳು ಬಂದಿವೆ. ಅಂದರೆ, ಎಎಸ್‌ಡಿಡಿಒ ಪಟ್ಟಿಯಲ್ಲಿರುವ 1.079 ಕೋಟಿ ಮತದಾರರಿಗೆ ಹೋಲಿಸಿದರೆ, ತಮ್ಮ ಹಕ್ಕು ಪ್ರತಿಪಾದಿಸಲು ನಮೂನೆ-6, 6ಎ ಮೂಲಕ ಮುಂದಾದವರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ನಮೂನೆ-6 ಕೇವಲ ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಮತದಾರರಿಗೆ ಮಾತ್ರ ಸೀಮಿತವಲ್ಲ. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ 18 ವರ್ಷ ತುಂಬಿದ ಅರ್ಹ ನಾಗರಿಕರೂ ನಮೂನೆ-6 ಸಲ್ಲಿಸುತ್ತಾರೆ. ಹೀಗಾಗಿ ಈ 6.42 ಲಕ್ಷ ಅರ್ಜಿಗಳಲ್ಲಿ 18 ವರ್ಷ ತುಂಬಿದ ಹೊಸ ಮತದಾರರೂ ಸೇರಿರುವ ಸಾಧ್ಯತೆ ಇದೆ. ಆದುದರಿಂದ 6.42 ಲಕ್ಷ ನಮೂನೆ-6 ಅರ್ಜಿಗಳನ್ನೇ ಎಎಸ್‌ಡಿಡಿಒ ಪಟ್ಟಿಯಿಂದ ಹೊರಗುಳಿದವರು ತಮ್ಮ ಹೆಸರು ಮರುಸೇರ್ಪಡೆಗಾಗಿ ಸಲ್ಲಿಸಿರುವ ಅರ್ಜಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ.

ಮಾಹಿತಿ ಇಲ್ಲದಿದ್ದರೆ ಹಕ್ಕು ಮಂಡಿಸುವುದಾದರೂ ಹೇಗೆ?

‘ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಇರುವುದೇ ಗೊತ್ತಿಲ್ಲದ ವ್ಯಕ್ತಿ ತನ್ನ ಹೆಸರು ಕರಡು ಪಟ್ಟಿಯಲ್ಲಿ ಇಲ್ಲ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು? ಹಕ್ಕನ್ನು ಹೇಗೆ ಪ್ರತಿಪಾದಿಸಬೇಕು? ವಿಶೇಷವಾಗಿ 80.63 ಲಕ್ಷ ಮಂದಿಯನ್ನು ಗೈರು ಅಥವಾ ಶಾಶ್ವತ ಸ್ಥಳಾಂತರ ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ, ಈ ವರ್ಗೀಕರಣದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ನೀಡುವುದು ಅಗತ್ಯವಾಗಿದೆ. ತಾವು ನಿಜವಾಗಿಯೂ ಸ್ಥಳಾಂತರಗೊಂಡಿದ್ದಾರೆಯೇ? ತಾತ್ಕಾಲಿಕವಾಗಿ ಗೈರಾಗಿದ್ದಾರೆಯೇ? ಅಥವಾ ತಪ್ಪಾಗಿ

ವರ್ಗೀಕರಿಸಲಾಗಿದೆಯೇ? ಎಂಬುದನ್ನು ಪರಿಶೀಲಿಸಿಕೊಳ್ಳಲು ಅವಕಾಶ ನೀಡಬೇಕು. ಅಷ್ಟೇ ಅಲ್ಲದೇ, ಈ ಪಟ್ಟಿಯಲ್ಲಿರುವರಿಗೆ ನೋಟಿಸನ್ನೂ ನೀಡಿದೇ, ಡಿಲೀಟ್ ಮಾಡಿರುವ ಕ್ರಮ ಅಪ್ರಜಾತಾಂತ್ರಿಕ ಪ್ರಕ್ರಿಯೆ. ಕೂಡಲೇ ಎಎಸ್‌ಡಿಡಿಒ ಪಟ್ಟಿಯನ್ನು ಮತ್ತೊಮ್ಮೆ ಪುನರ್‌ಪರಿಶೀಲಿಸಬೇಕು.

-ಸರೋವರ್, ವಕ್ತಾರ, ನಾಗರಿಕ ಮತಕಾವಲು ಸಮಿತಿ

ಎಲ್ಲ ಅರ್ಹ ಮತದಾರರನ್ನು ಒಳಗೊಳ್ಳುವಂತಾಗಬೇಕು

ಮತದಾರರ ಪಟ್ಟಿಯ ಪರಿಷ್ಕರಣೆಯ ಉದ್ದೇಶ ಅನರ್ಹ ಹೆಸರುಗಳನ್ನು ಗುರುತಿಸುವುದರ ಜೊತೆಗೆ ಅರ್ಹ ಮತದಾರರೊಬ್ಬರೂ ಮಾಹಿತಿ ಕೊರತೆಯಿಂದ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿ. ಎಎಸ್‌ಡಿಡಿಒ ಪಟ್ಟಿಯಲ್ಲಿ ಹೆಸರು ಬಂದಿರುವ ಪ್ರತಿಯೊಬ್ಬ ಮತದಾರನಿಗೂ ವೈಯಕ್ತಿಕವಾಗಿ ಮಾಹಿತಿ ತಲುಪಿಸಿ, ತನ್ನ ಹೆಸರು ಏಕೆ ಪಟ್ಟಿಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಅಗತ್ಯವಿದ್ದರೆ ಸೂಕ್ತ ನಮೂನೆ ಹಾಗೂ ದಾಖಲೆಗಳೊಂದಿಗೆ ಹಕ್ಕು ಮಂಡಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು.

-ಅಕ್ಷಯ್, ವಕೀಲರು

ಅವಧಿ ವಿಸ್ತರಿಸಿ, ಜಾಗೃತಿ ಮೂಡಿಸಿ

ಎಎಸ್‌ಡಿಡಿಒ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರನಿಗೂ ಬೂತ್ ಮಟ್ಟದಲ್ಲಿ ಮಾಹಿತಿ ತಲುಪಿಸಬೇಕು. ಗ್ರಾಮಸಭೆ, ವಾರ್ಡ್ ಸಭೆ ಹಾಗೂ ಸ್ಥಳೀಯ ಮಟ್ಟದಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಸಬೇಕು. ನಮೂನೆ-6, 7, 8 ಸಲ್ಲಿಕೆ ಕುರಿತು ಸರಳ ಮಾಹಿತಿ ನೀಡಬೇಕು. ಹೊಸದಾಗಿ 18 ವರ್ಷ ತುಂಬಿದ ಯುವಕರಿಗೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅಗತ್ಯ ನೆರವು ನೀಡಬೇಕು. ಜತೆಗೆ, ಎಎಸ್‌ಡಿಡಿಒ ಪಟ್ಟಿಯಲ್ಲಿರುವವರ ಪೈಕಿ ಎಷ್ಟು ಮಂದಿ ನಮೂನೆ-6 ಸಲ್ಲಿಸಿದ್ದಾರೆ. ನಮೂನೆ-6 ಸಲ್ಲಿಸಿದವರಲ್ಲಿ ಎಷ್ಟು ಮಂದಿ ಎಎಸ್‌ಡಿಡಿಒ ಪಟ್ಟಿಯಲ್ಲಿದ್ದವರು ಮತ್ತು ಹೊಸ ಮತದಾರರು ಎಷ್ಟು ಎಂಬುದನ್ನು ಚುನಾವಣಾ ಆಯೋಗ ಪ್ರತ್ಯೇಕವಾಗಿ ಪ್ರಕಟಿಸಬೇಕು.

-ವೀರಸಂಗಯ್ಯ, ರೈತ ಹೋರಾಟಗಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮನೋಜ್ ಆಜಾದ್

contributor