ಹುತಾತ್ಮ ಯೋಧರನ್ನು ಇದುವರೆಗೆ ಮರೆಮಾಚಿಡಲು ಕಾರಣವೇನು?
ಆಪರೇಷನ್ ಸಿಂಧೂರದಲ್ಲಿ ಆರು ಸೈನಿಕರು ಹುತಾತ್ಮರಾಗಿದ್ದ ರೆಂಬುದನ್ನು 13 ತಿಂಗಳ ನಂತರ ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ಇಷ್ಟು ಕಾಲ ಅದನ್ನು ಮರೆಮಾಚಲಾಯಿತು. ಹುತಾತ್ಮರ ತ್ಯಾಗಗಳನ್ನು ಮರೆಮಾಚುವಲ್ಲಿಯೂ ಹಗರಣವಿರಬಹುದು.
ಕಾರ್ಯಾಚರಣೆಯ ಸಮಯದಲ್ಲಿ ಒಂದು ಅಥವಾ ಎರಡು ದಿನಗಳವರೆಗೆ ಮಾಹಿತಿ ತಡೆಹಿಡಿದರೆ ಅದನ್ನು ಒಪ್ಪಬಹುದು. ಆದರೆ 13 ತಿಂಗಳವರೆಗೆ ಹೆಸರುಗಳನ್ನು ಅಧಿಕೃತವಾಗಿ ಹೇಳದೇ ಉಳಿಯಲಾಯಿತು. ಈಗ ದಿಲ್ಲಿಯ ಯುದ್ಧ ಸ್ಮಾರಕದಲ್ಲಿರುವ ತ್ಯಾಗ ಚಕ್ರದ ಗ್ರಾನೈಟ್ ಫಲಕದಲ್ಲಿ ಆರು ಸೈನಿಕರ ಹೆಸರುಗಳನ್ನು ಕೆತ್ತಿದಾಗ ಇದು ಸ್ಪಷ್ಟವಾಯಿತು.
ಸುಬೇದಾರ್ ಮೇಜರ್ ಪವನ್ ಕುಮಾರ್, ರೈಫಲ್ಮ್ಯಾನ್ ಸುನೀಲ್ ಕುಮಾರ್, ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, ಅಗ್ನಿವೀರ್ ಎಂ. ಮುರಳಿ ನಾಯಕ್, ಹವಲ್ದಾರ್ ಸುನೀಲ್ ಕುಮಾರ್ ಸಿಂಗ್, ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರು ಆಪರೇಷನ್ ಸಿಂಧೂರದ ವೇಳೆ ಹುತಾತ್ಮರಾದ ಯೋಧರಾಗಿದ್ದಾರೆ.
ಯುದ್ಧದ ಸಮಯದಲ್ಲಿ ಕೊಲ್ಲಲ್ಪಟ್ಟ ಸೈನಿಕರ ಹೆಸರುಗಳನ್ನು ಮಾಧ್ಯಮ ವರದಿಗಳಲ್ಲಿ ಪ್ರಕಟಿಸಲಾಗಿಲ್ಲ ಎಂದಲ್ಲ. ಆದರೆ ಇಲ್ಲಿ ಪ್ರಶ್ನೆ ಅಧಿಕೃತ ಘೋಷಣೆಯ ಬಗ್ಗೆ ಇದೆ. ಹುತಾತ್ಮರ ಹೆಸರುಗಳನ್ನು ಮೊದಲ ಬಾರಿಗೆ ಔಪಚಾರಿಕವಾಗಿ ಬಿಡುಗಡೆ ಮಾಡಲಾಗಿದೆ.
ಹಲವು ಪತ್ರಿಕೆಗಳು ಇದರ ಬಗ್ಗೆ ಬರೆದಿದ್ದರೆ ಮತ್ತು ಸೇನೆ ಅದರ ಬಗ್ಗೆ ಆಕ್ಷೇಪಿಸುತ್ತಿದ್ದರೆ, ಸುದ್ದಿ ಪ್ರಕಟವಾದ ನಂತರ ಕೆಲ ಗಂಟೆಗಳ ಕಾಲ ಏಕೆ ಪ್ರತಿಕ್ರಿಯೆ ಇರಲಿಲ್ಲ? ಈ ಆರು ಸೈನಿಕರ ಹೆಸರುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಏಕೆ ದೃಢೀಕರಿಸಲಿಲ್ಲ?
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಯಾವುದೇ ಸೈನಿಕರಿಗೆ ಹಾನಿಯಾಗಿಲ್ಲ ಎಂದು ಏಕೆ ಹೇಳಿದ್ದರು ಎಂಬುದನ್ನು ಸೇನೆ ವಿವರಿಸಬೇಕಾಗಿತ್ತು. ಆಪರೇಷನ್ ಸಿಂಧೂರ 2025ರ ಮೇ 7ರಂದು ಪ್ರಾರಂಭವಾಯಿತು. ಮೇ 10ರಂದು ಸಂಜೆ 5:30ಕ್ಕೆ ಕದನ ವಿರಾಮ ಘೋಷಣೆ ಬಂತು.
ಎರಡು ತಿಂಗಳು 18 ದಿನಗಳ ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿಕೆ ನೀಡಿ, ಆಪರೇಷನ್ ಸಿಂಧೂರದಲ್ಲಿ ಯಾವುದೇ ಸೈನಿಕರಿಗೆ ಹಾನಿಯಾಗಿಲ್ಲ ಎಂದು ಹೇಳಿದರು. ಇದು ಸುಳ್ಳಲ್ಲವೇ? ಅಲ್ಲಿಯವರೆಗೆ ಆರು ಸೈನಿಕರು ಹುತಾತ್ಮರಾಗಿದ್ದಾರೆಂದು ಅವರಿಗೆ ತಿಳಿದಿರಲಿಲ್ಲವೇ?
ಆಪರೇಷನ್ ಸಿಂಧೂರ್ ಮೇ 10ರಂದು ಕೊನೆಗೊಂಡ ನಂತರ ಹುತಾತ್ಮರ ಹೆಸರುಗಳನ್ನು ಬಹಿರಂಗಪಡಿಸಬಹುದಿತ್ತು. ಹುತಾತ್ಮರ ಹೆಸರುಗಳನ್ನು ಮರೆಮಾಡುವುದು ಹಗರಣಕ್ಕಿಂತ ಕಡಿಮೆಯಲ್ಲ. ಏಕೆಂದರೆ ಹುತಾತ್ಮರ ಹೆಸರುಗಳನ್ನು ಮರೆಮಾಚುವುದು ಅವರಿಗೆ ಮಾಡುವ ಅವಮಾನವಾಗಿದೆ.
ಸರಿಯಾದ ಸಂಖ್ಯೆಯನ್ನು ಬಹಿರಂಗಪಡಿಸಲಿಲ್ಲವೆಂದರೆ, ಸರಕಾರ ತನ್ನ ಇಮೇಜ್ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದೆ ಮತ್ತು ತಾನು ಯಾವುದೇ ಹಾನಿಗೆ ಒಳಗಾಗದ ಶಕ್ತಿಶಾಲಿ ಎಂದು ತೋರಿಸಿಕೊಳ್ಳಲು ಬಯಸುತ್ತಿದೆ ಎಂದರ್ಥ.
ಸಂಸತ್ತಿನಲ್ಲಿ ಸುಳ್ಳು ಹೇಳಲಾಯಿತು ಮತ್ತು ಒಬ್ಬ ಹಿರಿಯ ಸಚಿವರು ಸುಳ್ಳು ಹೇಳಿದರು. ಇದು ಕೇವಲ ಸಂಸದೀಯ ಸವಲತ್ತಿನ ಉಲ್ಲಂಘನೆಯಲ್ಲ. ಇದು ವಾಸ್ತವವಾಗಿ ನಮ್ಮ ಸೈನಿಕರ ಅತ್ಯುನ್ನತ ತ್ಯಾಗಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಹೇಳಿದ್ದಾರೆ.
ಈ ಸರಕಾರ ಆ ಹುತಾತ್ಮರನ್ನು ಅನಾಮಧೇಯರನ್ನಾಗಿಸುವ ಪಾಪ ಮಾಡಿದೆ. ಅವರ ತ್ಯಾಗವನ್ನು ಅಗೌರವಿಸುವುದು ಮೋದಿ ಸರಕಾರದ ನಿಜವಾದ ಸ್ವರೂಪ ಎಂದಿದ್ದಾರೆ ಸುಪ್ರಿಯಾ.
2025ರ ಜುಲೈ 28ರಂದು ರಾಜನಾಥ್ ಸಿಂಗ್ ಮಾಡಿದ ಭಾಷಣವನ್ನು ಚರ್ಚಿಸಲಾಗುತ್ತಿದೆ. ಏಕೆಂದರೆ ಆವತ್ತು ಅವರು ಯಾವುದೇ ಸೈನಿಕನಿಗೆ ಹಾನಿಯಾಗಿಲ್ಲ ಎಂದು ಹೇಳಿದ್ದರು. ಆದರೆ ಈಗ, 13 ತಿಂಗಳ ನಂತರ ಹುತಾತ್ಮ ಸೈನಿಕರ ಹೆಸರುಗಳನ್ನು ಅಧಿಕೃತವಾಗಿ ಹೇಳಲಾಯಿತು. ಇದು ಎರಡು ಅಥವಾ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಕದನ ವಿರಾಮದ ನಂತರ, ಪ್ರಧಾನಿ ಮೋದಿ ಮೇ 13ರಂದು ಪಂಜಾಬ್ನ ಆದಂಪುರ ವಾಯುನೆಲೆಗೆ ಭೇಟಿ ನೀಡಿ ಭಾಷಣ ಮಾಡಿದರು. ಅವರು ತಮ್ಮ ಭಾಷಣದಲ್ಲಿ ಹುತಾತ್ಮ ಸೈನಿಕರ ಹೆಸರುಗಳನ್ನು ಉಲ್ಲೇಖಿಸಲಿಲ್ಲ.
ಮೇ 29ರಂದು, ಪ್ರಧಾನಿ ರೋಡ್ ಶೋಗಾಗಿ ಪಾಟ್ನಾಗೆ ಆಗಮಿಸಿ, ವಿಜಯೋತ್ಸವ ನಡೆದಾಗಲೂ 6 ಹುತಾತ್ಮರ ಹೆಸರುಗಳನ್ನು ಬಿಡುಗಡೆ ಮಾಡಲಿಲ್ಲ. ಹುತಾತ್ಮರ ಹೆಸರುಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲು 13 ತಿಂಗಳುಗಳು ಬೇಕಾಯಿತು. ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಿಸಲು ಇಷ್ಟೊಂದು ವಿಳಂಬ ಏಕೆ? ಆ ಸಮಯದಲ್ಲಿ ಮಾಹಿತಿ ಬಹಿರಂಗಪಡಿಸಿದ್ದರೆ, ಆ ಸೈನಿಕನ ರಾಜ್ಯ, ಜಿಲ್ಲೆ ಮತ್ತು ಪಟ್ಟಣದ ಇನ್ನೂ ಹೆಚ್ಚಿನ ಜನರು ಗೌರವ ಸಲ್ಲಿಸಲು ಹೋಗುತ್ತಿದ್ದರು.
ಯುದ್ಧದ ಸಮಯದಲ್ಲಿ ಹೆಸರನ್ನು ಸಾರ್ವಜನಿಕಗೊಳಿಸುವುದಕ್ಕೂ 13 ತಿಂಗಳ ನಂತರ ಅದನ್ನು ಹೇಳುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಹುತಾತ್ಮನ ಪೋಷಕರು ಈ ಮಾಹಿತಿಯಿಂದ ವಂಚಿತರಾಗಿದ್ದರು. ಅವರ ಕುಟುಂಬ ಎಲ್ಲಾ ರೀತಿಯ ಬೆಂಬಲ ಪಡೆಯಬೇಕಾದ ಸಮಯದಲ್ಲಿ ಹುತಾತ್ಮನ ಹೆಂಡತಿ ಮತ್ತು ಮಕ್ಕಳು ಸಹ ವಂಚಿತರಾಗಿದ್ದರು.
ಆ ಸಮಯದಲ್ಲಿ, ಅಗ್ನಿವೀರ್ ಎಂ. ಮುರಳಿ ನಾಯಕ್ ಅವರ ಕುಟುಂಬ ಪಿಂಚಣಿ ಮತ್ತು ಕಲ್ಯಾಣ ಸೌಲಭ್ಯಗಳ ಹಕ್ಕಿಗಾಗಿ ಕೋರ್ಟ್ ಮೊರೆ ಹೋಗಬೇಕಾಯಿತು. ಅಗ್ನಿಪಥ ಯೋಜನೆಯಡಿ ನೇಮಕಗೊಂಡ ಸೈನಿಕರಿಗೆ ಇತರ ಸೈನಿಕರಂತೆಯೇ ಮರಣೋತ್ತರ ಹಕ್ಕುಗಳನ್ನು ನೀಡಬೇಕೆಂದು ಕೇಳಿಕೊಳ್ಳಲಾಯಿತು.
ಅದಕ್ಕೆ ಪ್ರತಿಕ್ರಿಯಿಸಿದ ಸರಕಾರ, ಅಗ್ನಿವೀರ್ ಸೈನಿಕರು ಮತ್ತು ನಿಯಮಿತ ನೇಮಕಾತಿ ಮೂಲಕ ನೇಮಕಗೊಂಡ ಸೈನಿಕರ ನಡುವೆ ಯಾವುದೇ ಸಮಾನತೆ ಇಲ್ಲ ಎಂದು ಅಫಿಡವಿಟ್ ಸಲ್ಲಿಸಿತು. ನೇಮಕಾತಿ ಪ್ರಕ್ರಿಯೆ ವಿಭಿನ್ನವಾಗಿರಬಹುದು, ಪರಿಸ್ಥಿತಿಗಳು ವಿಭಿನ್ನವಾಗಿರಬಹುದು. ಆದರೆ ಗಡಿಯಲ್ಲಿ ಹುತಾತ್ಮರಾಗುವುದರಲ್ಲೂ ಹೇಗೆ ಪ್ರತ್ಯೇಕತೆ ಲೆಕ್ಕಾಚಾರ ಹಾಕಲು ಸಾಧ್ಯ? ಆದರೆ ಮೋದಿ ಸರಕಾರ ಅದನ್ನು ಕೂಡ ಮಾಡಿತು.
5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಕಾಣುವ ಸರಕಾರ ಹುತಾತ್ಮರಿಗೆ ಜೀವಮಾನದ ಪಿಂಚಣಿ ಒದಗಿಸಲು ಸಾಧ್ಯವಿಲ್ಲವೇ? ಈ ದೇಶದಲ್ಲಿ ಎಷ್ಟೆಲ್ಲ ನಾಯಕರು ವಿಧಾನಸಭೆ, ವಿಧಾನ ಪರಿಷತ್ತು, ರಾಜ್ಯಸಭೆ ಮತ್ತು ಲೋಕಸಭೆಯಿಂದ ಪಿಂಚಣಿ ಪಡೆಯುತ್ತಿಲ್ಲವೆ? ಸರಕಾರ ಹುತಾತ್ಮರಿಗೆ ಪಿಂಚಣಿ ನೀಡುವುದಿಲ್ಲ. ಅವರ ಹೆಸರುಗಳನ್ನು ಸಹ ಉಲ್ಲೇಖಿಸುವುದಿಲ್ಲ. ಹಾಗಾದರೆ ಅವರ ಗೌರವಾರ್ಥ ರೋಡ್ ಶೋಗಳು ಮತ್ತು ರ್ಯಾಲಿಗಳನ್ನು ಹೇಗೆ ನಡೆಸುತ್ತದೆ? ಇದು ನಿಜಕ್ಕೂ ವಿಷಾದಕರ.
ಆಪರೇಷನ್ ಸಿಂಧೂರಕ್ಕಾಗಿ ಸರಕಾರವನ್ನು ಹೊಗಳಲಾಯಿತು, ಆದರೆ ಹುತಾತ್ಮ ಸೈನಿಕರ ಹೆಸರುಗಳನ್ನು ಬಿಡುಗಡೆ ಮಾಡಲಿಲ್ಲ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ ಹುತಾತ್ಮರಾದ ಆರು ಸೈನಿಕರ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಹಾಗಿದ್ದಲ್ಲಿ, ಸಚಿವರು ಪ್ರಶ್ನಾರ್ಹರು ಅಥವಾ ಅವರು ಸತ್ಯವನ್ನು ತಿಳಿದಿದ್ದರೂ ಸಂಸತ್ತನ್ನು ದಾರಿ ತಪ್ಪಿಸಲು ನಿಂತರು ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಪತ್ರಿಕಾ ವರದಿಗಳು ಹುತಾತ್ಮರ ಹೆಸರುಗಳನ್ನು ಬೇರೆ ಬೇರೆಯಾಗಿ ಪ್ರಕಟಿಸಿವೆ ಎಂಬುದು ನಿಜ. ಭಾರತೀಯ ವಾಯುಪಡೆ ಆಗಸ್ಟ್ 14ರಂದು ಕೆಲ ಫೋಟೊಗಳನ್ನು ಬಿಡುಗಡೆ ಮಾಡಿತು. ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ಪ್ರೀತ್ ಸಿಂಗ್ ಅವರು ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರ ಮನೆಗೆ ಭೇಟಿ ನೀಡಿದರು. ಆಗಲೂ ಪ್ರಶ್ನೆಗಳನ್ನು ಎತ್ತಲಾಯಿತು.
ರೈಫಲ್ಮನ್ ಸುನೀಲ್ ಕುಮಾರ್ ಅವರಿಗೆ ಮರಣೋತ್ತರವಾಗಿ ವೀರಚಕ್ರ ನೀಡಲಾಯಿತು. ಆದರೆ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಈ ಸಮಾರಂಭದ ವೀಡಿಯೊದಲ್ಲಿ ಕೂಡ ಆಪರೇಷನ್ ಸಿಂಧೂರವನ್ನು ಉಲ್ಲೇಖಿಸಿಲ್ಲ.
ಗಾಯಗೊಂಡವರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ, ಪ್ರತಿಯೊಬ್ಬ ಹುತಾತ್ಮರನ್ನು ಸರಕಾರಿ ಗೌರವಗಳೊಂದಿಗೆ ಅವರ ಮನೆಗೆ ಕರೆದೊಯ್ಯಲಾಯಿತು. ಸಾವಿರಾರು ಜನರು ಗೌರವ ಸಲ್ಲಿಸಲು ಸೇರುತ್ತಿದ್ದರು.
ಆದರೆ ಪೂರ್ವ ಲಡಾಖ್ನಲ್ಲಿ ಗಾಲ್ವಾನ್ ಕಣಿವೆ ಘಟನೆಯ ನಂತರ ಎಲ್ಲವೂ ಬದಲಾಯಿತು. ಮೇ 2020ರಲ್ಲಿ ಚೀನಾದ ಸೈನ್ಯ ಗಾಲ್ವಾನ್ ಕಣಿವೆಗೆ ನುಸುಳಿದೆ ಎಂಬ ಸುದ್ದಿ ಬರಲು ಪ್ರಾರಂಭಿಸಿತು. ಆದರೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಎಲ್ಲೆಡೆ ಮೌನ ಆವರಿಸಿತು. ಮಾಧ್ಯಮಗಳು ಭಯದಿಂದಾಗಿ ಈ ಸುದ್ದಿಯನ್ನು ಮುಟ್ಟಲೇ ಇಲ್ಲ.
ಅಜಯ್ ಶುಕ್ಲಾ ಗಾಲ್ವಾನ್ ಕಣಿವೆಯ ಬಗ್ಗೆ ಬರೆದಾಗ ಅವರನ್ನು ದೇಶದ್ರೋಹಿ ಎಂದು ಕರೆಯಲಾಯಿತು.
ಚೀನಾ ಭಾರತದ ಭೂಮಿಯನ್ನು ಕಸಿದುಕೊಂಡಿದೆ. ಚೀನಾದ ಅತಿಕ್ರಮಣದ ಬಗ್ಗೆ ಸರಕಾರ ಮಾಹಿತಿಯನ್ನು ಮರೆಮಾಡುತ್ತಿದೆ ಎಂದು ಅಜಯ್ ಶುಕ್ಲಾ ಆಗ ಬರೆದಿದ್ದರು. ಪತ್ರಕರ್ತರಿಗೆ ಅದನ್ನು ವರದಿ ಮಾಡಬೇಡಿ ಎಂದು ಹೇಳಲಾಗುತ್ತಿತ್ತು. ಪೂರ್ವ ಲಡಾಖ್ನ ಗಾಲ್ವಾನ್ನಲ್ಲಿ ಭಾರತ ಮತ್ತು ಚೀನಾ ನಡುವೆ ಘರ್ಷಣೆ ಸಂಭವಿಸಿದಾಗ, ಯಾವುದೇ ಅಧಿಕೃತ ಹೇಳಿಕೆ ನೀಡಲಿಲ್ಲ ಮತ್ತು ದೇಶವನ್ನು ಕತ್ತಲೆಯಲ್ಲಿ ಇಡಲಾಗಿತ್ತು.
ಜೂನ್ 16ರಂದು ಸೇನೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಟ್ವೀಟ್ ಮಾಡಿದಾಗ, ಅಜಯ್ ಶುಕ್ಲಾ ಈ ಸಂಖ್ಯೆ 20ಕ್ಕಿಂತ ಹೆಚ್ಚಿರಬಹುದು ಎಂದು ಬರೆದಿದ್ದರು.
ಕಡೆಗೆ ಸೇನೆ ಅಧಿಕೃತವಾಗಿ ಒಪ್ಪಿಕೊಂಡ ಸಾವಿನ ಸಂಖ್ಯೆ, ಅಜಯ್ ಶುಕ್ಲಾ ಹೇಳಿದಂತೆಯೇ ಇತ್ತು. ವಿಶ್ಲೇಷಣೆಗಳು ಗಮನಿಸುವ ಪ್ರಕಾರ, ಪರಿಸ್ಥಿತಿ ಎಷ್ಟು ಭೀಕರವಾಗಿತ್ತೆಂದರೆ, ಒಬ್ಬ ಸೈನಿಕ ಹುತಾತ್ಮನಾಗಿರುವ ಬಗ್ಗೆ ಸುದ್ದಿ ಅವನ ಮನೆಗೆ ತಲುಪಿತು ಮತ್ತು ಎಲ್ಲಾ ಅಧಿಕಾರಿಗಳು ಬಂದರು. ನಂತರ ಸೈನಿಕ ತಾನು ಜೀವಂತವಾಗಿದ್ದೇನೆ ಎಂದು ಹೇಳಲು ಮನೆಗೆ ಕರೆ ಮಾಡಬೇಕಾಯಿತು.
ಅಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನತೆಯನ್ನು ಎರಡು ತಿಂಗಳ ಕಾಲ ದೇಶದಿಂದ ಮರೆಮಾಡಲಾಯಿತು. ಯಾರ ಇಮೇಜ್ ಅನ್ನು ಪ್ರಚಾರ ಮಾಡಲಿಕ್ಕಾಗಿ ಇದೆಲ್ಲವೂ ನಡೆಯಿತು?
ಆಪರೇಷನ್ ಸಿಂಧೂರದ ಸಮಯದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಿಸಲಾಗಿಲ್ಲ. ಭಾರತೀಯ ವಾಯುಪಡೆಯ ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ? ಇದರಲ್ಲಿ ಚೀನಾ ಯಾವ ಪಾತ್ರ ವಹಿಸಿದೆ? ಈ ಎಲ್ಲಾ ವಿಷಯಗಳ ಬಗ್ಗೆ ಹೇಳಿಕೆಗಳು ಹೊರಬರುತ್ತಲೇ ಇವೆ, ಆದರೆ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮದ ಕ್ರೆಡಿಟ್ ತೆಗೆದುಕೊಂಡರು. ವ್ಯಾಪಾರ ಒಪ್ಪಂದಕ್ಕೆ ಬೆದರಿಕೆ ಹಾಕುವ ಮೂಲಕ ಯುದ್ಧ ನಿಲ್ಲಿಸಲಾಗಿದೆ ಎಂದು ಹೇಳಿದ್ದರು. ಆದರೆ ಮೋದಿಯವರು ಟ್ರಂಪ್ ಬಗ್ಗೆ ಮಾತನಾಡಲಿಲ್ಲ.
ಆಪರೇಷನ್ ಸಿಂಧೂರದ ಬಗ್ಗೆ ಅಷ್ಟೊಂದು ಹೇಳಿದ ಮೋದಿ, ಅದರಲ್ಲಿ ಹುತಾತ್ಮರಾದವರ ಬಗ್ಗೆ ಹೇಳಲೇ ಇಲ್ಲ. ಜನರನ್ನು ಹೇಡಿಗಳನ್ನಾಗಿ ಮಾಡಲಾಗಿದೆ ಮತ್ತು ಅವರಿಗೆ ಯಾವ ಸತ್ಯವೂ ತಿಳಿಯದಂತೆ ಮಾಡಲಾಗಿದೆ.
ಮೋದಿ ಗುಣಗಾನ ಮಾತ್ರ ಅಬಾಧಿತವಾಗಿ ನಡೆಯುತ್ತಲೇ ಇದೆ