ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಮೇ 14 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ : ಎಂ.ಶಶಿಧರ್
ರಾಯಚೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವರ್ಧೆಗೆ ಬಿದ್ದಂತ ಬೆಲೆ ಏರಿಕೆಯನ್ನು ಮಾಡುವ ಮೂಲಕ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ಜನರನ್ನು ದೋಚುತ್ತಾ, ಶೋಷಣೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಜನವಿರೋಧಿ ನೀತಿಗಳನ್ನು ಖಂಡಿಸಿ ಬೃಹತ್ ಜನ ಹೋರಾಟವು ಎಸ್.ಯು.ಸಿ.ಐ ಪಕ್ಷದಿಂದ ಮೇ 14 ರಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಯುಸಿಐ ಪಕ್ಷದ ರಾಜ್ಯ ಸೆಕ್ರೇಟೇರಿಯಟ್ ಸದಸ್ಯರಾದ ಎಂ.ಶಶಿಧರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆಗಳನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿದೆ. ಅಲ್ಲದೇ ಎಲ್ಲಾ ವಸ್ತುಗಳ ಮೇಲೆ ಅಧಿಕ ತೆರಿಗೆಯನ್ನು ವಿಧಿಸುತ್ತಿದ್ದು, ನಮ್ಮ ಮಕ್ಕಳಿಗೆ ಶಿಕ್ಷಣದ ವೆಚ್ಚ, ಆರೋಗ್ಯದ ವೆಚ್ಚವನ್ನು ನಾವೇ ಭರಿಸಬೇಕಾದ ದುರ್ಗತಿ ಬಂದಿದೆ. ಜನರ ತೆರಿಗೆಯ ಹಣ ಅಭಿವೃದ್ಧಿ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳು, ದೊಡ್ಡ ಗುತ್ತಿಗೆದಾರರು, ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಜೇಬು ಸೇರುತ್ತಿವೆ. ಯುವನತೆಗೆ ಉದ್ಯೋಗ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಎಲ್ಲಾ ನೈಜ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಹಿನ್ನೆಲೆಯಲ್ಲಿ ಎಸ್ಯುಸಿಐ ರಾಜ್ಯ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದು , ರೈತರು,ಕಾರ್ಮಿಕರು, ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಚನ್ನಬಸವ ಜಾನೇಕಲ್, ಮಹೇಶ್ ಚೀಕಲಪರ್ವಿ, ವೀರೇಶ್ ಎನ್.ಎಸ್., ಮಲ್ಲನಗೌಡ , ಅಣ್ಣಪ್ಪ ಉಪಸ್ಥಿತರಿದ್ದರು