ರಂಗಭೂಮಿಗೆ ನೆರವಾಗುವ ‘ಕೆಲಸಗಾರರ ಪ್ರೆಸ್’

ಈಚಿನ ಅಲ್ಲದೆ 60 ವರ್ಷಗಳ ಹಿಂದಿನ ನಾಟಕಗಳ ಕೃತಿಗಳನ್ನೂ ಅವರು ಕೇಳಿದವರಿಗೆ ಒದಗಿಸುತ್ತಾರೆ. ಅಂದರೆ ಪಿ.ಬಿ.ಧುತ್ತರಗಿ, ಕೆ.ಎನ್. ಸಾಳುಂಕೆ, ಎನ್.ಎಸ್.ಜೋಶಿ, ಎಚ್.ಆರ್.ಭಸ್ಮೆ, ಗುಡಿಗೇರಿ ಬಸವರಾಜ, ಪ್ರಕಾಶ ಕಡಪಟ್ಟಿ ಅವರ ನಾಟಕಗಳು ಲಭ್ಯ. ಈಚೆಗೆ ಪ್ರಸಿದ್ಧರಾದ ಡಿ.ಆರ್. ಪೂಜಾರ, ಬಸುಕುಮಾರ ಸವದತ್ತಿ, ಶೇಖರ ಕುಂಬಾರ, ರಮೇಶ ಬಡಿಗೇರ, ಪರಶುರಾಮ ಬಣಕಾರ ಅವರ ನಾಟಕ ಕೃತಿಗಳನ್ನು ಗ್ರಾಮೀಣರು ಕೊಳ್ಳುತ್ತಲೇ ಇರುತ್ತಾರೆ. ಹೀಗೆ ಅವರ ಬಳಿ 500ಕ್ಕೂ ಅಧಿಕ ನಾಟಕ ಕೃತಿಗಳು ಲಭ್ಯ.

Update: 2024-03-22 08:23 GMT

ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ರಸ್ತೆಯ ಚಂದ್ರಕಲಾ ಟಾಕೀಸ್ ಹಿಂದೆ ಇರುವ ಕೆಲಸಗಾರರ ಪ್ರೆಸ್ ಅಂದರೆ ಪ್ರಿಂಟಿಂಗ್ ಪ್ರೆಸ್ಸಿಗೆ ನೀವು ಹೋದರೆ ಹಳ್ಳಿಗಳಲ್ಲಿ ಜಾತ್ರೆಗೆ ಆಡುವ ನಾಟಕ ಕೃತಿಗಳು ಸಿಗುತ್ತವೆ. ಜೊತೆಗೆ ನಾಟಕ ಆಡಿಸಲು ಅಗತ್ಯವಾದ ಕಲಾವಿದರಿಂದ ಹಿಡಿದು ಸಕಲ ಸಲಕರಣೆಗಳನ್ನು ಒದಗಿಸುತ್ತಾರೆ ಶ್ರೀನಿವಾಸ ದತ್ತುಸಾ ಬೋಚಿಗೇರಿ.

ಕೆಲಸಗಾರರ ಪ್ರೆಸ್ ಇದ್ದುದು ಈಗ ಕೆಲಸಗಾರರ ಆಫ್ ಸೆಟ್ ಪ್ರಿಂಟರ್ಸ್, ಕೆಲಸಗಾರರ ಕಲರ್ಸ್ ಎಂದೂ ಇವೆ. ಇವು ಶ್ರೀನಿವಾಸ ಅವರ ಸೋದರರಿಗೆ ಸಂಬಂಧಿಸಿವೆ.

ಇದೆಲ್ಲ ಶುರುವಾಗಿದ್ದು ಎಂಭತ್ತು ವರ್ಷಗಳ ಹಿಂದೆ. ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹುಡುಗರು ಸೇರಿ ಶುರು ಮಾಡಿದರು. ಅವರೆಂದರೆ ದತ್ತುಸಾ ಬೋಚಿಗೇರಿ, ತುಳಜಪ್ಪಾ ರೋಖಡೆ ಹಾಗೂ ಹಿರೇಮಠ. ದತ್ತುಸಾ ಅವರು ಕೆಲಸದ ಆರ್ಡರ್ ತರುತ್ತಾ ವ್ಯವಸ್ಥಾಪಕರಾದರು. ಇನ್ನೊಬ್ಬರು ಮೊಳೆ ಜೋಡಿಸಿದರೆ ಮತ್ತೊಬ್ಬರು ಮುದ್ರಣ ಕಾರ್ಯ ನಿರ್ವಹಿಸಿದರು. ಹೀಗೆ ಕೆಲಸಗಾರರೇ ಶುರು ಮಾಡಿದ್ದಕ್ಕೆ ಕೆಲಸಗಾರರ ಪ್ರೆಸ್ ಎಂದು ಪ್ರಸಿದ್ಧವಾಯಿತು. ಬಳಿಕ ಮೂವರ ನಡುವೆ ಭಿನ್ನಾಭಿಪ್ರಾಯ ಹೆಚ್ಚಿ, ರೋಖಡೆ ಹಾಗೂ ಹಿರೇಮಠ ಬಿಟ್ಟು ಹೋದಾಗ ದತ್ತುಸಾ ಅದೇ ಹೆಸರಲ್ಲಿ ಮುಂದುವರಿಸಿದರು.

ನಾಟಕದ ಕರಪತ್ರ, ಟಿಕೆಟ್, ನಾಟಕ ಕೃತಿಗಳ ಮುದ್ರಣ... ಹೀಗೆ ಕಂಪೆನಿ ನಾಟಕಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ದತ್ತುಸಾ ಕೈಗೊಂಡರು. ಗುಬ್ಬಿ ಕಂಪೆನಿ, ಸುಬ್ಬಯ್ಯ ನಾಯ್ಡು ಕಂಪೆನಿ, ಸುಳ್ಳದ ದೇಸಾಯಿ ಕಂಪೆನಿಯಿಂದ ಹಿಡಿದು ಉತ್ತರ ಕರ್ನಾಟಕದ ಎಲ್ಲ ಕಂಪೆನಿಗಳ ನಾಟಕಕ್ಕೆ ಸಂಬಂಧಿಸಿದ ಮುದ್ರಣ ಕೆಲಸಗಳನ್ನು ದತ್ತುಸಾ ನಿರ್ವಹಿಸಿದರು. ಇದರಿಂದ ರಂಗಭೂಮಿಯ ಕಲಾವಿದರ, ರಂಗಾಸಕ್ತರ, ನಾಟಕ ಆಡಿಸುವವರ ಅಡ್ಡೆಯಾಯಿತು ಕೆಲಸಗಾರರ ಪ್ರೆಸ್.

ದತ್ತುಸಾ ಅವರಿಗೆ ನಾಲ್ವರು ಮಕ್ಕಳು. ಶ್ರೀಕಾಂತ, ಶ್ರೀನಿವಾಸ, ಶ್ರೀಧರ ಹಾಗೂ ಪರಶುರಾಮ. ಇವರೆಲ್ಲ ದತ್ತುಸಾ ಅವರಿಗೆ ನೆರವಾಗುತ್ತ, ಮುದ್ರಣಕ್ಕೆ ಸಂಬಂಧಿಸಿದವುಗಳನ್ನು ಕಲಿತರು. ದತ್ತುಸಾ ನಿಧನದ ನಂತರ ಬೇರೆ ಬೇರೆಯಾದ ಇವರೆಲ್ಲ ನಾಟಕಕ್ಕೆ ಸಂಬಂಧಿಸಿದವುಗಳ ಕಾರ್ಯ ಕೈಗೊಂಡರು. ಇವರಲ್ಲಿ ಶ್ರೀಕಾಂತ ಹಾಗೂ ಶ್ರೀಧರ ನಿಧನರಾಗಿದ್ದಾರೆ. ಶ್ರೀನಿವಾಸ ಅವರು ಕಂಪೆನಿ ನಾಟಕ ಕೃತಿಗಳ ಮುದ್ರಣ, ಕರಪತ್ರ ಮುದ್ರಣ ಕೈಗೊಂಡರೆ, ಪರಶುರಾಮ ಅವರು ಹವ್ಯಾಸಿ ರಂಗತಂಡಗಳು ಅಂದರೆ ಜಾತ್ರೆ, ಉತ್ಸವಗಳಲ್ಲಿ ನಾಟಕ ಆಡುವವರಿಗೆ ಕರಪತ್ರ, ಆಹ್ವಾನಪತ್ರ ಮುದ್ರಿಸುತ್ತಾರೆ.

ಶ್ರೀನಿವಾಸ ಅವರ ಮಗ ದೀಪಕ್ ಅವರು, ತಮ್ಮ ತಂದೆಗೆ ನೆರವಾಗುತ್ತಿದ್ದಾರೆ. ಈ ಮೂಲಕ ಈ ವೃತ್ತಿಯು ಮೂರನೇ ತಲೆಮಾರಿಗೆ ಮುಂದುವರಿದಿದೆ. ಹೀಗೆ 30 ವರ್ಷಗಳ ಹಿಂದೆ ನಾಟಕ ಕೃತಿಗಳ ಮುದ್ರಣ ಕಾರ್ಯ ಈಗ ವಹಿವಾಟಾಗಿದೆ. ಇದರಿಂದ ಈಚಿನ ಅಲ್ಲದೆ 60 ವರ್ಷಗಳ ಹಿಂದಿನ ನಾಟಕಗಳ ಕೃತಿಗಳನ್ನೂ ಅವರು ಕೇಳಿದವರಿಗೆ ಒದಗಿಸುತ್ತಾರೆ. ಅಂದರೆ ಪಿ.ಬಿ.ಧುತ್ತರಗಿ, ಕೆ.ಎನ್. ಸಾಳುಂಕೆ, ಎನ್.ಎಸ್.ಜೋಶಿ, ಎಚ್.ಆರ್.ಭಸ್ಮೆ, ಗುಡಿಗೇರಿ ಬಸವರಾಜ, ಪ್ರಕಾಶ ಕಡಪಟ್ಟಿ ಅವರ ನಾಟಕಗಳು ಲಭ್ಯ. ಈಚೆಗೆ ಪ್ರಸಿದ್ಧರಾದ ಡಿ.ಆರ್. ಪೂಜಾರ, ಬಸುಕುಮಾರ ಸವದತ್ತಿ, ಶೇಖರ ಕುಂಬಾರ, ರಮೇಶ ಬಡಿಗೇರ, ಪರಶುರಾಮ ಬಣಕಾರ ಅವರ ನಾಟಕ ಕೃತಿಗಳನ್ನು ಗ್ರಾಮೀಣರು ಕೊಳ್ಳುತ್ತಲೇ ಇರುತ್ತಾರೆ. ಹೀಗೆ ಅವರ ಬಳಿ 500ಕ್ಕೂ ಅಧಿಕ ನಾಟಕ ಕೃತಿಗಳು ಲಭ್ಯ.

ಅಲ್ಲದೆ ಡ್ರಾಮಾ ಸೀನ್ಸ್ ಅಂದರೆ ಪರದೆಗಳನ್ನು ಸಿದ್ಧಪಡಿಸಲು ತಮ್ಮ ಕೆಲಸಗಾರರಿಗೆ ಶ್ರೀನಿವಾಸ ವಹಿಸಿಕೊಟ್ಟಿದ್ದಾರೆ.

25 ವರ್ಷಗಳ ಹಿಂದೆ ಅಂದರೆ ಮೊಬೈಲ್ ಫೋನ್ ಬರುವ ಮುನ್ನ ಕೆಲಸಗಾರರ ಪ್ರೆಸ್ಸಿಗೆ ನಾಟಕ ಆಡಿಸುವವರು ಹೋದರೆ ಶ್ರೀನಿವಾಸ ಅವರು ಪರದೆ ಕೊಟ್ಟು, ಕಲಾವಿದರನ್ನು, ಸಂಗೀತಗಾರರನ್ನೂ ಪರಿಚಯಿಸುತ್ತಿದ್ದರು.

ಆದರೆ ಈಗ ನಾಟಕ ಕೃತಿ ಮಾತ್ರ ಕೊಂಡು, ಮೊಬೈಲ್ ಫೋನ್ ಮೂಲಕ ಕಲಾವಿದರನ್ನು, ಸಂಗೀತಗಾರರನ್ನು ಸಂಪರ್ಕಿಸುತ್ತಾರೆ. ಇದರೊಂದಿಗೆ ಕೆಲಸಗಾರರ ಪ್ರೆಸ್ ಹಿಂದೆ ಇರುವ ಗಣೇಶಪೇಟೆಯಲ್ಲಿದ್ದ ಕಲಾವಿದರು ಚದುರಿ ಹೋಗಿದ್ದಾರೆ. 25 ವರ್ಷಗಳ ಹಿಂದೆ ಐವತ್ತಕ್ಕೂ ಹೆಚ್ಚು ಇದ್ದ ಕಲಾವಿದೆಯರು ಈಗ ಕಡಿಮೆ ಆಗಿದ್ದಾರೆ. ‘‘50 ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಆಡುವ ನಾಟಕಕ್ಕೆ ಮೂರು ಬಾರಿ ತಾಲೀಮಿಗೆ ಕಲಾವಿದೆಯರು ಹೋಗುತ್ತಿದ್ದರು. ಆಮೇಲೆ ಎರಡಕ್ಕೆ ಇಳಿದರು. ಬಳಿಕ ಒಂದೇ ತಾಲೀಮಿಗೆ ಹೋದರು. ಈಗ ನಾಟಕದ ದಿನ ರಾತ್ರಿ ಹತ್ತು ಗಂಟೆಗೆ ನೇರ ನಾಟಕಕ್ಕೆ ಹೋಗುತ್ತಾರೆ. ನಾಟಕದ ಸಂಭಾಷಣೆ ಕಲಿತಿರುವುದಿಲ್ಲ. ನಾಟಕ ಶುರುವಾದ ಮೇಲೆ ಅವರು ಆಡಿದ್ದೇ ಆಟ, ಮಾತಾಡಿದ್ದೇ ಖರೆ. ಹಿಂಗ ಈಗಿನ ಕಲಾವಿದರಿಗೆ ಶ್ರದ್ಧೆ ಕಮ್ಮಿ. ಇದು ನಾಟಕ ಕಂಪೆನಿಗಳಿಗೂ ಅನ್ವಯಿಸುತ್ತದೆ. ಹಳೆಯ ನಾಟಕಗಳನ್ನೇ ಹೊಸ ಹೆಸರಲ್ಲಿ ಆಡುತ್ತಾರೆ. ಹೊಸ ನಾಟಕ ಆಡಿಸಲು ಕಂಪೆನಿ ಮಾಲಕರು ಉತ್ಸಾಹ ತೋರಿದರೂ ಕಲಾವಿದರು ತಾಲೀಮಿನಿಂದ ತಪ್ಪಿಸಿಕೊಳ್ಳುತ್ತಾರೆ ಇಲ್ಲವೆ ಕಂಪೆನಿ ಬಿಟ್ಟು ಹೋಗುತ್ತಾರೆ’’ ಎಂದು ಶ್ರೀನಿವಾಸ ಬೇಸರಪಟ್ಟುಕೊಂಡು ಹೇಳುತ್ತಾರೆ.

‘‘ಮೊದಲೆಲ್ಲ ಹಾರ್ಮೋನಿಯಂ ಇಲ್ಲದ ನಾಟಕಗಳಿರಲಿಲ್ಲ. ಈಗ ಕ್ಯಾಸಿಯೊ (ಕೀ ಬೋರ್ಡ್ ಮೂಲಕ ಸಂಗೀತ ನೀಡುವ ವಾದ್ಯ) ಮಾಸ್ತರ ಸಂಗೀತ ನೀಡುತ್ತ, ಹಾಡುತ್ತಾರೆ. ಹಾಸ್ಯ ಕಲಾವಿದರು ಪ್ರತೀ ದೃಶ್ಯಗಳಿಗೆ ಹಾಡುತ್ತ ಬರುತ್ತಾರೆ, ಹಾಡುತ್ತ ಹೋಗುತ್ತಾರೆ. ಇದರಿಂದ ನಾಟಕ ಈಗ ರಸಮಂಜರಿ ಕಾರ್ಯಕ್ರಮ ಆಗಿದೆ ಅಷ್ಟೇ’’ ಎಂದು ವ್ಯಥೆಪಟ್ಟು ಹೇಳಿದರು.

67 ವರ್ಷದ ಶ್ರೀನಿವಾಸ ಅವರು ಓದಿದ್ದು ಬಿಕಾಂ ಮೊದಲ ವರ್ಷದವರೆಗೆ. ತಮ್ಮ ತಂದೆಯ ಪ್ರೆಸ್ಸಿನ ಕೆಲಸಕ್ಕೆ ಕೈಜೋಡಿಸುತ್ತ ಬೆಳೆದರು. ‘‘ಡಿಜಿಟಲ್ ಮುದ್ರಣ ಬರುವ ಮೊದಲು ನಮ್ಮ ಪ್ರೆಸ್ಸಿಗೆ ಹೆಚ್ಚು ಜನ ಬರುತ್ತಿದ್ದರು. ವಾರಗಟ್ಟಲೇ ಕಾಯುತ್ತಿದ್ದರು. ನಾಟಕದ ಕರಪತ್ರ, ಭಿತ್ತಿಪತ್ರಕ್ಕೆಂದು ಬಂದವರು ವಾಪಸ್ ಹೋಗದೆ ಮುದ್ರಣವಾದ ಕೂಡಲೇ ತಗೊಂಡು ಹೋಗುತ್ತಿದ್ದರು. ಈಗ ಯಾರು ಬೇಕಾದರೂ ಎಲ್ಲಿ ಬೇಕಾದರೂ ಕರಪತ್ರ ಮಾಡಿಸಬಹುದು. ಲೆಟರ್ ಪ್ರೆಸ್ ಅಂದರೆ ಮೊಳೆ ಜೋಡಿಸುವಾಗ ನಾವು ಹೇಳಿದ ಹಾಗೆ ನಾಟಕ ಆಡಿಸುವವರು ಕೇಳುತ್ತಿದ್ದರು. ಈಗ ಕಂಪ್ಯೂಟರ್ ಯುಗ. ಅವರು ಹೇಳಿದ ಹಾಗೆ ನಾವು ಕೇಳಬೇಕು. ಪ್ರಸಿದ್ಧ ಸಿನೆಮಾ ನಟರ ಶರೀರಗಳಿಗೆ ತಮ್ಮ ಫೋಟೊ ಅಂಟಿಸಲು ಹೇಳುತ್ತಾರೆ! ಈಗೆಲ್ಲ ಸಾಮಾಜಿಕ ಜಾಲತಾಣದ ಪರಿಣಾಮ ವಾಟ್ಸ್ ಆ್ಯಪ್, ಫೇಸ್ ಬುಕ್, ಯೂ ಟ್ಯೂಬ್ ಮೂಲಕ ನಾಟಕಗಳ ಪ್ರಚಾರ ಹೆಚ್ಚಿದೆ. ನಾಟಕವೊಂದು ಯಶಸ್ವಿಯಾದರೆ ಅದೇ ನಾಟಕದ ಪ್ರತಿ ಬೇಕೆಂದು ಕೇಳುತ್ತಾರೆ. ಮೊದಲೆಲ್ಲ ನಾಟಕದ ಒಂದು ಪ್ರತಿ ಕೊಂಡು ಉಳಿದವರು ಬರೆದುಕೊಳ್ಳುತ್ತಿದ್ದರು. ಈಗ ದುಡ್ಡಿದ್ದು, ಎಂಟತ್ತು ಪ್ರತಿಗಳನ್ನು ಕೊಳ್ಳುತ್ತಾರೆ. ಮೊಬೈಲ್ ಫೋನಿನಲ್ಲಿ ಫೋಟೊ ತೆಗೆದುಕೊಳ್ಳುವೆ ಎನ್ನುವವರು ಬರುತ್ತಾರೆ. ಹಾಗೆ ನಾಟಕದ ಪಿಡಿಎಫ್ ಕಳಿಸಿ ಎನ್ನುವವರೂ ಇದ್ದಾರೆ. ಆದರೂ ಮೊಬೈಲ್ ಫೋನ್ ಮೂಲಕ ನಾಟಕ ಕೇಳಿದಾಗ ಬಸ್ ಮೂಲಕ, ಕೊರಿಯರ್ ಮೂಲಕ ಕಳಿಸುತ್ತೇವೆ. ದೀಪಾವಳಿಯಿಂದ ಮೇ ತಿಂಗಳವರೆಗೆ ನಮ್ಮ ಸೀಜನ್. ಹಿಂಗ ನಡದದರಿ...’’ ಎಂದು ಶ್ರೀನಿವಾಸ ಮಾತು ಮುಗಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News