ತೀರ್ಥಹಳ್ಳಿ: ಸಿಎಂ ಕಾರ್ಯಕ್ರಮದಲ್ಲಿ ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕನಿಂದ ಆಕ್ಷೇಪ
ಕಸ್ತೂರಿ ರಂಗನ್ ವರದಿ ಕುರಿತ ಸಭೆಯಲ್ಲಿ ಗೊಂದಲ ಸೃಷ್ಟಿಸಿದ ಶಾಸಕ ಎಸ್.ಎನ್.ಚನ್ನಬಸಪ್ಪರ ಭಾಷಣ
ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕರೊಂದಿಗೆ ಮುಖ್ಯಮಂತ್ರಿಯ ನೇರ ಸಂವಾದ ಸಭೆಯ ವೇದಿಕೆಯಲ್ಲಿ ವಂದೇ ಮಾತರಂ ವಿಚಾರವಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಯು.ಆರ್. ಅನಂತಮೂರ್ತಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಸಂವಾದ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ ವಂದೇ ಮಾತರಂ ಎರಡೇ ಚರಣ ಹಾಡಲಾಗಿದ್ದು, ಇದಕ್ಕೆ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ವೇದಿಕೆಯಲ್ಲಿ ಅಸಮಾಧಾನ ಹೊರ ಹಾಕಿದ್ದು ಗೊಂದಲಕ್ಕೆ ಕಾರಣವಾಯಿತು.
"ಮುಖ್ಯಮಂತ್ರಿ ರಾಜ್ಯದಲ್ಲಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ವಂದೇ ಮಾತರಂ ಗೀತೆಯನ್ನು ಕೇವಲ ಎರಡೇ ಚರಣಕ್ಕೆ ಸಿಮೀತಗೊಳಿಸುವ ಮೂಲಕ ಜನರ ಭಾವನೆ ಧಕ್ಕೆ ಉಂಟಾಗಿದೆ" ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಅವರ ಮಾತಿಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಕ್ಷಣ ವೇದಿಕೆಯ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ವೇದಿಕೆ ಮೇಲೆ ಕೆಲ ಕಾಲ ಬಿಗುವಿನ ವಾತಾವಣರ ಸೃಷ್ಟಿಯಾಯಿತು. ವೇದಿಕೆಯಲ್ಲಿದ್ದ ಕಾಂಗ್ರೆಸ್ ಮುಖಂಡರು ಶಾಸಕ ಎಸ್.ಎನ್.ಚನ್ನಬಸಪ್ಪರನ್ನು ಮುತ್ತಿಗೆ ಹಾಕಿ ಅವರ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿದರು. ಮೈದಾನದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಶಾಸಕ ಚನ್ನಬಸಪ್ಪನವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಇಡೀ ಸಂವಾದದ ಮೈದಾನವೇ ಡಿ.ಕೆ. ಡಿ.ಕೆ. ಎಂದು ಘೋಷಣೆ ಮೊಳಗಿಸುವ ಮೂಲಕ ಚನ್ನಬಸಪ್ಪನವರ ಆಕ್ಷೇಪಕ್ಕೆ ವಿರೋಧ ವ್ಯಕ್ತಪಡಿಸಿದರು.