ಡಿಕೆಶಿ ನೇತೃತ್ವದ ಸಂಪುಟ ವಿಸ್ತರಣೆ: ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಸಾಮಾಜಿಕ ನ್ಯಾಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ರಾಜ್ಯದ ರಾಯಚೂರು, ಉತ್ತರಕನ್ನಡ, ಕೋಲಾರ, ಚಿಕ್ಕಬಳ್ಳಾಪುರ, ಯಾದಗಿರಿ, ಕೊಡಗು ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ಏಳು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೂಗು ಕೇಳಿಬಂದಿದೆ. ನೂತನವಾಗಿ ಸಂಪುಟ ಸೇರ್ಪಡೆ ಆಗುತ್ತಿರುವವರ ಪೈಕಿ ಏಳು ಮಂದಿ ಮೊದಲ ಬಾರಿಗೆ ಸಚಿವರಾಗುತ್ತಿದ್ದು, 11 ಮಂದಿ ಮಾಜಿ ಸಚಿವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.
ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಒಕ್ಕಲಿಗ ಸಮುದಾಯಕ್ಕೆ 6, ಲಿಂಗಾಯತ ಸಮುದಾಯಕ್ಕೆ 7 ಸ್ಥಾನಗಳು, ಪರಿಶಿಷ್ಟ ಜಾತಿ(ಎಸ್ಸಿ)ಯ ಬಲಗೈ, ಎಡಗೈ, ಭೋವಿ, ಲಂಬಾಣಿ ಸೇರಿ ಎಲ್ಲ ಪಂಗಡಗಳನ್ನೊಳಗೊಂಡು 7 ಸ್ಥಾನಗಳು, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಮ್ ಸಮುದಾಯಕ್ಕೆ ತಲಾ ಮೂರು ಸ್ಥಾನಗಳು, ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯಕ್ಕೆ ಎರಡು, ಕ್ರೈಸ್ತ, ಈಡಿಗ, ಉಪ್ಪಾರ, ಬೆಸ್ತ, ರಜಪೂತ ಮತ್ತು ಮರಾಠ ಸಮುದಾಯಕ್ಕೆ ತಲಾ ಒಂದು ಸ್ಥಾನವನ್ನು ನೀಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಕೃಷ್ಣಭೈರೇಗೌಡ, ಎನ್. ಚಲುವರಾಯಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಎಚ್.ಸಿ.ಬಾಲಕೃಷ್ಣ ಸಂಪುಟದಲ್ಲಿದ್ದಾರೆ. ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್, ಈಶ್ವರ್ ಬಿ.ಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ಲಕ್ಷ್ಮಣ ಸವದಿ, ವಿಜಯಾನಂದ ಕಾಶಪ್ಪನವರ್, ಬಸವರಾಜರಾಯ ರೆಡ್ಡಿ ಸಚಿವರಾಗಲಿದ್ದಾರೆ.
ಪರಿಶಿಷ್ಟ ಜಾತಿ(ಎಸ್ಸಿ)ಯ ಪೈಕಿ ಬಲಗೈ ಸಮುದಾಯದ ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ ಯಾಗಿದ್ದು, ಪ್ರಿಯಾಂಕ್ ಖರ್ಗೆ, ಪಿ.ಎಂ.ನರೇಂದ್ರಸ್ವಾಮಿ ಸಂಪುಟ ಸೇರಿದ್ದಾರೆ. ಎಡಗೈ ಸಮುದಾಯದ ಕೆ.ಎಚ್.ಮುನಿಯಪ್ಪ ಸಚಿವರಾಗಿದ್ದು, ಅದೇ ಸಮುದಾಯದ ಕೆ.ಎಸ್.ಬಸಂತಪ್ಪ ಅವಕಾಶ ಪಡೆದಿದ್ದಾರೆ. ಭೋವಿ ಸಮುದಾಯದ ಶಿವರಾಜ್ ತಂಗಡಗಿ, ಲಂಬಾಣಿ ಸಮುದಾಯದಿಂದ ರುದ್ರಪ್ಪ ಲಮಾಣಿ ಅವಕಾಶ ಪಡೆದಿದ್ದಾರೆ.
ಪರಿಶಿಷ್ಟ ಪಂಗಡದಿಂದ ಸತೀಶ್ ಜಾರಕಿಹೊಳಿ ಮೊದಲಿಗೆ ಸಚಿವರಾಗಿದ್ದರೆ, ಬಿ.ನಾಗೇಂದ್ರ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕ್ಷೇತ್ರದ ಟಿ.ರಘುಮೂರ್ತಿ ಅವರು ಈಗ ಸಚಿವ ಸಂಪುಟ ಸೇರ್ಪಡೆಯಾಗಿದ್ದಾರೆ. ಮುಸ್ಲಿಮ್ ಸಮುದಾಯದಿಂದ ಯು.ಟಿ.ಖಾದರ್ ಈಗಾಗಲೆ ಸಚಿವರಾಗಿದ್ದು, ಕೊನೇ ಕ್ಷಣದಲ್ಲಿ ಝಮೀರ್ ಅಹ್ಮದ್ ಖಾನ್, ರಿಝ್ವಾನ್ ಅರ್ಶದ್ ಅವಕಾಶ ಗಿಟ್ಟಿಸಿದ್ದಾರೆ.
ಹಿಂದುಳಿದ ವರ್ಗಗಳಲ್ಲಿ ಪ್ರಮುಖರಾದ ಕುರುಬ ಸಮುದಾಯದಿಂದ ಭೈರತಿ ಸುರೇಶ್, ಡಾ.ಯತೀಂದ್ರ ಸಿದ್ದರಾಮಯ್ಯ, ಈಡಿಗ ಸಮುದಾಯದಿಂದ ಮಧು ಬಂಗಾರಪ್ಪ, ಉಪ್ಪಾರ ಸಮುದಾಯದಿಂದ ಪುಟ್ಟರಂಗಶೆಟ್ಟಿ, ರಜಪೂತ್ ಸಮುದಾಯದಿಂದ ಡಾ.ಅಜಯ್ ಸಿಂಗ್, ಮರಾಠ ಸಮುದಾಯದಿಂದ ಸಂತೋಷ್ ಲಾಡ್ ಸಚಿವರಾಗಿದ್ದಾರೆ. ಕ್ರೈಸ್ತ ಸಮುದಾಯದ ಕೆ.ಜೆ.ಜಾರ್ಜ್ ಸಚಿವರಾಗಿದ್ದಾರೆ.
ಭೌಗೋಳಿಕ ಆದ್ಯತೆ: ರಾಜಧಾನಿ ಬೆಂಗಳೂರಿನಿಂದ ಆರು ಮಂದಿ ಸಚಿವರಾಗಿರುವುದರಿಂದ ಸಿಂಹಪಾಲು ದೊರೆತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಗೆ ಮೂರು ಸ್ಥಾನಗಳು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ಬೆಂಗಳೂರು ದಕ್ಷಿಣಕ್ಕೆ 2ಸ್ಥಾನಗಳು ಸಿಕ್ಕಿವೆ. ದಾವಣಗೆರೆ, ಮಂಡ್ಯ, ಬೆಳಗಾವಿ ಜಿಲ್ಲೆಗೆ ತಲಾ ಎರಡೂ ಸಚಿವ ಸ್ಥಾನಗಳು ಸಿಕ್ಕಿವೆ.
ಸಂಪುಟದಲ್ಲಿ ಇನ್ನೂ ಒಂದು ಸ್ಥಾನ ಖಾಲಿಯಿದ್ದು, ಅದನ್ನು ಮಹಿಳೆಯರಿಗೆ ನೀಡುವ ಸಾಧ್ಯತೆಯಿದೆ. ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕಿಯರಾದ ಕನೀಝ್ ಫಾತಿಮಾ, ರೂಪಕಲಾ ಶಶಿಧರ್, ನಯನ ಮೋಟಮ್ಮ, ಅನ್ನಪೂರ್ಣ ತುಕಾರಾಂ, ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಡಾ. ಆರತಿ ಕೃಷ್ಣ, ಬಲ್ಕೀಸ್ ಬಾನು ಪೈಕಿ ಯಾರ ಪಾಲಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ಕಾದು ನೋಡಬೇಕಿದೆ.
ಪಿ.ಎಂ.ನರೇಂದ್ರಸ್ವಾಮಿ (ಬಲಗೈ), ಶಿವರಾಜ್ ತಂಗಡಗಿ (ಭೋವಿ), ರುದ್ರಪ್ಪ ಲಮಾಣಿ (ಲಂಬಾಣಿ), ಕೆ.ಎಸ್.ಬಸವಂತಪ್ಪ (ಎಡಗೈ), ಬಿ.ನಾಗೇಂದ್ರ-ಟಿ.ರಘುಮೂರ್ತಿ(ಎಸ್ಟಿ), ಬಿ.ಝಡ್.ಝಮೀರ್ ಅಹ್ಮದ್ ಖಾನ್ ಹಾಗೂ ರಿಝ್ವಾನ್ ಅರ್ಶದ್ (ಮುಸ್ಲಿಮ್), ಸಂತೋಷ್ ಲಾಡ್ (ಮರಾಠ), ಮಧು ಬಂಗಾರಪ್ಪ (ಈಡಿಗ), ಪುಟ್ಟರಂಗಶೆಟ್ಟಿ(ಉಪ್ಪಾರ), ಡಾ.ಅಜಯ್ ಸಿಂಗ್(ರಜಪೂತ್), ಎನ್.ಚಲುವರಾಯಸ್ವಾಮಿ ಕೆ.ಎಂ.ಶಿವಲಿಂಗೇಗೌಡ ಹಾಗೂ ಎಚ್.ಸಿ.ಬಾಲಕೃಷ್ಣ (ಒಕ್ಕಲಿಗ), ಎಸ್.ಎಸ್.ಮಲ್ಲಿಕಾರ್ಜುನ್, ಬಸವರಾಜ ರಾಯರೆಡ್ಡಿ, ವಿಜಯಾನಂದ ಕಾಶೆಪ್ಪನವರ್, ಲಕ್ಷ್ಮಣ್ ಸವದಿ(ಲಿಂಗಾಯತ).