ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡಿಕೆಯಲ್ಲಿನ ವಿಳಂಬ ತಪ್ಪಿಸಲು ಕ್ರಮ ವಹಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ, ಪ್ರಥಮ ಹಂತದಲ್ಲಿ ಅಕ್ಟೋಬರ್ 2ರಿಂದ ಗ್ರಾಮ ಠಾಣಾ ಆಸ್ತಿಗಳಿಗೆ ಇ-ಸ್ವತ್ತು ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದ್ದಾರೆ.

ಶುಕ್ರವಾರ ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಇ-ಸ್ವತ್ತು ನೀಡಿಕೆಯಲ್ಲಿನ ತೊಡಕು ನಿವಾರಣೆಗೆ ಸರಳೀಕೃತವಾದ ಪ್ರಕ್ರಿಯೆಯೊಂದಿಗೆ ಇ-ಸ್ವತ್ತು -03 ತಂತ್ರಾಂಶ ಸಿದ್ಧಪಡಿಸಲು ನಿರ್ದೇಶನ ನೀಡಿದ್ದಾರೆ. ನ್ಯಾಯಾಲಯಗಳಲ್ಲಿ ವ್ಯಾಜ್ಯ ಇರುವ, ಸರಕಾರಿ ಜಾಗದಲ್ಲಿ, ಕೆರೆ ಅಂಗಳದಲ್ಲಿ, ಬಿ ಖರಾಬು ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿರುವಂತಹ ಹಾಗೂ ಅರಣ್ಯ ಪ್ರದೇಶ ಒತ್ತುವರಿ ಮಾಡಿ ಕಟ್ಟಿದ ಸ್ವತ್ತುಗಳನ್ನು ಹೊರತುಪಡಿಸಿ ನ್ಯಾಯಬದ್ಧವಾದ ವಾರೀಸುದಾರರಿಗೆ ನಿಯಮಾನುಸಾರ ಇ-ಸ್ವತ್ತು ನೀಡಲು ಅ.2ರಿಂದ ಅರ್ಜಿ ಸ್ವೀಕರಿಸಿ, ನವೆಂಬರ್ ನಲ್ಲಿ ಕನಿಷ್ಠ 10ಲಕ್ಷ ಆಸ್ತಿಗಳಿಗೆ ಇ-ಸ್ವತ್ತುಗಳನ್ನು ಮನೆಬಾಗಿಲಿಗೇ ತಲುಪಿಸಬೇಕು ಎಂದು ತಿಳಿಸಿದ್ದಾರೆ.

ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ ಆಸ್ತಿಗಳಿಗೆ ಹಿತ್ತಲು, ಮನೆ ಅಂಗಳ ಸೇರಿದಂತೆ 4ಸಾವಿರ ಚದರಡಿ ಒಳಗಿರುವ ಆಸ್ತಿಗಳಿಗೆ ಮಾತ್ರ ಇ-ಸ್ವತ್ತು ನೀಡುವ ಸಲುವಾಗಿ ಒಂದು ಗ್ರಾಮಪಂಚಾಯತಿ ವ್ಯಾಪ್ತಿಗೆ ಒಳಪಡುವ ವಿವಿಧ ಹಳ್ಳಿಗಳಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸಿ, ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿರುವವರು ಅದೇ ಗ್ರಾಮದಲ್ಲಿ ಅದೇ ಆಸ್ತಿಯಲ್ಲಿ ವಾಸಿಸುತ್ತಿದ್ದಾರೆಯೇ, ಅವರೇ ಸ್ವತ್ತಿನ ನೈಜ ಮಾಲಕರೇ ಎಂಬುದನ್ನು ಗ್ರಾಮಸ್ಥರ ಸಮ್ಮುಖದಲ್ಲೇ ಖಚಿತಪಡಿಸಿಕೊಂಡು ಮತ್ತು ಸಾರ್ವಜನಿಕರಿಂದ ಆಕ್ಷೇಪಣೆ ಕರೆದು 21 ದಿನಗಳ ಕಾಲಾವಕಾಶ ನೀಡಿ, ಪಂಚಾಯತಿ ಕಚೇರಿಗಳಲ್ಲಿ ಕಾಣುವಂತೆ ಈ ಆಕ್ಷೇಪಣಾ ನೋಟಿಸ್ ಅಂಟಿಸಿ, ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಇ-ಸ್ವತ್ತು ನೀಡಲು ನಿಯಮಾನುಸಾರ ಕ್ರಮ ವಹಿಸಬೇಕು ಎಂದು ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.

ರಾಜ್ಯದ ಪಂಚಾಯತಿ ವ್ಯಾಪ್ತಿಯಲ್ಲಿರುವ ಅನೇಕ ಆಸ್ತಿಗಳ ಮಾಲಕರು ಇ-ಸ್ವತ್ತು ಕೋರಿ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದಿದ್ದರೂ ತಾಂತ್ರಿಕ ಕಾರಣಗಳಿಂದ ಅವರಿಗೆ ಇ-ಸ್ವತ್ತು ನೀಡಲು ವಿಳಂಬವಾಗುತ್ತಿರುವ ಹಾಗೂ ಗ್ರಾಮ ಠಾಣಾಗಳಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಹುತೇಕರ ಬಳಿ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ದಾಖಲಾತಿಗಳು ಇಲ್ಲದ ಕಾರಣ ಅವರಿಗೆ ಇ-ಸ್ವತ್ತು ನೀಡಲು ಸಾಧ್ಯವಾಗಿರುವುದಿಲ್ಲ ಎಂಬುದು ಸರಕಾರದ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಈಶ್ವರ ಖಂಡ್ರೆ ಕಾರ್ಯದರ್ಶಿ ನೇತೃತ್ವದಲ್ಲಿ ಪಂಚ ಸದಸ್ಯರ ಸಮಿತಿ ರಚಿಸಿ ವರದಿ ಪಡೆದಿದ್ದರು.

ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವು ವರ್ಷದಿಂದ ವಾಸಿಸುತ್ತಿದ್ದರೂ, ತಮ್ಮ ಸ್ವತ್ತಿಗೆ ಸಂಬಂಧಿಸಿದಂತೆ ನೋಂದಾಯಿತ ಕ್ರಯಪತ್ರ, ಹಕ್ಕುಪತ್ರ ಇತ್ಯಾದಿ ದಾಖಲೆ ಇಲ್ಲದ ಆಸ್ತಿಯ ಮಾಲೀಕರಿಗೆ ಇ-ಸ್ವತ್ತು ನೀಡಲು ಅವರು ವಾಸಿಸುತ್ತಿರುವ ಕಟ್ಟಡದ ವಿದ್ಯುತ್ ಬಿಲ್, ಈ ಹಿಂದೆ ಮನೆಗಂದಾಯ ಅಥವಾ ತೆರಿಗೆ ಪಾವತಿಸಿದ ರಸೀತಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ನಿವಾಸಿ ಪ್ರಮಾಣಪತ್ರ ಇತ್ಯಾದಿ ದಾಖಲಾತಿಗಳೊಂದಿಗೆ ಹಾಗೂ ಹಾಗೂ ಆಸ್ತಿಗೆ ತಾವೇ ಮಾಲಕರಾಗಿದ್ದು, ತಾವು ಒದಗಿಸಿರುವ ದಾಖಲೆ /ಮಾಹಿತಿ ತಪ್ಪಾಗಿದ್ದಲ್ಲಿ ತಮ್ಮ ಇ-ಸ್ವತ್ತು ರದ್ದು ಮಾಡಬಹುದು ಎಂಬ ಮುಚ್ಚಳಿಕೆ ಸಹಿತ ಅಫಿಡವಿಟ್ ನೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಗಾಂಧಿ ಜಯಂತಿ ದಿನವಾದ ಅ.2ರಿಂದ ಪಂಚನಾಮೆ, ಸ್ಥಳ ಪರಿಶೀಲನಾ ಪ್ರಕ್ರಿಯೆ ಆರಂಭಿಸಿ, ನ.1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಅಭಿಯಾನ ಆರಂಭಿಸಲು ಕ್ರಮವಹಿಸಬೇಕು ಎಂದು ಈಶ್ವರ ಖಂಡ್ರೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor