×
Ad

ಜೂ.28ಕ್ಕೆ ಪಲ್ಸ್ ಪೋಲಿಯೋ | ಮಕ್ಕಳಿಗೆ ಲಸಿಕೆ ಹಾಕಿಸಲು ಆರೋಗ್ಯ ಕಾರ್ಯಕರ್ತರ ನಿಯೋಜನೆ : ಸಚಿವ ಯು.ಟಿ.ಖಾದರ್

Update: 2026-06-25 18:28 IST

ಬೆಂಗಳೂರು : ಪೋಲಿಯೋ ಲಸಿಕೆ ಅಭಿಯಾನ ಜೂ.28ರಂದು ದೇಶಾದ್ಯಂತ ನಡೆಯಲಿದ್ದು, ಪೋಲಿಯೋ ಮುಕ್ತ ಭಾರತ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ನಗರದ ಆರೋಗ್ಯ ಸೌಧದಲ್ಲಿ ಪೋಲಿಯೋ ಲಸಿಕೆ ಅಭಿಯಾನದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು. ಇದಕ್ಕಾಗಿ ರಾಜ್ಯದಲ್ಲಿ 1.14 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ 64.84 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಇದಕ್ಕಾಗಿ 36,076 ಬೂತ್‍ಗಳನ್ನು ರಚಿಸಲಾಗಿದ್ದು, 7,197 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪೋಲಿಯೋ ಮುಕ್ತ ಭಾರತ ನಿರ್ಮಿಸುವ ಸಲುವಾಗಿ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು. ಬೇರೆ ಯಾವುದೇ ರೀತಿಯ ಲಸಿಕೆ ಪಡೆಯುತ್ತಿದ್ದರೂ ಈ ಲಸಿಕೆಯನ್ನು ತಪ್ಪಿಸುವಂತಿಲ್ಲ. ಲಸಿಕೆ ಹಾಕುವ ಕೇಂದ್ರಗಳ ಕುರಿತು ಮಾಹಿತಿ ಇಲ್ಲದವರು ಗೂಗಲ್ ಪ್ಲೇ ಸ್ಟೋರ್‍ನಲ್ಲಿರುವ ಆರೋಗ್ಯ ಇಲಾಖೆಯ ಆ್ಯಪ್ ಮೂಲಕ ಮಾಹಿತಿ ಪಡೆಯಬಹುದು ಎಂದು ಖಾದರ್ ಹೇಳಿದರು.

ವೈದ್ಯರ ನೇಮಕ: ವೈದ್ಯರ ನೇಮಕ ಸಂಬಂಧ ಹದಿನೈದು ದಿನಗಳಲ್ಲಿ ಎಲ್ಲ ಜಿಲ್ಲೆಗಳಿಂದ ಸಾಕಷ್ಟು ಅರ್ಜಿಗಳು ಬಂದಿದ್ದು, ಇಲಾಖೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ವೈದ್ಯರ ನೇಮಕ ಸಂಬಂಧ ಹಣಕಾಸು ಇಲಾಖೆ ಕಾರ್ಯದರ್ಶಿ ಹಾಗೂ ಸಿಎಂ ಚರ್ಚೆ ನಡೆಸಿದ್ದೇನೆ. ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ವೈದ್ಯರು ಕೆಲಸಕ್ಕೆ ಸೇರುವವರೆಗೆ ಸುಮಾರು 1 ವರ್ಷ ಸಮಯ ಬೇಕಾಗಬಹುದು ಎಂದು ಅವರು ಮಾಹಿತಿ ನೀಡಿದರು.

ಆಂಬುಲೆನ್ಸ್‌ ಗೆ ಪ್ರತ್ಯೇಕ ವ್ಯವಸ್ಥೆ: ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ 108 ಆಂಬುಲೆನ್ಸ್‌ ಗಳನ್ನು 20 ನಿಮಿಷದ ಒಳಗೆ ತಲುಪುವ ವ್ಯವಸ್ಥೆ ಮಾಡಬೇಕಾಗಿದೆ. ತಜ್ಞ ವೈದ್ಯರ ಪ್ರಕಾರ ಜೀವ ಉಳಿಸಲು ಮೊದಲ 20 ನಿಮಿಷಗಳು ‘ಗೋಲ್ಡನ್ ಅವರ್’ ಆಗಿದ್ದು, ಆ ಅವಧಿಯಲ್ಲಿ ಸ್ಥಳಕ್ಕೆ ತಲುಪಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಮತ್ತಷ್ಟು ಆಂಬುಲೆನ್ಸ್‌ ಗಳ ಅಗತ್ಯವಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜನೌಷಧಿ ಕೇಂದ್ರಗಳಲ್ಲಿ ಯಾವುದೇ ಖಾಸಗಿ ಕಂಪೆನಿಯ ಔಷಧಿಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಆರೋಗ್ಯ ಇಲಾಖೆಯ ಅಥವಾ ನಿಗದಿತ ಮಾನದಂಡಗಳ ಪ್ರಕಾರವೇ ಕಂಪೆನಿಗಳು ಔಷಧಿಗಳನ್ನು ಮಾರಾಟ ಮಾಡಬೇಕು. ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ಔಷಧಿಗಳು ದೊರೆಯುತ್ತವೆ ಎಂಬ ಕಾರಣಕ್ಕೆ ಸರಕಾರದ ಮಾನದಂಡಗಳಿಗೆ ಅನುಗುಣವಾಗಿರದ ಔಷಧಿಗಳನ್ನು ಮಾರಾಟ ಮಾಡಿ ಜನರನ್ನು ತಪ್ಪುದಾರಿಗೆಳೆಯುವ ಕೆಲಸ ಆಗಬಾರದು. ಜನೌಷಧಿ ಕೇಂದ್ರಗಳು ಸರಕಾರದ ಕೇಂದ್ರಗಳೇ ಎಂಬ ಭಾವನೆ ಜನರಲ್ಲಿ ಇದೆ ಎಂದು ಖಾದರ್ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News