ಬೆಂಗಳೂರು : ʼಪತ್ರಕರ್ತ ಜಿ.ಮಹಾಂತೇಶ್ ಅವರಿಗೆ ತಕ್ಷಣವೇ ಸೂಕ್ತ ಪೋಲೀಸ್ ಭದ್ರತೆ ಒದಗಿಸಿ, ಜೀವ ಬೆದರಿಕೆ ದೂರಿನ ಮೇಲೆ ಕ್ರಮ ಕೈಗೊಳ್ಳದೆ ಜಾರಿಕೊಂಡ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕುʼ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ʼಮೈಕು ಸಿಕ್ಕರೆ ಸಾಕು ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು "ಮೊಹಬ್ಬತ್ ಕಿ ದುಕಾನ್" ಬಗ್ಗೆ ಉದ್ದುದ್ದ ಭಾಷಣ ಮಾಡುವ ತಾವು, ಸತ್ಯವನ್ನು ವರದಿ ಮಾಡಿದ ಪತ್ರಕರ್ತನಿಗೆ ಬೆದರಿಕೆ ಹಾಕಿರುವಾಗ ನಿಮ್ಮ ಈ ಭಾಷಣದ ಮೌಲ್ಯಗಳು ಎಲ್ಲಿ ಅಡಗಿ ಕುಳಿತುಕೊಂಡಿವೆ?ʼ ಎಂದು ಕೇಳಿದ್ದಾರೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ, ನೀವು ಗೃಹ ಸಚಿವರಾಗಿರೋದು ಜನಸಾಮಾನ್ಯರಿಗೆ ರಕ್ಷಣೆ ಕೊಡಲೋ ಅಥವಾ ನಿಮ್ಮ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಯಲು ಪೋಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವುದದಕ್ಕೊ? ಎಂದು ಪ್ರಶ್ನಿಸಿದ್ದಾರೆ.

"ಸ್ವತಂತ್ರ ಮಾಧ್ಯಮ ಸಂಸ್ಥೆ The Fileನ ಪ್ರಧಾನ ಸಂಪಾದಕರಾದ ಜಿ.ಮಹಾಂತೇಶ್ ಅವರು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖಾ ವರದಿ ಪ್ರಕಟಿಸಿದ ತಕ್ಷಣವೇ (ಸೆಪ್ಟೆಂಬರ್ 8 ಮತ್ತು 9), ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿ, “ಮನೆ ಬಾಗಿಲಿಗೆ ಬಂದು ಹೊಡೆಯುತ್ತೇನೆ” ಬೆದರಿಕೆ ಒಡ್ಡಲಾಗಿದೆ. ಆದರೆ ನಿಮ್ಮ ಪೋಲಿಸರು ಏನು ಮಾಡಿದರು, ಪ್ರಿಯಾಂಕ್ ಖರ್ಗೆ ಅವರೇ? ದೂರು ನೀಡಲು ಹೋದ ಪತ್ರಕರ್ತನ ದೂರು ಸ್ವೀಕರಿಸಿ, ರಕ್ಷಣೆ ಕೊಟ್ಟು, ತನಿಖೆ ನಡೆಸುವ ಬದಲು, FIR ದಾಖಲಿಸಲು ನೇರವಾಗಿ ನಿರಾಕರಿಸಿದ್ದಾರೆ. NCR No. 556/2026 ನೀಡಿ, “ನ್ಯಾಯಾಲಯದಿಂದ ಅನುಮತಿ ತನ್ನಿ” ಎಂದು ಕಳಿಸಿ ತಮ್ಮ ಕೈತೊಳೆದುಕೊಂಡಿದ್ದಾರೆ, ಅಂದರೆ ಪರೋಕ್ಷವಾಗಿ ಬೆದರಿಕೆ ಒಡ್ಡಿದವರ ರಕ್ಷಣೆಗೆ ನಿಂತಿದ್ದಾರೆ" ಎಂದು ಟೀಕಿಸಿದ್ದಾರೆ.

ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೂಂಡಾಗಿರಿಯಿಂದ ಅಡಗಿಸಲು ಯತ್ನಿಸುತ್ತಿದ್ದರೂ ಗೃಹ ಇಲಾಖೆ ಯಾಕೆ ಮೌನ ವಹಿಸಿದೆ. ಗಂಭೀರ ಜೀವ ಬೆದರಿಕೆಯನ್ನು "ಅಸಂಜ್ಞೆಯ ಅಪರಾಧ" (NCR) ಎಂದು ಪರಿಗಣಿಸಿ, ಬೆದರಿಕೆ ಹಾಕಿದ ಗೂಂಡಾಗಳಿಗೆ ಪೋಲೀಸ್ ರಕ್ಷಣೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇನಾ ನೀವು ಕರ್ನಾಟಕದಲ್ಲಿ ತೆರೆದಿರುವ ರಾಹುಲ್‌ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’? ಸತ್ಯ ವರದಿ ಮಾಡುವ ಪತ್ರಕರ್ತರಿಗೆ ಬೆದರಿಕೆ. ದೂರು ಕೊಡಲು ಹೋದರೆ, ರಕ್ಷಣೆ ಕೋರಿದರೆ ಪೋಲೀಸರ ಅಸಹಕಾರ ಮತ್ತು ಅಧಿಕಾರ ದುರ್ಬಳಕೆ!. ಪ್ರಿಯಾಂಕ್ ಖರ್ಗೆ ಅವರೇ, ಪತ್ರಕರ್ತರ ಮೇಲೆ ದೌರ್ಜನ್ಯ ಮಾಡುವವರನ್ನು ರಕ್ಷಿಸುವುದನ್ನು ಬಿಟ್ಟು, ತಕ್ಷಣವೇ ಬೆದರಿಕೆ ಹಾಕಿದವರ ವಿರುದ್ಧ FIR ದಾಖಲಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದ ಜನತೆ ನೋಡುತ್ತಿದ್ದಾರೆ, ನಿಮ್ಮ ಪೋಲೀಸ್ ಇಲಾಖೆ ಇರುವುದು ಪ್ರಾಮಾಣಿಕ ಪತ್ರಕರ್ತನ ರಕ್ಷಣೆಗೆಯೋ ಅಥವಾ ಹೆದರಿಸಿ, ಬೆದರಿಸಿ ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಿರುವವರ ರಕ್ಷಣೆಗೋ, ಜನರಿಗೆ ಗೊತ್ತಾಗಲಿ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor