ಹಾವೇರಿ ಜಿಲ್ಲಾದ್ಯಂತ ಮೋಡ ಬಿತ್ತನೆಗೆ ಹುಬ್ಬಳ್ಳಿಯಲ್ಲಿ ಚಾಲನೆ
ಸರಕಾರ ರಾಜ್ಯವ್ಯಾಪಿ ಕ್ರಮ ಕೈಗೊಳ್ಳಲಿ: ಸತೀಶ್ ಜಾರಕಿಹೊಳಿ
ಹುಬ್ಬಳ್ಳಿ : ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆ ಹಾಗೂ ಬರಗಾಲದ ಛಾಯೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಮಳೆ ಹೆಚ್ಚಿಸುವ ಉದ್ದೇಶದಿಂದ ಮೋಡ ಬಿತ್ತನೆ ಕಾರ್ಯಕ್ಕೆ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ವಿಶೇಷ ವಿಮಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಕೆ.ಪಾಟೀಲ, ಉತ್ತರ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ತೀವ್ರವಾಗಿರುವುದರಿಂದ ರಾಜ್ಯ ಸರಕಾರವೇ ಮೋಡ ಬಿತ್ತನೆಯನ್ನು ಅಧಿಕೃತ ಕಾರ್ಯಕ್ರಮವಾಗಿ ಕೈಗೊಳ್ಳಕೆಂದು ಆಗ್ರಹಿಸಿದರು.
ಅಧಿಕಾರಿಗಳ ಅಭಿಪ್ರಾಯಕ್ಕಿಂತ ವಿಜ್ಞಾನಿಗಳ ಸಲಹೆಗೆ ಆದ್ಯತೆ ನೀಡಬೇಕು. ಕೇಂದ್ರ ಸರಕಾರವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ಮೋಡ ಬಿತ್ತನೆ ಆರಂಭಿಸಿರುವುದು ಸ್ವಾಗತಾರ್ಹ. ಆದರೆ, ಇದು ಕೇವಲ ಒಂದು ಜಿಲ್ಲೆಯ ಕಾರ್ಯಕ್ರಮವಾಗದೆ ರಾಜ್ಯ ಸರಕಾರದ ಕಾರ್ಯಕ್ರಮವಾಗಿ ಜಾರಿಯಾಗಬೇಕು. ಈ ಕುರಿತು ಮುಖ್ಯಮಂತ್ರಿ ಗಮನ ಸೆಳೆದು ರಾಜ್ಯ ಮಟ್ಟದಲ್ಲಿ ಮೋಡ ಬಿತ್ತನೆ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ತೇವಾಂಶಯುಕ್ತ ಮೋಡಗಳಿರುವ ಸಂದರ್ಭದಲ್ಲೇ ಮೋಡ ಬಿತ್ತನೆ ನಡೆಸಿದರೆ ಮಾತ್ರ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ತೇವಾಂಶ ಹೊಂದಿರುವ ಮೋಡಗಳು ಕಂಡು ಬಂದಾಗ ಮಾತ್ರ ಮೋಡ ಬಿತ್ತನೆ ನಡೆಸಲಾಗುತ್ತದೆ. ಸದ್ಯ ಮೂರು ದಿನಗಳ ಕಾಲ ಮೋಡ ಕಾರ್ಯಾಚರಣೆ ನಡೆಯಲಿದೆ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲೂ ಕಾರ್ಯಾ ಚರಣೆ ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ, ಶಾಸಕರಾದ ಯಾಸೀರ್ ಖಾನ್ ಪಠಾಣ್, ಯು.ಬಿ.ಬಣಕಾರ, ಎನ್.ಎಚ್.ಕೋನರೆಡ್ಡಿ, ಬಾಬಾ ಸಾಹೇಬ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹಾಗೂ ಇತರರು ಉಪಸ್ಥಿತರಿದ್ದರು.
ವೆಚ್ಚ ಭರಿಸಲು ಹಾವೇರಿ ಜನಪ್ರತಿನಿಧಿಗಳ ನಿರ್ಧಾರ
ಆರಂಭಿಕ ಹಂತದಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ನಡೆಸಲು ಯೋಜಿಸಲಾಗಿದ್ದು, ಪ್ರತಿ ಗಂಟೆಗೆ ಸುಮಾರು 15 ಲಕ್ಷ ರೂ. ವೆಚ್ಚವಾಗಲಿದೆ. ಈ ಕಾರ್ಯಾಚರಣೆಯ ಸಂಪೂರ್ಣ ವೆಚ್ಚವನ್ನು ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳೇ ಭರಿಸಲಿದ್ದಾರೆ ಎಂದು ಹಾವೇರಿ ಜಿಲ್ಲೆಯ ಶಾಸಕರು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಮೋಡ ಬಿತ್ತನೆಯ ನೋಟ
1999-2000: ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಯೋಗಾತ್ಮಕವಾಗಿ ಮೋಡ ಬಿತ್ತನೆ ನಡೆಸಲಾಯಿತು.
2003 (ಆ.18): ‘ಪ್ರಾಜೆಕ್ಟ್ ವರುಣ’ ಹೆಸರಿನಲ್ಲಿ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ದೊಡ್ಡ ಮಟ್ಟದ ಮೋಡ ಬಿತ್ತನೆ ಕಾರ್ಯಾಚರಣೆಗೆ ಚಾಲನೆ.
ಮೊದಲ ಮೋಡ ಬಿತ್ತನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜನಕುಂಟೆ ಪ್ರದೇಶದಲ್ಲಿ ನಡೆಯಿತು. ಬಳಿಕ ರಾಜ್ಯದ 26 ಬರಪೀಡಿತ ಜಿಲ್ಲೆಗಳಿಗೆ ಕಾರ್ಯಾಚರಣೆ ವಿಸ್ತರಿಸಲಾಯಿತು.
2004: ಮಳೆಯ ಕೊರತೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮೋಡ ಬಿತ್ತನೆ ಕಾರ್ಯಾಚರಣೆ.
2006: ಬರ ಪರಿಸ್ಥಿತಿಯಲ್ಲಿ ಸೀಮಿತ ಪ್ರಮಾಣದಲ್ಲಿ ಮತ್ತೊಮ್ಮೆ ಮೋಡ ಬಿತ್ತನೆ.
2010: ಬರಗಾಲದ ಮುನ್ಸೂಚನೆ ಮತ್ತೆ ಮೋಡ ಬಿತ್ತನೆ ಪ್ರಯೋಗ.
2017: ‘ವರ್ಷಧಾರೆ’ ಯೋಜನೆ; ಆ.21ರಿಂದ ನ.7ರವರೆಗೆ ವೈಜ್ಞಾನಿಕ ವಿಧಾನದಲ್ಲಿ ರಾಜ್ಯ ಸರಕಾರದಿಂದ ದೊಡ್ಡ ಮಟ್ಟದ ಮೋಡ ಬಿತ್ತನೆ. ಬೆಂಗಳೂರು, ಗದಗ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಬರಪೀಡಿತ ಜಿಲ್ಲೆಗಳಲ್ಲಿ ಕಾರ್ಯಾಚರಣೆ.
2026: ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳ ಸ್ವಂತ ವೆಚ್ಚದಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭ. ಹುಬ್ಬಳ್ಳಿ ವಿಮಾನ ನಿಲ್ದಾ ಣದಿಂದ ವಿಶೇಷ ವಿಮಾನ ಕಾರ್ಯಾಚರಣೆಗೆ ಚಾಲನೆ.