×
Ad

ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ : ಸಿಎಂ ಸಿದ್ದರಾಮಯ್ಯ

Update: 2025-12-14 19:53 IST

ಹೊಸದಿಲ್ಲಿ : ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಭಾರತವನ್ನು ಪ್ರವೇಶಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಒಂದು ರಾಷ್ಟ್ರವಾಗಿ, ಒಂದು ಪ್ರಜಾಪ್ರಭುತ್ವವಾಗಿ ಎಲ್ಲರೂ ಮತಗಳ್ಳತನದ ವಿರುದ್ದ ನಿಲ್ಲೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ರವಿವಾರ ದಿಲ್ಲಿಯಲ್ಲಿ ಆಯೋಜಿಸಿದ್ದ ಮತಗಳ್ಳತನದ ವಿರುದ್ದದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ನಮ್ಮ ಗಣರಾಜ್ಯದ ಹೃದಯ ಭಾಗದಲ್ಲಿ ನಾವು ಸೇರಿದ್ದು, ಕೇವಲ ಕಾಂಗ್ರೆಸ್ ಕಾರ್ಯಕರ್ತರಾಗಿ ಅಥವಾ ಮತದಾರರಾಗಿ ಇಲ್ಲಿಗೆ ಬಂದಿಲ್ಲ. ನಾವು ಭಾರತೀಯ ಪ್ರಜಾಪ್ರಭುತ್ವದ ರಕ್ಷಕರಾಗಿ ಬಂದಿದ್ದೇವೆ ಎಂದರು.

ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಅತ್ಯಂತ ಪವಿತ್ರ ಹಕ್ಕು – ‘ಮತದಾನದ ಹಕ್ಕನ್ನು’ ರಕ್ಷಿಸಲು ಬಂದಿದ್ದೇವೆ. ಮತದಾನದ ಶಕ್ತಿಯೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ. ಒಬ್ಬ ರೈತ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸಲು, ಒಬ್ಬ ಕಾರ್ಮಿಕ ತನ್ನ ಘನತೆಯನ್ನು ಕಾಯ್ದುಕೊಳ್ಳಲು, ಒಬ್ಬ ಯುವಕ ತನ್ನ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಒಂದು ರಾಷ್ಟ್ರ ತನ್ನ ಸಾಮೂಹಿಕ ಇಚ್ಛೆಯನ್ನು ಘೋಷಿಸಲು ಇರುವ ಸಾಧನವೇ ಮತದಾನ ಎಂದು ಅವರು ನುಡಿದರು.

ಇಂದು ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ದುರುಪಯೋಗ ಸೇರಿದಂತೆ ವಿವಿಧ 'ಮತಗಳ್ಳತನ' ದ ವಿಧಾನಗಳ ಮೂಲಕ ಈ ಪವಿತ್ರ ಶಕ್ತಿಯನ್ನು ಕಸಿಯಲು ಪ್ರಯತ್ನಿಸುತ್ತಿದೆ. ಇಂದು ಆ ಶಕ್ತಿಯನ್ನು ಕದಿಯಲಾಗುತ್ತಿದೆ. ಒಂದು ಬಾರಿಯಲ್ಲ, ಎರಡಲ್ಲ, ಪದೇ ಪದೇ ಕದಿಯಲಾಗುತ್ತಿದೆ ಎಂದರು.

ಇತಿಹಾಸ ನಮಗೆ ಕಲಿಸಿದ ಪಾಠವೆಂದರೆ, ಸರ್ವಾಧಿಕಾರವು ಬೀದಿಗಳಲ್ಲಿ ಬಂದೂಕುಗಳಿಂದ ಪ್ರಾರಂಭವಾಗುವುದಿಲ್ಲ. ಅದು ಸಂಸ್ಥೆಗಳ ದುರ್ಬಳಕೆ ಹಾಗೂ ನಿಧಾನವಾಗಿ ವ್ಯವಸ್ಥೆಗಳನ್ನು ಅಗತ್ಯಕ್ಕೆ ತಕ್ಕಂತೆ ತಿರುಚುವ ಮತ್ತು ಅಂತಿಮವಾಗಿ, ಚುನಾವಣೆಗಳ ಕಳ್ಳತನದಿಂದ ಪ್ರಾರಂಭವಾಗುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ರಕ್ಷಿಸುವಂತೆ ನಟಿಸುತ್ತಲೇ, ಅದನ್ನು ಬುಡಮೇಲು ಮಾಡುವುದನ್ನೇ ಪ್ರಪಂಚದಾದ್ಯಂತದ ಸರ್ವಾಧಿಕಾರಿ ಆಡಳಿತಗಳು ಮೂಲ ತಂತ್ರವನ್ನಾಗಿಸಿದೆ. ಇಂದು ಬಿಜೆಪಿ ಇದನ್ನೇ ಮಾಡುತ್ತಿದೆ ಎಂದು ಟೀಕಿಸಿದರು.

ಅವರು ಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಅವರು ಚುನಾವಣಾ ಯಂತ್ರೋಪಕರಣಗಳನ್ನು ಬೆದರಿಸುತ್ತಾರೆ. ಅವರು ಮತದಾರರ ಪಟ್ಟಿಗಳನ್ನು ವಿರೂಪಗೊಳಿಸುತ್ತಾರೆ. ಅವರು ವಿಪಕ್ಷಗಳು ಗೆಲುವಿನ ಸಾಧ್ಯತೆಯ ಪ್ರದೇಶಗಳಲ್ಲಿ ಮತದಾನದ ಪ್ರಮಾಣವನ್ನು ದಮನಿಸುತ್ತಾರೆ. ಹಣ ಮತ್ತು ಅಧಿಕಾರದ ಮೂಲಕ ಸಮಾನ ಅವಕಾಶದ ಸಾಧ್ಯತೆಯನ್ನು ಉಲ್ಲಂಘಿಸುತ್ತಾರೆ. ಇದು ಕೇವಲ ದುರಾಡಳಿತವಲ್ಲ. ಈ 'ಮತಗಳ್ಳತನ'ವು ಭಾರತದ ಪರಿಕಲ್ಪನೆಯ ಮೇಲಿನ ದಾಳಿಯಾಗಿದೆ ಎಂದು ಅವರು ತಿಳಿಸಿದರು.

ಕದ್ದ ಮತಗಳಿಂದ ಅಧಿಕಾರಕ್ಕೆ ಬಂದ ಸರಕಾರವು ಪ್ರಜಾಸತ್ತಾತ್ಮಕ ಸರಕಾರವಲ್ಲ ಎಂಬುದು ಸುಸ್ಪಷ್ಟ. ಅದು ಜನರನ್ನು ಹೆದರಿಸುವ, ಜನಾದೇಶವನ್ನು ತಿರುಚುವ, ಮತ್ತು ವಂಚನೆಯ ಮೂಲಕ ಮಾತ್ರ ಬದುಕುಳಿಯುವ ಸರ್ಕಾರ. ಇದು, ಪ್ರಜಾಪ್ರಭುತ್ವಗಳು ಚುನಾವಣಾ ದೌರ್ಜನ್ಯಗಳ ಮಟ್ಟಕ್ಕೆ ಇಳಿಯುವ ರೀತಿಯಾಗಿದೆ. ಇಂದು ಬಿಜೆಪಿಯ 'ಮತಗಳ್ಳತನ'ವು ಸ್ವಾತಂತ್ರ್ಯಾನಂತರದ ನಮ್ಮ ಗಣರಾಜ್ಯಕ್ಕೆ ಎದುರಾದ ಅತಿದೊಡ್ಡ ಬೆದರಿಕೆಯಾಗಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ , ಅಸಾಧಾರಣ ಧೈರ್ಯದಿಂದ ನಿಂತಿರುವ ಏಕೈಕ ನಾಯಕ ರಾಹುಲ್ ಗಾಂಧಿಯವರು ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯವರು ಹೊಂದಿಕೆಯಾಗದ ಮತದಾರರ ಪಟ್ಟಿಗಳನ್ನು, ಬೂತ್ ಮಟ್ಟದಲ್ಲಿ ತಿರುಚಿದ ಅಂಶಗಳನ್ನು ಮತ್ತು ವ್ಯವಸ್ಥಿತ, ಸಂಘಟಿತ ಮತಗಳ್ಳತನ'ವನ್ನು ತನಿಖೆಯ ಮೂಲಕ ಬಯಲು ಮಾಡಿದರು. ಮಹದೇವಪುರದಿಂದ ಆಳಂದವರೆಗೆ, ಹರಿಯಾಣದಿಂದ ಬಿಹಾರದವರೆಗೆ, ಹೀಗೆ ಕ್ಷೇತ್ರದಿಂದ ಕ್ಷೇತ್ರಕ್ಕೆ, ವಿಶೇಷವಾಗಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಬಲಹೊಂದಿರುವ ಪ್ರದೇಶಗಳಲ್ಲಿ ಮತಗಳನ್ನು ಯಾವ ರೀತಿಯಲ್ಲಿ ದಮನ ಮಾಡಲಾಗಿದೆ, ವರ್ಗಾಯಿಸಲಾಗಿದೆ ಅಥವಾ ದುರ್ಬಲಗೊಳಿಸಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿದರು.

ಕರ್ನಾಟಕದ ಮಹದೇವಪುರ ಮತ್ತು ಆಳಂದ ಕ್ಷೇತ್ರಗಳಲ್ಲಿ, 'ವೋಟ್ ಚೋರಿ' ಕೇವಲ ಆರೋಪವಾಗಿರದೇ, ಜೀವಂತ ವಾಸ್ತವ ಎಂದು ರಾಹುಲ್ ಗಾಂಧಿಯವರು ಗಂಭೀರ ಅಕ್ರಮಗಳನ್ನು ಉದಾಹರಣೆಗಳಾಗಿ ಎತ್ತಿ ತೋರಿಸಿದ್ದಾರೆ. ಮಹದೇವಪುರದಲ್ಲಿ ಸಾವಿರಾರು ನಕಲಿ ಅಥವಾ ಮೋಸದ ಮತದಾರರ ನಮೂದುಗಳು ಮತ್ತು ಚುನಾವಣಾ ಪಟ್ಟಿಗಳಲ್ಲಿನ ವ್ಯತ್ಯಾಸಗಳು ಕ್ಷೇತ್ರದಲ್ಲಿ ಬಿಜೆಪಿಯ ಅಲ್ಪ ವ್ಯತ್ಯಾಸದಲ್ಲಿ ಗೆದ್ದಿರುವುದಕ್ಕೆ ಪರಸ್ಪರ ಸಂಬಂಧ ಹೊಂದಿದೆ ಎಂದು ಪುರಾವೆಗಳನ್ನು ಒದಗಿಸುತ್ತದೆ ಎಂದು ಅವರು ವಿವರ ನೀಡಿದರು.

ಆಳಂದದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿ ಹಾಕಲು ಪ್ರಯತ್ನಿಸಿದ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಪಟ್ಟಿಯಲ್ಲಿನ ಹೆಸರುಗಳನ್ನು ತೆಗೆಯಲು ಕೋರಿ ಸಲ್ಲಿಸಿದ 6,018 ಅರ್ಜಿಗಳ ಬಗ್ಗೆ ಎಫ್‌ಐಆರ್ ಮತ್ತು ಎಸ್‌ಐಟಿ ತನಿಖೆಯನ್ನು ಕೈಗೊಳ್ಳಲು ಇದು ಕಾರಣವಾಯಿತು ಎಂದು ಅವರು ಉಲ್ಲೇಖಿಸಿದರು.

ನಿನ್ನೆ, ಒಂದು ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಇದರಲ್ಲಿ ಬಿಜೆಪಿ ಮಾಜಿ ಶಾಸಕರು ಮತ್ತು ಅವರ ಪುತ್ರ ಸೇರಿದಂತೆ ಏಳು ವ್ಯಕ್ತಿಗಳು ಆಳಂದ ಕ್ಷೇತ್ರದಲ್ಲಿ ಸುಮಾರು 6,000 ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಿದ ಆರೋಪವಿದೆ. ಇದು "ಮತಗಳತನ' ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾನೂನು ಹೆಜ್ಜೆಯಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನು ಬಹಿರಂಗಪಡಿಸಿರುವುದರಿಂದ ರಾಹುಲ್ ಗಾಂಧಿಯವರು ಈ ಗಣರಾಜ್ಯದ ನೈತಿಕ ದಿಕ್ಸೂಚಿಯಾಗಿರುವುದಲ್ಲದೆ ಮತಗಳ್ಳತನದ ವಿರುದ್ಧದ ಹೋರಾಟಗಾರರಾಗಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ. ಈ ಹೋರಾಟ ಸಾಂವಿಧಾನಿಕ ನೈತಿಕತೆಯಲ್ಲಿ ಅಡಕವಾಗಿದ್ದು, ಅಂಬೇಡ್ಕರ್ ವಾದಿ ಚಿಂತನೆಯಾಗಿದೆ ಹಾಗೂ ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ. ಸಾರ್ವಭೌಮತ್ವ ಜನರಿಗೆ ಸೇರಿದ್ದು , ಯಾವುದೇ ಒಂದು ಪಕ್ಷ, ಒಂದು ಆಳ್ವಿಕೆ ಹಾಗೂ ಚುನಾವಣೆಗಳನ್ನು ಕದಿಯಲಿಚ್ಚಿಸುವವರದ್ದು ಖಂಡಿತಾ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News