×
Ad

ಜಿಬಿಎ ಚುನಾವಣೆ; ನಾಳೆಯಿಂದ 369 ವಾರ್ಡ್‌ಗಳ ಆಕಾಂಕ್ಷಿಗಳ ಅರ್ಜಿ ಸ್ವೀಕಾರ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-12-14 21:52 IST

 ಡಿ.ಕೆ.ಶಿವಕುಮಾರ್

ಬೆಂಗಳೂರು : "ನಾಳೆಯಿಂದ ಜಿಬಿಎ ಚುನಾವಣೆಗೆ ಅರ್ಜಿ ಸ್ವೀಕಾರ ಮಾಡಲಾಗುವುದು. ಮೀಸಲಾತಿ ಇನ್ನು ಅಂತಿಮವಾಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಯಾರಿಗೆಲ್ಲಾ ಆಸಕ್ತಿ ಇದೆ ಎಂದು ತಿಳಿಯಲು ಅರ್ಜಿ ಕರೆಯಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಶಿವಕುಮಾರ್ ಅವರು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

"ನಿನ್ನೆ ಸಚಿವರ ಜೊತೆ ಚರ್ಚಿಸಿ ಈ ಅರ್ಜಿ ಜೊತೆಗೆ ಪಡೆಯುವ ಹಣವನ್ನು ಪಕ್ಷದ ಕಟ್ಟಡ ನಿಧಿಗೆ ಬಳಸಲು ತೀರ್ಮಾನಿಸಿದ್ದು, ಸಾಮಾನ್ಯವರ್ಗಕ್ಕೆ 50 ಸಾವಿರ ಹಾಗೂ ಮಹಿಳೆಯರು ಹಾಗೂ ಪರಿಶಿಷ್ಟ ಸಮುದಾಯದವರಿಗೆ 25 ಸಾವಿರ ರೂ. ನಿಗದಿಪಡಿಸಲಾಗಿದೆ. ಆನ್ಲೈನ್ ಅರ್ಜಿ ಹಾಕಲು ಅವಕಾಶ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.

ಮತ ಕಳ್ಳತನ ವಿರುದ್ಧದ ಹೋರಾಟ ಮುಂದುವರಿಯಲಿದೆ:

ಮತ ಕಳ್ಳತನ ವಿರುದ್ಧದ ಹೋರಾಟ ಇಲ್ಲಿಗೆ ಮುಗಿಯುವುದೇ ಎಂದು ಕೇಳಿದಾಗ, "ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಮತ ಕಳ್ಳತನ ವಿರುದ್ಧ ನಾವು ಆರಂಭಿಸಿರುವ ಹೋರಾಟ ಮುಂದುವರಿಯಲಿದೆ. ಪ್ರತಿ ಕ್ಷೇತ್ರದಲ್ಲಿ ನಾವು ಲೀಗಲ್ ಬ್ಯಾಂಕ್ ಸ್ಥಾಪಿಸುತ್ತೇವೆ. ನಮ್ಮ ಪಕ್ಷದ ಪರ ಇರುವ ವಕೀಲರನ್ನು ಇದರಲ್ಲಿ ಸೇರಿಸಲಾಗುವುದು. ಇವರು ನಮ್ಮ ಕಾರ್ಯಕರ್ತರಿಗೆ ಕಾನೂನು ಸಲಹೆ ನೀಡಲಾಗುವುದು. ಜಿ.ಸಿ.ಚಂದ್ರಶೇಖರ್ ಅವರು ಬಿಎಲ್‌ ಎ ಗುರುತಿನ ಚೀಟಿ ನೀಡಲು ತಯಾರು ಮಾಡಿಕೊಂಡಿದ್ದಾರೆ. ಎಐಸಿಸಿಯಿಂದ ಒಪ್ಪಿಗೆ ಪಡೆಯಲು ತೆಗೆದುಕೊಂಡು ಹೋಗಲಾಗುವುದು. ನಾವು ಇಡೀ ದೇಶದಲ್ಲಿಯೇ ಅತಿ ಹೆಚ್ಚು ಸಹಿ ಸಂಗ್ರಹ ಮಾಡಿದ್ದೇವೆ ಎಂದರು.

ಜನರ ಉತ್ಸಾಹ ಮುಂದಿನ ಚುನಾವಣೆಗಳಿಗೆ ನಾಂದಿ:

ಇಂದಿನ ಪ್ರತಿಭಟನೆಯಲ್ಲಿ ಜನರಲ್ಲಿ ಇದ್ದ ಉತ್ಸಾಹ 2028 ಹಾಗೂ 2029ರ ಚುನಾವಣೆಗೆ ನಾಂದಿಯಾಡಿದೆ. ಈ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಇದೆ ಎಂದು ಪಕ್ಷ ಉಳಿಸಿಕೊಳ್ಳಲು ಕಾರ್ಯಕರ್ತರು ಸಜ್ಜಾಗಿದ್ದಾರೆ. ಇದರಿಂದ ಸಂತೋಷವಾಗಿದೆ, ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದೆ. ಅಧಿಕಾರ ಸಿಗದ ಕಾರ್ಯಕರ್ತರು ಕೂಡ ತಮ್ಮ ಹಣದಲ್ಲಿ ಈ ಪ್ರತಿಭಟನೆಗೆ ಆಗಮಿಸಿದ್ದಾರೆ ಎಂದರು.

ನನ್ನನ್ನು ನೋಡಿದರೆ ನಮ್ಮ ನಾಯಕರು ಕುಶಲೋಪರಿ ವಿಚಾರಿಸುತ್ತಾರೆ :

ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಕೇಳಿದಾಗ, "ನಮ್ಮ ನಾಯಕರಿಗೆ ನನ್ನನ್ನು ನೋಡಿದ ತಕ್ಷಣ ಅರ್ಥವಾಗುತ್ತದೆ. ನನ್ನ ಕುಶಲೋಪರಿ ವಿಚಾರಿಸುತ್ತಾರೆ. ಇದು ಸೌಹಾರ್ದಯುತ ಭೇಟಿ, ವೈಯಕ್ತಿಕ ಭೇಟಿ ಅಲ್ಲ. ಇದರ ಹೊರತಾಗಿ ಬೇರೆ ವಿಚಾರಗಳನ್ನು ನಿಮ್ಮ ಮುಂದೆ ಬಹಿರಂಗಪಡಿಸಲು ಆಗುವುದಿಲ್ಲ. ಅದರ ಅವಶ್ಯಕತೆ ಇಲ್ಲ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News