ಜಾನುವಾರಿನ ಕಳೇಬರಹ ಪತ್ತೆ: ಪ್ರಕರಣ ದಾಖಲು
ಶಿರ್ವ, ಜೂ.1: ಶಿರ್ವ ಗ್ರಾಮದ ಕಲೊಟ್ಟು ಸೇತುವೆಯ ಕೆಳಗಡೆ ಪಾಪನಾಶಿನಿ ಹೊಳೆಯ ನೀರಿನಲ್ಲಿ ಜೂ.1ರಂದು ಬೆಳಗ್ಗೆ ಜಾನುವಾರಿನ ತಲೆ ಬುರುಡೆಯ ಭಾಗ, ಕಾಲಿನ ಗೆರಸು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಸ್ಥಳಕ್ಕೆ ಕಾಪು ಪಶು ಆಸ್ಪತ್ರೆ ಅಧಿಕಾರಿಗಳು, ಶಿರ್ವ ಪೊಲೀಸರು ಹಾಗೂ ಜಿಲ್ಲಾ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದು, ಜಾನುವಾರಿನ ತಲೆಯ ಮೇಲ್ದವಡೆಯ ಪೂರ್ತಿ ಭಾಗ ಇರುವುದು ಕಂಡು ಬಂದಿದೆ. ಇದರಲ್ಲಿ ಹಲ್ಲುಗಳು ಮುಗಿನ ಹೊಳ್ಳೆಯ ಭಾಗ ಇದ್ದು, ಚರ್ಮ ಇರುವುದಿಲ್ಲ. ಈ ಮೇಲ್ದವಡೆಯ ಭಾಗವು ಹಸುವಿನದ್ದಾಗಿರಬಹುದು ಎಂದು ಪಶು ಸಹಾಯಕ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
ಸ್ವಲ್ಪ ದೂರದಲ್ಲಿ ನೀರಿನಲ್ಲಿ ಜಾನುವಾರಿನ ಕಾಲಿನ 2 ಗೆರಸುಗಳು ಮತ್ತು ಮಾಂಸ ಹಾಗೂ ಎರಡು ಕಡೆ ಜಾನುವಾರಿನ ಹೊಟ್ಟೆಯ ಒಳಗಿನ ಭಾಗಗಳು ಕೂಡ ಕಂಡುಬಂದಿದೆ. ಯಾರೋ ದುಷ್ಕರ್ಮಿಗಳು ಹಸುವನ್ನು ಕಡಿದು ಮಾಂಸ ಮಾಡಿ ಅವಶೇಷಗಳನ್ನು ಹೊಳೆಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದರಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.