ಗಂಗೊಳ್ಳಿ: ಬಗೆಹರಿಯದ ಸಮಸ್ಯೆಗಳ ಮಧ್ಯೆಮೀನುಗಾರಿಕಾ ಋತು ಅಂತ್ಯ
ಕುಂದಾಪುರ: ಜೂನ್ 1ರಿಂದ 61 ದಿನ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಉಡುಪಿ ಜಿಲ್ಲೆಯ ಪ್ರಮುಖ ಬಂದರು ಪ್ರದೇಶವಾದ ಗಂಗೊಳ್ಳಿಯಲ್ಲಿ ಅನೇಕ ಸಮಸ್ಯೆಗಳ ನಡುವೆ ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ನಿರಾಶಾದಾಯಕ ಅಂತ್ಯ ಕಂಡಿದೆ.
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಪ್ರತಿ ಬಾರಿ ಆಗಸ್ಟ್ ತಿಂಗಳಿನಿಂದ ಆರಂಭವಾಗುವ ಮೀನುಗಾರಿಕೆ ಮೇ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳುತ್ತದೆ. ಸರಕಾರದ ಆದೇಶದ ಪ್ರಕಾರ ಜೂ.1ರಿಂದ ಜು.31ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರಿಕೆಗೆ ನಿಷೇಧವಿರುತ್ತದೆ. ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಮೀನುಗಾರರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದು, ಹವಾಮಾನ ವೈಪರೀತ್ಯ, ಮತ್ಸ್ಯ ಕ್ಷಾಮ ಮೊದಲಾದ ಕಾರಣಗಳಿಂದ ಮೀನು ಗಾರರು ನಿರಾಶೆಯಲ್ಲಿಯೇ ಈ ಮೀನುಗಾರಿಕಾ ಋತುವನ್ನು ಕೊನೆಗೊಳಿಸಿದ್ದಾರೆ.
ಗಂಗೊಳ್ಳಿ ಬಂದರಿನಲ್ಲಿ ಸುಮಾರು 70ಕ್ಕೂ ಅಧಿಕ ಆಳಸಮುದ್ರ ಮೀನುಗಾರಿಕಾ ಬೋಟುಗಳು, 40ಕ್ಕೂ ಮಿಕ್ಕಿ ಪರ್ಸಿನ್ ಬೋಟುಗಳು, 40ಕ್ಕೂ ಮಿಕ್ಕಿ ಫಿಶಿಂಗ್ ಬೋಟುಗಳು ಮತ್ತು 250ಕ್ಕೂ ಮಿಕ್ಕಿ ಮೀನುಗಾರಿಕಾ ದೋಣಿ ಗಳು ಮೀನುಗಾರಿಕೆ ನಡೆಸುತ್ತವೆ. ಗಂಗೊಳ್ಳಿ ಬಂದರಿನ ಮೂಲಕ ಮೀನುಗಾರಿಕೆ ನಡೆಸುವ ಬೋಟುಗಳ ಸಂಖ್ಯೆ ಅಧಿಕವಾಗಿರುವ ಹಿನ್ನಲೆಯಲ್ಲಿ ಬಂದರಿನಲ್ಲಿ ಸ್ಥಳಾವಕಾಶದ ಕೊರತೆಯೂ ಇದೆ. ಹೀಗಾಗಿ ಗಂಗೊಳ್ಳಿಯ ಬೋಟು ಗಳು ಬೇರೆ ಬೇರೆ ಬಂದರಿನಲ್ಲಿ ವ್ಯವಹಾರ ನಡೆಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಕ್ಷೀಣಿಸುವುದರೊಂದಿಗೆ ಆರ್ಥಿಕ ಗಳಿಕೆಯ ಮೇಲೂ ಪರಿಣಾಮ ಬೀರುತ್ತದೆ.
ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಮತ್ಸ್ಯಕ್ಷಾಮ, ಹವಾಮಾನ ವೈಪರೀತ್ಯ ಮೊದಲಾದ ಕಾರಣಗಳಿಂದ ಸುಮಾರು ನಾಲ್ಕೈದು ತಿಂಗಳಿನಲ್ಲಿ ನಿರೀಕ್ಷೆಯಷ್ಟು ಮೀನುಗಾರಿಕೆ ನಡೆಯದಿರುವುದರಿಂದ ಬಹುತೇಕ ಬೋಟು ಗಳು ಮ್ಯಾಂಗನೀಸ್ ರಸ್ತೆ ವಠಾರ, ಪೋರ್ಟ್ ಆಫೀಸಿನ ಬಳಿ ಲಂಗರು ಹಾಕಿದ್ದವು. ಮೀನುಗಾರಿಕಾ ಋತುವಿನ ಕೊನೆಯ ತಿಂಗಳಿನಲ್ಲಾದರೂ ಆಶಾದಾಯಕ ಮೀನುಗಾರಿಕೆ ನಡೆಯಬಹುದೆಂಬ ಮೀನುಗಾರರ ಆಸೆ ಕೊನೆಗೂ ಈಡೇರಿಲ್ಲ.
ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ವಠಾರದಲ್ಲಿ ಹಾಗೂ ಇನ್ನಿತರ ಸುರಕ್ಷಿತ ತಾಣಗಳಲ್ಲಿ ಬೋಟುಗಳನ್ನು ಲಂಗರು ಹಾಕಲಾಗಿದೆ. ದಡ ಸೇರಿಸಿದ ಬೋಟುಗಳನ್ನು ಮಳೆಗಾಲದಲ್ಲಿ ಸಂರಕ್ಷಿಸಿಡುವ ಕಾರ್ಯ ಇದೀಗ ಭರದಿಂದ ಸಾಗು ತ್ತಿದೆ. ಬೋಟಿನ ಮೀನುಗಾರಿಕಾ ಬಲೆ ಮುಂತಾದ ಬೆಲೆ ಬಾಳುವ ಸಾಮಾಗ್ರಿಗಳನ್ನು ಸುರಕ್ಷಿತ ತಾಣಕ್ಕೆ ಒಯ್ಯಲಾಗಿದೆ.
ಮತ್ಸ್ಯಕ್ಷಾಮದಿಂದ ಕಂಗಾಲು: ಕಳೆದ ಹಲವಾರು ವರ್ಷಗಳಿಂದ ಮೀನುಗಾರರನ್ನು ಕಂಗೆಡಿಸಿದ್ದ ಮತ್ಸ್ಯಕಾಮ ಈ ಬಾರಿಯೂ ಮೀನುಗಾರರನ್ನು ಬೆಂಬಿಡದೆ ಕಾಡಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಕಾಡುತ್ತಿರುವ ಮತ್ಸ್ಯಕ್ಷಾಮ ಮೀನುಗಾರರ ಬದುಕನ್ನು ಹಿಂಡಿದೆ. ಹೀಗಾಗಿ ಮತ್ಸ್ಯಕ್ಷಾಮ ಮೀನುಗಾರರ ಆರ್ಥಿಕ ಗಳಿಕೆಯ ಮೇಲೆ ಅಗಾಧ ಪರಿಣಾಮ ಬೀರಿದೆ.
ದುರಸ್ಥಿಯಾಗದ ಜೆಟ್ಟಿ: ಕುಸಿದು ಬಿದ್ದಿರುವ ಜೆಟ್ಟಿಯ ಪುನರ್ ನಿರ್ಮಾಣ 4 ವರ್ಷ ಕಳೆದರೂ ಇನ್ನೂ ಆರಂಭ ಗೊಂಡಿಲ್ಲ. ಹೀಗಾಗಿ ಬಂದರಿನ ಸುಮಾರು 200ಮೀ. ಉದ್ದದ ಜೆಟ್ಟಿಯಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ಬಂದರಿನಲ್ಲಿ ಬೋಟುಗಳು ಮತ್ತು ದೋಣಿಗಳು ತಂಗಲು ಸ್ಥಳಾವಕಾಶದ ಕೊರತೆಯೂ ಎದ್ದು ಕಾಣುತ್ತಿದೆ. ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯ ಸಮಪರ್ಕವಾಗಿ ನಡೆಯದಿರುವುದರಿಂದ ಗಂಗೊಳ್ಳಿಯ ಅಳಿವೆ ಈ ಬಾರಿ ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಹೂಳೆತ್ತುವ ಕಾರ್ಯ ಸಹ ಸರಿಯಾಗಿ ನಡೆಯದೇ ಕುಂಟುತ್ತಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಗೊಳ್ಳಿಯಲ್ಲಿ ಕಿರು ಮೀನುಗಾರಿಕಾ ಬಂದರು ಅನುಷ್ಠಾನಗೊಂಡಿದ್ದರೂ ನಡೆದ ಕಳಪೆ ಕಾಮಗಾರಿಗಳು, ಬಾಕಿ ಉಳಿದಿರುವ ಕಾಮಗಾರಿಗಳಿಂದಾಗಿ ಹತ್ತು ಹಲವು ಸಮಸ್ಯೆಗಳು ಮೀನುಗಾರರ ನಿದ್ದೆಗೆಡಿಸಿವೆ.ದಶಕಗಳೇ ಕಳೆದರೂ ಗಂಗೊಳ್ಳಿ ಬಂದರು ಸಮಸ್ಯೆಗೆ ಇನ್ನೂ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂಬ ಅಳಲು ಈ ಭಾಗದ ಮೀನುಗಾರರದ್ದಾಗಿದೆ. ಗಂಗೊಳ್ಳಿ ಬಂದರು ಪ್ರದೇಶ ದಲ್ಲಿ ಇದೀಗ ಮೀನುಗಾರಿಕೆ ವರ್ಷದಿಂದ ವರ್ಷಕ್ಕೆ ಕುಸಿಯು ತ್ತಿರುವುದು ಮೀನುಗಾರರ ನಿದ್ದೆಗೆಡಿಸಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಜನಪ್ರತಿನಿಧಿ ಗಳು, ಸರಕಾರ ಈ ಬಗ್ಗೆ ಗಮನಹರಿಸಿ ದಶಕಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡು, ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಬಡ ಮೀನುಗಾರರ ಜೀವನಕ್ಕೆ ಭದ್ರತೆ ಒದಗಿಸಬೇಕಾಗಿದೆ.
ಈ ಬಾರಿ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆದಿದ್ದು ಕೊನೆಯ ನಾಲ್ಕೈದು ತಿಂಗಳಿಂದ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ಅಲ್ಲದೆ ಮೀನಿಗೆ ಸರಿಯಾದ ದರ ದೊರೆಯುತ್ತಿಲ್ಲ ಎಂಬುದು ಸ್ಥಳೀಯ ಮೀನುಗಾರರ ದೂರಾಗಿದೆ. ಹವಾಮಾನ ವೈಪರೀತ್ಯ, ಮತ್ಸ್ಯಕ್ಷಾಮ ಮೊದಲಾದ ಕಾರಣಗಳಿಂದ ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸು ವಂತಾಗಿದೆ ಎಂದು ಮಲ್ಪೆಯ ಮೀನುಗಾರರು ಅವಲತ್ತುಕೊಂಡಿದ್ದಾರೆ.