ಕಾರಂತರ ಪರಿಸರ ಕಾಳಜಿ ಯುವ ಜನಾಂಗಕ್ಕೆ ಮಾರ್ಗದರ್ಶಕ: ಡಾ.ಗಣನಾಥ ಎಕ್ಕಾರು
ಉಡುಪಿ, ಜೂ.5: ಡಾ.ಶಿವರಾಮ ಕಾರಂತರು ತಮ್ಮ ಕೃತಿಗಳಲ್ಲಿ ಕರಾವಳಿಯ ಪರಿಸರದ ಮಹತ್ವವನ್ನು ಸಾರಿ ದ್ದಾರೆ. ಪರಿಸರದ ಕುರಿತಾದ ಅವರ ಕಾಳಜಿಯು ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸುವ ಕಾರ್ಯವನ್ನು ಅವರು ನಡೆಸಿದ್ದಾರೆ. ಈ ದೃಷ್ಟಿಯಿಂದ ಅವರ ನೆನಪಿನಲ್ಲಿ ಪರಿಸರ ದಿನಾಚರಣೆಯನ್ನು ನಡೆಸುವುದು ಅರ್ಥಪೂರ್ಣ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ, ನಮ್ಮ ಮನೆ ನಮ್ಮ ಮರ ಅಭಿಯಾನ ತಂಡ, ಕನ್ನಡ ಸಾಹಿತ್ಯ ಪರಿಷತ್ತು ಸಹಭಾಗಿತ್ವದಲ್ಲಿ ಅಲೆವೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಕಾರಂತರ ನೆನಪಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಉರಗ ತಜ್ಞ ಗುರುರಾಜ್ ಸನಿಲ್, ಪರಿಸರವು ಮಾನವ ಬದುಕಿನ ಜೀವದಾತುವಾಗಿದೆ. ಇದನ್ನು ಅರ್ಥ ಮಾಡಿಕೊಂಡರೆ ಪರಿಸರ ರಕ್ಷಣೆ ಸುಲಭ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ರಂಜಿನಿ ವಸಂತ್, ಸದಸ್ಯೆ ದೀಪಾ ಕರ್ಕಿ, ಮಣಿಪಾಲ ರೇಡಿಯೋದ ಡಾ.ರಶ್ಮಿ ಅಮ್ಮೆಂಬಳ, ಆಕ್ಸಿಸ್ ಬ್ಯಾಂಕ್ನ ಜ್ಯೋತಿ ಶೆಟ್, ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಸತೀಶ್ ಕೊಡವೂರು, ಮೋಲ್ಟೋ ಕ್ಯಾರ್ನ ಕೆ.ಆರ್ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.