ಕಾಯಿಲೆಗಳ ಪತ್ತೆಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿ: ಡಾ.ಪ್ರಕಾಶ್ ಭಟ್
ಶಿರ್ವ, ಜೂ.7: ಇಂದಿನ ಸ್ಥಿತಿಗತಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ದೇಶ ವಿದೇಶಗಳಿಂದ ಅತೀ ವೇಗವಾಗಿ ಹರಡುವ ನಾನಾ ವೈರಸ್ಗಳೂ ಪತ್ತೆಯಾಗಿವೆ. ಪ್ರಕೃತಿಯ ಏರುಪೇರುಗಳಿಂದ ಶರೀರಕ್ಕೆ ನಾನಾ ಕಾಯಿಲೆ ಗಳು ಬರುತ್ತವೆ. ದೇಹವನ್ನು ಕಾಪಾಡುವುದರ ಜೊತೆಗೆ ಪ್ರಕೃತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ನಮ್ಮ ಗುರುತರ ಜವಾಬ್ದಾರಿಯೂ ಆಗಿದೆ. ಗೊತ್ತಿಲ್ಲದ ಕಾಯಿಲೆಗಳ ಪತ್ತೆಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿ ಎಂದು ಹಿರಿಯ ವೈದ್ಯ ಹಾಗೂ ಆರ್ಥೊಪೆಡಿಕ್ ಸ್ಪೆಷಲಿಸ್ಟ್ ಡಾ.ಪ್ರಕಾಶ್ ಭಟ್ ಉಡುಪಿ ಹೇಳಿದ್ದಾರೆ.
ಶಂಕರಪುರ ಸಮೀಪದ ಸಾಲ್ಮರ ಕೃಷ್ಣವೇಣಿ ಆಯುರ್ವೇದ, ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ, ಜೇಸಿಐ ಶಂಕರಪುರ ಜಾಸ್ಮಿನ್, ಗಾಯತ್ರಿ ವೃಂದ ಬಂಟಕಲ್ಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾಲಯದಲ್ಲಿ ರವಿವಾರ ಏರ್ಪಡಿಸಿದ ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಹಿರಿಯ ಆಯುರ್ವೇದ ಸರ್ಜನ್ ಡಾ.ಸುಕೇಶ್ ಎ.ಮೂಡಬಿದ್ರೆ ಮಾತನಾಡಿ, ಕಾಯಿಲೆ ಬಂದಾಗ ಮಾತ್ರ ವೈದ್ಯರನ್ನು ಕಾಣುವುದಲ್ಲ. ಆಗಾಗ ಆರೋಗ್ಯ ತಪಾಸಣೆಯನ್ನು ಮಾಡುವುದೂ ಅಗತ್ಯ ವಾಗಿದೆ. ಹಳ್ಳಿ ಪಂಡಿತರು ಆಯುರ್ವೇದ ವೈದ್ಯರಲ್ಲ. ವೈದ್ಯರಲ್ಲಿಗೆ ಹೋಗಿ ತಪಾಸಣೆ ನಡೆಸಿ ಔಷಧಿ ತಂದರೆ ಅದು ಆಯುರ್ವೇದ ಮದ್ದು ಎಂದರು.
ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಹರಿದಾಸ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜೇಸಿಐ ನಾಯಕ ನವೀನ್ ಅಮೀನ್ ಶಂಕರಪುರ, ಜೇಸಿಐ ಅಧ್ಯಕ್ಷ ರಾಜೇಶ್ ಆಚಾರ್ಯ, ಕಾರ್ಯದರ್ಶಿ ಭವ್ಯ ಸುವರ್ಣ, ಬಂಟಕಲ್ಲು ಗಾಯತ್ರಿ ವೃಂದದ ಅಧ್ಯಕ್ಷೆ ವಿದ್ಯಾ ಹರೀಶ್, ಕೃಷ್ಣವೇಣಿ ಆಯುರ್ವೇದ ಮತ್ತು ಆಶ್ರಯಧಾಮದ ಟ್ರಸ್ಟಿ ಪದ್ಮನಾಭ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಮೇಶ್ ಮಿತ್ತಾಂತಾಯ ಉಪಸ್ಥಿತರಿದ್ದರು.
ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಲಕ್ಷ್ಮೀಶ ಉಪಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶುಶ್ರೂಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಶುಶ್ರೂಷಕಿ ನಾಗವೇಣಿ ಆರ್.ಶೆಟ್ಟಿ ವಂದಿಸಿದರು. ಡಾ,ಅನುಪಮಾ, ಭಾರತಿ, ಸರಸ್ವತಿ, ಅಭಿಷೇಕ್ ಶ್ರೀದೇವ್ ಸಹಕರಿಸಿದರು.