×
Ad

Karkala | ಫೇಸ್‌ಬುಕ್‌ನಲ್ಲಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆಗೆ ಅವಹೇಳನಕಾರಿ ಕಮೆಂಟ್ಸ್: ಆರೋಪಿ ಬಂಧನ

Update: 2026-06-07 15:56 IST

ಬಂಧಿತ ಆರೋಪಿ

ಕಾರ್ಕಳ, ಜೂ.7: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜ್ಯದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ, ಜಾತಿನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಓರ್ವ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಕೇರ್ವಾಶೆ ನಲ್ಕೆದಬೆಟ್ಟು ನಿವಾಸಿ ಸುಧೀರ ಬಂಗೇರ(48) ಬಂಧಿತ ಆರೋಪಿ. ‘ನಮ್ಮ ಕಾರ್ಲ’ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಕರ್ನಾಟಕ ರಾಜ್ಯ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ ‘ಆರೆಸ್ಸೆಸ್‌ ಇನ್ನು ಎರಡು ವರ್ಷಗಳ ಅವಧಿ ಕೋಮು ವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ’ ಎಂಬ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆಯನ್ನು ಫೋಸ್ಟ್ ಮಾಡಲಾಗಿತ್ತು.

ಈ ಪೋಸ್ಟ್‌ಗೆ ಸುಧೀರ್ ಬಂಗೇರ ಎಂಬಾತ ಜೂ.6ರಂದು ಕಮೆಂಟ್ ಹಾಕಿದ್ದು, ಅದರಲ್ಲಿ ಅವಹೇಳನಕಾರಿಯಾಗಿ ಓರ್ವ ದಲಿತ ಸಚಿವರ ವಿರುದ್ದ ಕಮೆಂಟ್ ಹಾಕಿರುವುದಾಗಿ ದೂರಲಾಗಿದೆ. ಸುಧೀರ ಬಂಗೇರ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಹಾನಿ ಮಾಡುವ ಚಟುವಟಿಕೆಯಲ್ಲಿ ತೊಡಗಿ ದಲಿತ ಸಚಿವರಿಗೆ ಜಾತಿ ನಿಂದನೇ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಕಾರ್ಕಳ ನಿಟ್ಟೆ ಅತ್ತೂರಿನ ಸುರೇಶ ಚೇತನಹಳ್ಳಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದ ಆರೋಪಿ ಸುಧೀರ ಬಂಗೇರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News