ವೈದ್ಯ, ಸಿಎ, ಪತ್ರಿಕಾ ರಂಗದ ಸಾಧಕರಿಗೆ ವಿಶ್ವ ಗೌರವ ಪುರಸ್ಕಾರ ಪ್ರದಾನ
ಉಡುಪಿ, ಜು.1: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವತಿಯಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಗೌರವ ಪುರಸ್ಕಾರವನ್ನು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಉಡುಪಿ ಶಾಖೆ ಮಳಿಗೆಯಲ್ಲಿ ಬುಧವಾರ ಪ್ರದಾನ ಮಾಡಲಾಯಿತು.
ಮಲಬಾರ್ ವಿಶ್ವ ವೈದ್ಯ ಪುರಸ್ಕಾರವನ್ನು ಡಾ.ಎ.ರಾಮಚಂದ್ರ ಬಾಯರಿ, ಡಾ.ಕೆ.ಸತೀಶ್ ಕಾಮತ್, ಡಾ.ಇಂದಿರಾ ವಿ.ಶಾನುಭೋಗ್, ಮಲಬಾರ್ ವಿಶ್ವ ಲೆಕ್ಕ ಪರಿಶೋಧಕರ ಪುರಸ್ಕಾರವನ್ನು ಸಿಎ ದೇವ ಆನಂದ್, ಸಿಎ ಗಣೇಶ್ ಎರ್ಮಾಳು ಹಾಗೂ ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರವನ್ನು ಶಶಿಧರ್ ಮಾಸ್ತಿಬೈಲು, ಬಾಲಕೃಷ್ಣ ಪೂಜಾರಿ ಉಚ್ಚಿಲ, ರಾಮ್ ಅಜೆಕಾರ್ ಅವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಕ್ಕಳು, ಯುವಜನತೆ ಸಮಾಜಮುಖಿಯಾಗಿ ಪರಿಸರ ಕಾಳಜಿ ಹೊಂದುವುದು ಅಗತ್ಯ ಮತ್ತು ಅನಿವಾರ್ಯ. ಮಕ್ಕಳಿಗೆ ಉಪದೇಶದ ಬದಲು ಯಾವುದೇ ಉತ್ತಮ ಕೆಲಸವನ್ನು ಮಾಡಿ ತೋರಿಸಬೇಕು. ಮನೆಗಳಲ್ಲಿ ಗ್ರಂಥಾಲಯ ರೂಪುಗೊಂಡರೆ ಬೌದ್ಧಿಕ ಶ್ರೀಮಂತಿಕೆ ಹೆಚ್ಚಳ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪಾಂಡೇಶ್ವರ ಗುರುಕುಲದ ಡಾ.ವಿಜಯ ಕುಮಾರ್ ಮಂಜರ್ ವಹಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠ್ಠಾನದ ಸ್ಥಾಪಕ ಯು. ವಿಶ್ವನಾಥ್ ಶೆಣೈ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ. ಮಾತನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವ್ಯವಸ್ಥಾಪಕ ವಿಜಯ್ ಕುಮಾರ್ ಡಿ. ಉಪಸ್ಥಿತರಿದ್ದರು.
ಸನ್ಮಾನ ಪತ್ರವನ್ನು ಡಾ.ಭಾರ್ಗವಿ ಐತಾಳ್, ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ರಂಜನಿ ವಸಂತ್ ವಾಚಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ಸ್ವಾಗತಿಸಿದರು. ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಪಣಿಯಾಡಿ ವಂದಿಸಿದರು.