ಗೋಳಿಹೊಳೆಯಲ್ಲಿ ಶ್ರೀರಾಮ ಕ್ಷೇತ್ರದ ಶ್ರೀಗಳ ಚಾತುರ್ಮಾಸ

Update: 2026-07-25 21:23 IST

ಕುಂದಾಪುರ, ಜು.25 ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀಬ್ರಹ್ಮಾನಂದ ಸರಸ್ವತಿಜೀ ಮಹಾರಾಜ ಸ್ವಾಮೀಜಿ ಅವರ ಈ ಬಾರಿಯ ಚಾತುರ್ಮಾಸ್ಯ ವೃತಾಚರಣೆ ಬೈಂದೂರು ಚಾತು ರ್ಮಾಸ ವ್ರತಾಚರಣೆ ಸಮಿತಿ ನೇತೃತ್ವದಲ್ಲಿ ಜು.29ರಿಂದ ಸೆ.14 ರವರೆಗೆ ಬೈಂದೂರು ಸಮೀಪದ ಗೋಳಿ ಹೊಳೆಯ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಬೈಂದೂರು ಶಾಸಕ, ಬೈಂದೂರು ಚಾತುರ್ಮಾಸ ಸಮಿತಿ ಅಧ್ಯಕ್ಷ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.

ಕುಂದಾಪುರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಷಯ ತಿಳಿಸಿದರು. ಶ್ರೀರಾಮ ಕ್ಷೇತ್ರದ ಶ್ರೀಗಳು ಉಡುಪಿ ಜಿಲ್ಲೆಯಲ್ಲಿ ನಡೆಸುವ ಪ್ರಥಮ ಚಾತುರ್ಮಾಸ್ಯ ಇದಾಗಿದೆ. ಸನಾತನ ಪರಂಪರೆಯಲ್ಲಿ ಚಾತುರ್ಮಾಸ್ಯ ಎನ್ನುವುದು ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಕಾರ್ಯಕ್ರಮವಾಗಿದೆ. ಬೈಂದೂರು ಕ್ಷೇತ್ರದ ಜನ ಒಂದಾಗಿ, ಜಾತಿಮತ ಬೇಧವಿಲ್ಲದೆ 48 ದಿನಗಳ ಕಾಲ ನಡೆಯುವ ಶ್ರೀಗಳ ಚಾತುರ್ಮಾಸ್ಯವನ್ನು ಯಶಸ್ವಿ ಗೊಳಿಸಲು ಸಂಕಲ್ಪ ಮಾಡಿದ್ದಾರೆ ಎಂದರು.

ಬೈಂದೂರು ಚಾತುರ್ಮಾಸ ಯಶಸ್ಸಿಗೆ ಈಗಾಗಲೆ 48 ಸಮಿತಿಗಳನ್ನು ಮಾಡಿ, 48 ದಿನಗಳ ಜವಾಬ್ದಾರಿಯನ್ನು ಒಂದೊಂದು ಗ್ರಾಮಕ್ಕೆ ವಹಿಸಲಾಗಿದೆ. 48 ದಿನಗಳನ್ನು ವಿಶೇಷವಾದ ಧಾರ್ಮಿಕ ವೈಶಿಷ್ಟ್ಯತೆ ಗಳೊಂದಿಗೆ ಆಚರಿ ಸಲು ನಿರ್ಧರಿಸಲಾಗಿದೆ. ಕೇವಲ ಉಡುಪಿ ಜಿಲ್ಲೆಯ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಮುಂಬಯಿ ಗಳಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದರು.

ಧರ್ಮಸಭೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ಸುನಿಲ್‌ಕುಮಾರ್, ಮಾಜಿ ಸಚಿವರಾದ ಮಂಕಾಳ ಎಸ್.ವೈದ್ಯ, ಮಧು ಬಂಗಾರಪ್ಪ ಹಾಗೂ ಉಡುಪಿ, ಮಂಗಳೂರಿನ ಶಾಸಕರು ಭಾಗವಹಿಸಲಿದ್ದಾರೆ ಎಂದರು.

ಬೈಂದೂರು ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ಸಮೀಪದ ಗೋಳಿಹೊಳೆ ಯಲ್ಲಿ ಶ್ರೀಗಳು 48 ದಿನಗಳ ಕಾಲ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿ ರುವುದು ಹೆಮ್ಮೆಯ ವಿಚಾರವಾಗಿದ್ದು, ಶ್ರೀಗಳು ಬೈಂದೂರು ಕ್ಷೇತ್ರದಲ್ಲಿ ಪ್ರಥಮವಾಗಿ ಚಾತುರ್ಮಾಸ್ಯ ಆಚರಿಸಿ ಕೊಳ್ಳುತ್ತಿದ್ದಾರೆ. ಜಾತಿಮತ ಪಕ್ಷ ಬೇದವಿಲ್ಲದೆ ಭಕ್ತಿಯೊಂದೇ ಮುಖ್ಯ ಎನ್ನುವ ನೆಲೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿದರು. ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ.ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News