ಬದುಕನ್ನು ಸಂದೇಶವಾಗಿ ಬಿಟ್ಟು ಹೋಗುವುದೇ ಸಾರ್ಥಕತೆ: ಗಫೂರ್
ಉಡುಪಿ, ಸೆ.3: ವ್ಯಕ್ತಿಗಳು ಹುಟ್ಟುತ್ತಾರೆ, ಬದುಕುತ್ತಾರೆ ಕೊನೆಗೊಂದು ದಿನ ಸಾಯುತ್ತಾರೆ. ಆದರೆ ಕೆಲ ವ್ಯಕ್ತಿಗಳು ಹುಟ್ಟುತ್ತಾರೆ, ಬದುಕುತ್ತಾರೆ, ಸಾಯುತ್ತಾರೆ ಆದರೆ ಸಾಯುವಾಗ ಅವರ ಬದುಕನ್ನು ಒಂದು ಸಂದೇಶವಾಗಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತಾರೆ. ಅದಕ್ಕೆ ಬದುಕಿನ ಸಾರ್ಥಕತೆ ಎನ್ನುವುದು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ತರ ಸುವರ್ಣ ಸಂಭ್ರಮ ಸಭಾಂಗಣದಲ್ಲಿ ಜರಗಿದ ಸಂಸ್ಥೆಯ ಗೌರವಾಧ್ಯಕ್ಷ ಮಂಜುನಾಥ್ ಉದ್ಯಾವರ ಸಂಸ್ಮರಣಾ ಕಾರ್ಯಕ್ರಮ ‘ಮಂಜಣ್ಣ ನೆನಪು-14’ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಉದ್ಯಾವರವನ್ನು ಒಂದು ಸೌಹಾರ್ದತೆಯ ನೆಲೆಯಲ್ಲಿ ಅಭಿವೃದ್ಧಿ ಗೊಳಿಸಲು ಮಂಜುನಾಥ್ ಉದ್ಯಾವರ ಪ್ರಯತ್ನ ಪಟ್ಟಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅದಕ್ಕೆ ಸಾಕ್ಷಿ ಈಗಿನ ಉದ್ಯಾವರ ಮತ್ತು ಇಂದಿನ ಕಾರ್ಯಕ್ರಮ ಎಂದರು.
ಮುಖ್ಯ ಅತಿಥಿಗಳಾಗಿ ಪಡುಬಿದ್ರೆ ಸಿ.ಎ. ಬ್ಯಾಂಕಿನ ಅಧ್ಯಕ್ಷ ವೈ.ಸುಧೀರ್ ಕುಮಾರ್, ಉದ್ಯಾವರ ಶಂಭುಕಲ್ಲು ಶ್ರೀವೀರಭದ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಉಲ್ಲಾಸ ಆರ್.ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಅಶಕ್ತರಿಗೆ ಒಂದು ಲಕ್ಷ ರೂ. ಮೊತ್ತದ ವೈದ್ಯಕೀಯ ನೆರವು ವಿತರಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್.ಭಂಡಾರಿ, ಶರತ್ ಕುಮಾರ್, ಯು.ಪದ್ಮನಾಭ ಕಾಮತ್ ಉಪಸ್ಥಿತರಿ ದ್ದರು. ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ತಿಲಕ್ ರಾಜ್ ಸಾಲಿಯಾನ್ ವೈದ್ಯಕೀಯ ನೆರವಿನ ಫಲಾನು ಭವಿಗಳ ಹೆಸರು ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾಭಿ ಥಿಯೇಟಸ್ರ್ ಮಂಗಳೂರು ಕಲಾವಿದರಿಂದ ’ಮಾರಿ ಕಾಡ್’ ತುಳು ಆಪ್ತರಂಗ ಪ್ರಯೋಗ ಜರಗಿತು.