ಸಂಜೀವಿನಿ ಒಕ್ಕೂಟದ ಮತ್ತೊಂದು ಅಕ್ರಮ ಬಯಲು| ಹೆಬ್ರಿಯಲ್ಲಿ ಮೂರನೇ ಪ್ರಕರಣ ದಾಖಲು: 28ಲಕ್ಷ ರೂ. ವಂಚನೆ
ಉಡುಪಿ, ಆ.8: ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಿಂದ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಕಳೆದ ಒಂದು ತಿಂಗಳಲ್ಲಿ ದಾಖಲಾದ ಮೂರು ಪ್ರಕರಣಗಳಲ್ಲಿ ಒಟ್ಟು 84.69ಲಕ್ಷ ರೂ. ಹಣವನ್ನು ಮೋಸ ಮಾಡಿರುವುದು ವರದಿಯಾಗಿದೆ.
ಮಹಿಳೆಯರ ಆರ್ಥಿಕ ಸಶಕ್ತೀಕರಣ, ಸ್ವಾವಲಂಬನೆ ಮತ್ತು ಉಳಿತಾಯ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಆರಂಭಿಸಲಾದ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಗಳಲ್ಲಿ ನಡೆಯುತ್ತಿರುವ ವಂಚನೆ ಜಾಲಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಈ ಸಂಬಂಧ ಹಿರಿಯಡ್ಕ, ಕೋಟ ಹಾಗೂ ಹೆಬ್ರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈವರೆಗೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೆಬ್ರಿ ಪ್ರಕರಣ: ಧನಲಕ್ಷ್ಮೀ ಸಂಜಿವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿದ್ದ ನಂದಿನಿ, 2020ರಿಂದ 2026ರವರೆಗೆ ಒಕ್ಕೂಟ ಸದಸ್ಯತ್ವ ಹೊಂದಿರುವ ವಿವಿದ ಸ್ವಸಹಾಯ ಸಂಘದ ಸದಸ್ಯರು ಗಳು ಪಡೆದು ಕೊಂಡ ಸಾಲವನ್ನು ಒಕ್ಕೂಟಕ್ಕೆ ಮರು ಪಾವತಿ ಮಾಡಿದ್ದರೂ ಕೂಡ ಸಾಲದ ಹಣವನ್ನು ಒಕ್ಕೂಟದ ಖಾತೆಗೆ ಜಮಾ ಮಾಡಿರಲಿಲ್ಲ.
ಆಕೆ ಎರಡೆರಡು ಖಾತೆ ಪುಸ್ತಕಗಳನ್ನು ಹಾಗೂ ರಶೀದಿ ಪುಸ್ತಕಗಳನ್ನು ನಿರ್ವಹಣೆ ಮಾಡಿ ಹಾಗೂ ನಕಲಿ ದಾಖಲೆ ಗಳನ್ನು ಸೃಷ್ಟಿಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಅವರ ನಕಲಿ ಸಹಿಗಳನ್ನು ಮಾಡಿ ಒಟ್ಟು 28,19,489ರೂ. ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿರುವುದಾಗಿ ಹೆಬ್ರಿ ತಾಲೂಕು ಸಂಜೀವಿನಿ ಯೋಜನೆಯ ಕಾರ್ಯಕ್ರಮ ವ್ಯವಸ್ಥಾಪಕಿ ಉಮಾ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೆರೆಡು ಪ್ರಕರಣಗಳು: ಎರಡು ದಿನಗಳ ಹಿಂದೆಯಷ್ಟೇ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಮೃದ್ದಿ ಸಂಜೀವಿನಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮುಖ್ಯ ಬರಹಗಾರರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಅಶ್ವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಅವರ ಸಹಿ ಮತ್ತು ಸೀಲನ್ನು ನಕಲಿ ಮಾಡಿ ಹಾಗೂ ಬೇರೆ ಬೇರೆ ಸ್ವಸಹಾಯ ಸಂಘದ ಸದಸ್ಯರ ನಕಲಿ ಸಹಿಯನ್ನು ಮಾಡಿ ಒಟ್ಟು 33,50,000ರೂ. ಹಣವನ್ನು ದುರುಪಯೋಗ ಮಾಡಿಕೊಂಡು ಮೋಸ ಮಾಡಿದ್ದಾರೆಂದು ದೂರಲಾಗಿತ್ತು.
ಅದೇ ರೀತಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ದಲ್ಲಿ ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿದ್ದ ಸುಗಂಧಿ, ತನ್ನ ಪತಿ ಸಂತೋಷ ಜೊತೆ ಸೇರಿಕೊಂಡು, ಒಕ್ಕೂಟದ ಒಟ್ಟು 23,00,000ರೂ. ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿರುವುದಾಗಿ ದೂರಲಾಗಿದೆ. ಈ ಸಂಬಂಧ ದಂಪತಿಯನ್ನು ಪೊಲೀಸರು ಬಂಧಿಸಿದ್ದರು.