ಮುದರಂಗಡಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಉತ್ತರ ಭಾರತದ ಮೂವರು ಸುಪಾರಿ ಕಿಲ್ಲರ್ಗಳ ಬಂಧನ
‘ಗುತ್ತಿಗೆ ಕಂಪೆನಿ ಜೊತೆಗಿನ ಹಣಕಾಸು ವಿವಾದವೇ ಹತ್ಯೆಗೆ ಕಾರಣ’
ಉಡುಪಿ, ಆ.8: ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು, ಮೂವರು ಉತ್ತರ ಭಾರತದ ಸುಪಾರಿ ಕಿಲ್ಲರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಶನಿವಾರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಬಂಧಿತರನ್ನು ಉತ್ತರಪ್ರದೇಶ ರಾಜ್ಯದ ಥಾಣಾ ಪಿಲ್ವದ ರಾಜು (42), ಉತ್ತರಖಾಂಡದ ಅಜಯ್ ರಸ್ತೋಗಿ ಯಾನೆ ಅನ್ಮೋಲ್ (23) ಮತ್ತು ಬಿಹಾರ ರಾಜ್ಯದ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್ (38) ಎಂದು ಗುರುತಿಸಲಾಗಿದೆ.
ರಾಜು, ಡೇವಿಡ್ ಡಿಸೋಜರನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿಯಾಗಿದ್ದು, ಆತನಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಹಾಗೂ ಆರೋಪಿಗಳು ಕೃತ್ಯ ನಡೆಸಲು ಉಪಯೋಗಿಸಿ, ಪಡುಬಿದ್ರೆ ಸಮೀಪದ ಎರ್ಮಾಳಿನಲ್ಲಿ ಬಿಟ್ಟು ಹೋಗಿದ್ದ ಬೈಕ್ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಸ್ಸಿನಲ್ಲಿ ಪರಾರಿಗೆ ಯತ್ನ: ಆ.7ರಂದು ಮದ್ಯಾಹ್ನ 3.45ರ ಸುಮಾರಿಗೆ ಮುದರಂಗಡಿಯಲ್ಲಿ ಡೇವಿಡ್ ಡಿಸೋಜ ಹತ್ಯೆ ಮಾಡಲು ಮೂವರು ಆರೋಪಿಗಳು ಕೂಡ ಬಂದಿದ್ದು, ಅವರಲ್ಲಿ ರಾಜು, ಡೇವಿಡ್ ತಲೆಗೆ ಗುಂಡಿಕ್ಕಿದ್ದನು. ಬಳಿಕ ಇಬ್ಬರು ಬೈಕಿನಲ್ಲಿ, ಮತ್ತೋರ್ವ ಬೇರೆ ವಾಹನದಲ್ಲಿ ಪರಾರಿಯಾಗಿದ್ದನು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳು ಪರಾರಿಯಾದ ಮಾರ್ಗದಲ್ಲಿನ ಸಿಸಿಟಿವಿ ಫುಟೇಜ್ ಪರಿಶೀಲಿಸಿ, ತನಿಖೆ ಮುಂದುವರೆಸಲಾಯಿತು. ಕೃತ್ಯ ಎಸಗಿದ ಬಳಿಕ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳ ಕಡೆಗೆ ಪರಾರಿಯಾಗುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ, ಆರೋಪಿಗಳು ಹೋಗುತ್ತಿದ್ದ ಬಸ್ಸನ್ನು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ತಡೆದು ನಿಲ್ಲಿಸಿದರು.
ಈ ವೇಳೆ ಪೊಲೀಸ್ ತಂಡವು ತಪಾಸಣೆ ನಡೆಸುವಾಗ ಬಸ್ಸಿನಲಿದ್ದ ಮೂವರು ಆರೋಪಿಗಳು ಬಸ್ಸಿನಿಂದ ಇಳಿದು ಓಡಿ ಹೋದರು. ಅವರನ್ನು ಬೆನ್ನಟ್ಟಿದ ಪೊಲೀಸರು, ಮೂವರ ಪೈಕಿ ಪ್ರಮುಖ ಆರೋಪಿ ರಾಜುನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಉಳಿದ ಇಬ್ಬರೂ ವಶಕ್ಕೆ: ಈ ವೇಳೆ ಪರಾರಿಯಾದ ಆರೋಪಿ ಅಜಯ್ ರಸ್ತೋಗಿಯನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಮತ್ತು ಜಿಯಾಹುಲ್ ವಜೂಲ್ ಶೇಖ್ನನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.
ಈ ಮೂಲಕ ಪೊಲೀಸ್ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸು ವಲ್ಲಿ ಯಶಸ್ವಿಯಾಗಿದೆ. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕ ಅಝ್ಮತ್ ಅಲಿ ಜಿ., ಡಿ.ಎಸ್.ಬಿ. ವಿಭಾಗದ ಎಸ್ಸೈ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಎಸ್ಸೈ ಮಹೇಶ್, ಕಾಪು ಎಸ್ಸೈ ತೇಜಸ್ವಿ, ಶಿರ್ವ ಎಸ್ಸೈ ಮಂಜುನಾಥ ಮರಬದ, ಕೊಲ್ಲೂರು ಎಸ್ಸೈ ವಿನಯ್, ಕಾರ್ಕಳ ಗ್ರಾಮಾಂತರ ಎಸ್ಸೈ ಪ್ರಸನ್ನ ಎಂ.ಎಸ್., ಪಡುಬಿದ್ರಿ ಎಸ್ಸೈ ಗಳಾದ ಶಕ್ತಿವೇಲು ಹಾಗೂ ಅನಿಲ್, ಶಿರ್ವ ಎಸ್ಸೈ ಲೋಹಿತ್ ಕುಮಾರ್, ಪ್ರೊಬೆಷನರಿ ಎಸ್ಸೈ ಶಿಫಾಝ್ ಹಾಗೂ ಸಿಬ್ಬಂದಿಯವರ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್. ಸೆಲ್ ಉಡುಪಿ ಇವರು ಈ ಕಾರ್ಯಾಚರಣೆಯಲ್ಲಿ ನಡೆಸಿದ್ದಾರೆ.
ಉತ್ತರ ಭಾರತದಿಂದಲೇ ಸುಪಾರಿ!
ಅದಾನಿ ಯುಪಿಸಿಎಲ್ ಗುತ್ತಿಗೆದಾರರಾಗಿದ್ದ ಡೇವಿಡ್ ಡಿಸೋಜ ಹಾಗೂ ಹೊರರಾಜ್ಯದ ಗುತ್ತಿಗೆ ಕಂಪೆನಿ ನಡುವಿನ ಹಣಕಾಸು ವಿವಾದವೇ ಈ ಹತ್ಯೆ ಕಾರಣವಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಯುಪಿಸಿಎಲ್ಗೆ ಸಂಬಂಧಿಸಿ ಉತ್ತರ ಭಾರತದ ಕಂಪೆನಿಯೊಂದು ಗುತ್ತಿಗೆ ಕಾಮಗಾರಿ ವಹಿಸಿಕೊಂಡಿದ್ದು, ಅದರಲ್ಲಿ ಉಪ ಗುತ್ತಿಗೆಯನ್ನು ಡೇವಿಡ್ ವಹಿಸಿ ಕಾಮಗಾರಿ ನಡೆಸಿದ್ದರು. ಇದರಲ್ಲಿ ಡೇವಿಡ್ಗೆ 80ಲಕ್ಷ ರೂ. ಹಣ ಬರಬೇಕಾ ಗಿತ್ತು. ಆದರೆ ಆ ಕಂಪೆನಿಯವರು ನೀಡದ ಹಿನ್ನೆಲೆಯಲ್ಲಿ ಅವರ ಕೋಟ್ಯಂತರ ಮೊತ್ತದ ಯಂತ್ರೋಪಕರಣಗಳನ್ನು ಡೇವಿಡ್ ತನ್ನ ವಶದಲ್ಲಿ ಇರಿಸಿದ್ದನು. ಇದೇ ಧ್ವೇಷದಲ್ಲಿ ಸುಪಾರಿ ನೀಡಿ ಡೇವಿಡ್ರನ್ನು ಹತ್ಯೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
‘ಹತ್ಯೆಗೆ ಸಂಬಂಧಿಸಿ ಆರೋಪಿ ರಾಜು ಖಾತೆಗೆ 2ಲಕ್ಷ ರೂ. ಜಮೆ ಆಗಿರುವುದು ಕಂಡುಬಂದಿದೆ. ಈ ಕೃತ್ಯಕ್ಕೆ ಸಹಕ ರಿಸಿದ ಸ್ಥಳೀಯರು, ಹಣಕಾಸಿನ ನೆರವನ್ನು ನೀಡಿದ ಮತ್ತು ಆರೋಪಿತರಿಗೆ ಆಶ್ರಯ ನೀಡಿದವರನ್ನು ಶೀಘ್ರ ಪತ್ತೆ ಹಚ್ಚಲಾಗುವುದು. ಕೊಲೆಯ ಸೂತ್ರಧಾರನ ಪತ್ತೆಗೆ ಪೊಲೀಸ್ ತಂಡವೊಂದು ಉತ್ತರ ಭಾರತಕ್ಕೆ ತೆರಳಿದೆ’ ಎಂದು ಎಸ್ಪಿ ತಿಳಿಸಿದರು.
ಆರೋಪಿ ಕಾಲಿಗೆ ಗುಂಡೇಟು: ಎಸ್ಸೈಗೆ ಗಾಯ
ಒತ್ತಿನೆಣೆಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಬಸ್ಸಿನಿಂದ ಇಳಿದು ಪರಾರಿಯಾಗುತ್ತಿದ್ದ ಪ್ರಮುಖ ಆರೋಪಿ ರಾಜು, ಕಾಪು ಪೊಲೀಸ್ ಠಾಣಾ ಎಸ್ಸೈ ತೇಜಸ್ವಿ ಅವರನ್ನು ದೂಡಿ ಹಾಕಿ, ಆತನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದನು ಎನ್ನಲಾಗಿದೆ.
ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ರಾಜು ಕಾಲಿಗೆ ಗುಂಡು ಹಾರಿಸಿದ್ದು, ಇದರಿಂದ ಅಲ್ಲೇ ಬಿದ್ದ ರಾಜು ನನ್ನು ಮತ್ತು ಆತನ ವಶದಲ್ಲಿದ್ದ ಪಿಸ್ತೂಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಬಗ್ಗೆ ರಾಜು ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆ ವೇಳೆ ಕಾಪು ಪೊಲೀಸ್ ಠಾಣಾ ಎಸ್ಸೈ ತೇಜಸ್ವಿ ಅವರಿಗೆ ಗಾಯವಾಗಿದ್ದು, ಉಡುಪಿ ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಅದೇ ರೀತಿ ಗುಂಡೇಟಿನಿಂದ ಗಾಯಗೊಂಡ ಆರೋಪಿ ರಾಜುನನ್ನು ಕೂಡಾ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಭೇಟಿ ನೀಡಿದ್ದಾರೆ.
ಪಕ್ಕ ಪ್ರೊಫೆಶನಲ್ ಕಿಲ್ಲರ್ಸ್!
ರಾಜು ವಿರುದ್ಧ ಉತ್ತರ ಪ್ರದೇಶ, ರಾಜಸ್ಥಾನ್, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಮಹಿಳೆ ಯರ ಮೇಲೆ ಹಲ್ಲೆ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ವಿರುದ್ಧ ದೆಹಲಿ, ಹರಿಯಾಣ, ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಲ್ಲಿ 8 ಪ್ರಕರಣಗಳು ಮತ್ತು ಜಿಯಾವುಲ್ಲ ಅಲಿಯಾಸ್ ದೀಪಕ್ ವಿರುದ್ಧ ವಿವಿಧ ರಾಜ್ಯಗಳಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿದೆ.
ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುವ ರಾಜ್ಯಗಳಿಗೆ ತೆರಳಿ ನೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುವುದು. ಇವರು ಮೂವರು ಪಕ್ಕ ವೃತ್ತಿಪರ ಕ್ರಿಮಿನಲ್ಗಳಾಗಿದ್ದು, ಇವರಲ್ಲಿ ನಾಲ್ಕೈದು ಸಿಮ್ ಕಾರ್ಡ್ ಗಳು ಮತ್ತು ಮೊಬೈಲ್ಗಳಿವೆ. ಅದೇ ರೀತಿ ಇವರಲ್ಲಿ ಹಲವು ಗುರುತಿನ ಚೀಟಿಗಳು ಕೂಡ ಇರುವುದರಿಂದ ಇವರ ಹೆಸರುಗಳಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಹತ್ಯೆಗೆ 2 ತಿಂಗಳಿಂದ ಸಂಚು!
ಕೃತ್ಯಕ್ಕೆ ಎರಡು ತಿಂಗಳ ಹಿಂದೆಯೇ ಸಂಚು ರೂಪಿಸಿ ಸಿದ್ಧತೆ ನಡೆಸ ಲಾಗಿತ್ತು. ಈ ಸಂಬಂಧ ಆರೋಪಿಗಳು ಹಿಂದೆ ಒಂದು ಬಾರಿ ಬಂದು ನೋಡಿ ಹೋಗಿದ್ದರು. ವಾರದ ಹಿಂದೆ ಬಂದು ಉಡುಪಿಯಲ್ಲಿ ತಂಗಿದ್ದ ಆರೋಪಿಗಳಿಗೆ ಸ್ಥಳೀಯರು ಸಹಕಾರ ನೀಡಿರುವುದು ಕಂಡುಬಂದಿದೆ. ಈ ಸಂಬಂಧ ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಲಾ ಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್ ಸ್ಥಳೀಯವಾಗಿದ್ದು, ಇದರ ಮಾಲಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ನಂಬರ್ ಪ್ಲೇಟ್ ನಕಲಿಯಾಗಿದ್ದು, ಸ್ಕೂಲ್ ಬಸ್ಸಿನ ನಂಬರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
‘ನನ್ನ ಪತಿಯ ರಕ್ತ ಚೆಲ್ಲಿದವರ ರಕ್ತವೂ ಚೆಲ್ಲಬೇಕು’ ಡೇವಿಡ್ ಡಿಸೋಜ ಪತ್ನಿ ಪ್ರಿಯಾ ಡೇವಿಡ್ ಹೇಳಿಕೆ
‘ನನ್ನ ಪತಿಗೆ ಉದ್ಯಮದಲ್ಲಿ ಸಾಕಷ್ಟು ಅಪಾಯ ಇತ್ತು. ಅವರಿಗೆ ಹೊರಗಿನಿಂದ ಸಾಕಷ್ಟು ಹಣ ಬರಲು ಬಾಕಿ ಇತ್ತು. ನನ್ನ ಪತಿಯನ್ನು ಕೊಂದವರಿಗೆ ಹಾಗೂ ಅದರ ಹಿಂದೆ ಸಂಚು ರೂಪಿಸಿದವರಿಗೂ ಕಠಿಣ ಶಿಕ್ಷೆಯಾಗಬೇಕು. ಪತಿಯ ರಕ್ತ ಚೆಲ್ಲಿದಂತೆ ಅವರ ರಕ್ತವೂ ಚೆಲ್ಲಬೇಕು’ ಎಂದು ಮೃತ ಡೇವಿಡ್ ಡಿಸೋಜರ ಪತ್ನಿ ಪ್ರಿಯಾ ಡೇವಿಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುದರಂಗಡಿಯ ಪಿಲಾರಿನಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಹೊತ್ತಿಗೆ ಅವರು ಮನೆಯಲ್ಲಿಯೇ ಇದ್ದು ಊಟ ಮಾಡಿ ಮಧ್ಯಾಹ್ನ 2ಗಂಟೆಗೆ ಮುದರಂಗಡಿಯಲ್ಲಿ ರುವ ಮತ್ತೊಂದು ಕಚೇರಿಗೆ ಹೊರಟಿದ್ದರು. ಪ್ರತಿದಿನ 3.30- 4ಗಂಟೆಗೆ ಅವರು ಕಚೇರಿಯಿಂದ ಸೈಟ್ಗೆ ಹೋಗು ತ್ತಾರೆ. ಅಲ್ಲಿಂದ ಸಂಜೆ 6.30ಕ್ಕೆ ಮನೆಗೆ ಮರಳುತ್ತಾರೆ ಎಂದರು.
ನಾನು ಮನೆಯಲ್ಲಿರುವಾಗ ಮಗ ಕರೆ ಮಾಡಿ ದುರ್ಘಟನೆಯ ವಿಚಾರ ತಿಳಿಸಿದ. ನಾನು ಕೂಡಲೇ ಅಲ್ಲಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ವೈದ್ಯರು ದೃಢಪಡಿಸಿದರು. ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದು ನೆಮ್ಮದಿ ತಂದಿದೆ ಎಂದು ಅವರು ಹೇಳಿದರು.
ನನ್ನ ಪತಿ ಉದ್ಯಮಿಯಾಗಿ ರಾಜಕಾರಣಿಯಾಗಿ ಊರಿನ ಅಭಿವೃದ್ಧಿಗೆ ಅಪಾರ ಶ್ರಮಿಸಿದ್ದಾರೆ. ಕುಟುಂಬಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ. ಊರಿನವರಿಗೆ, ಬಡವರಿಗೆ ತುಂಬಾ ನೆರವು ನೀಡುತ್ತಿದ್ದರು ಎಂದು ಅವರು ತಿಳಿಸಿದರು.