ಉಡುಪಿ, ಆ.24: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಜಿಲ್ಲೆಯ ಮೊದಲಿದ್ದ(16.06.26ಕ್ಕೆ ಮೊದಲು) ಒಟ್ಟು 10,63,876 ಮತದಾರರ ಪೈಕಿ 10,00,545 ಮಂದಿ ಸ್ಥಾನ ಉಳಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ವಿವಿಧ ಕಾರಣಗಳಿಗಾಗಿ -ಗೈರು, ಸ್ಥಳಾಂತರ, ಮೃತರು, ನಕಲಿ, ಇತರ (ಎಎಸ್‌ಡಿಡಿಒ)- ಪಟ್ಟಿಯಲ್ಲಿದ್ದ ಒಟ್ಟು 63,331 ಮಂದಿ ಹೆಸರು ಇದರಲ್ಲಿ ಸೇರ್ಪಡೆಗೊಂಡಿಲ್ಲ ಎಂದು ಅವರು ವಿವರಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರ ಪೈಕಿ ಒಟ್ಟು 97,706 ಮಂದಿಗೆ ನೋಟೀಸುಗಳನ್ನು ನೀಡಲಾಗುತ್ತಿದೆ. ಇವರಲ್ಲಿ ಹಿಂದಿನ ಮತದಾರರ ಪಟ್ಟಿಯೊಂದಿಗೆ ಲಿಂಕೇಜ್ ಆಗದಿರುವ - ನೋ ಮ್ಯಾಪಿಂಗ್- 31,903 ಮಂದಿ ಹಾಗೂ ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ) ಅಡಿಯಲ್ಲಿ ಗುರುತಿಸಲಾದ 65,803 ಮಂದಿ ಸೇರಿದ್ದಾರೆ ಎಂದು ಅವರು ವಿವರಿಸಿದರು.

ಚುನಾವಣಾ ಆಯೋಗದಿಂದ ನೋಟೀಸು ಜಾರಿಗೊಳ್ಳಲಿರುವ ಈ ಎಲ್ಲಾ 97,706 ಮಂದಿ ಇಂದಿನಿಂದ ಆ.31ರವರೆಗೆ ಆಯಾ ಬೂತ್‌ಗಳ ಬಿಎಲ್‌ಒಗಳು ಮನೆಗೆ ಬಂದು ನೋಟೀಸು ನೀಡಲಿದ್ದಾರೆ. ಅವರು ಆಯೋಗ ನಿಗದಿಪಡಿಸಿದ ಒಟ್ಟು 11 ದಾಖಲೆಗಳಲ್ಲಿ ಯಾವುದಾದರೂ ಮೂರು ದಾಖಲೆಗಳನ್ನು ವಿಚಾರಣೆ ನಡೆಸುವ ಇಆರ್‌ಒ, ಎಇಆರ್‌ಒಗಳ ಎದುರು ನಿಗದಿ ಪಡಿಸಿದ ದಿನದಂದು ಹಾಜರಾಗಿ ಪ್ರಸ್ತುತ ಪಡಿಸಬೇಕಾಗುತ್ತದೆ ಎಂದು ಸ್ವರೂಪ ಟಿ.ಕೆ. ತಿಳಿಸಿದರು.

ಬಿಎಲ್‌ಒಗಳು ನೀಡುವ ನೋಟೀಸಿನಲ್ಲಿಯೇ ನೀಡಬೇಕಾದ ದಾಖಲೆಗಳ ಕುರಿತು ಮಾಹಿತಿ ಇರುತ್ತದೆ. ಉಡುಪಿ ಜಿಲ್ಲೆಯ ಮಟ್ಟಿಗೆ ತಾರ್ಕಿಕ ವ್ಯತ್ಯಾಸದಲ್ಲಿ ಶೇ.90ರಷ್ಟು ಮಂದಿಯ ಹೆಸರು, ಸ್ಪೆಲ್ಲಿಂಗ್, ಪ್ರಾಯದಲ್ಲಿ ವ್ಯತ್ಯಾಸ ಕಂಡುಬಂದಿರುವುದೇ ನೋಟೀಸು ನೀಡಲು ಕಾರಣವಾಗಿದೆ ಎಂದರು.

ಮನೆ ಮನೆಗೆ ಗಣತಿ ನಮೂನೆಯನ್ನು ತಲುಪಿಸಿದ ಬಳಿಕ ಅವರಿಂದ ಪಡೆದ ಫಾರ್ಮ್‌ಗಳನ್ನು ಡಿಜಿಟಲೈಸ್ ಮಾಡಿ ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಇಂದಿನಿಂದ ಸೆಪ್ಟಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಳಿಕ ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಮತ್ತು ವಿಲೇವಾರಿ ಅಕ್ಟೋಬರ್ 22ರವರೆಗೆ ನಡೆಯಲಿದೆ. ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 63,331ಮಂದಿ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ ಬೈಂದೂರಿನಲ್ಲಿ 14,280, ಕುಂದಾಪುರದಲ್ಲಿ 11,634, ಉಡುಪಿಯಲ್ಲಿ 17,726, ಕಾಪುವಿನಲ್ಲಿ 10,034 ಹಾಗೂ ಕಾರ್ಕಳದಲ್ಲಿ 9,657 ಮಂದಿಯನ್ನು ಗುರುತಿಸಲಾಗಿದೆ. 63,331 ಮಂದಿಯಲ್ಲಿ 4,145 ಮಂದಿ ಗೈರಾಗಿದ್ದರೆ, 29,36ಮಂದಿ ಸ್ಥಳಾಂತರ ಗೊಂಡಿದ್ದಾರೆ. 21,262 ಮಂದಿ ಮೃತರಾಗಿದ್ದರೆ, 8374 ಮಂದಿ ದ್ವಿಪ್ರತಿ ಹೊಂದಿದ್ದರು. ಉಳಿದ 189 ಮಂದಿ ಇತರ ವಿಭಾಗದಲ್ಲಿದ್ದಾರೆ. ಇವರು ಎಸ್‌ಐಆರ್‌ನ್ನು ನಿರಾಕರಿಸಿ ತಮ್ಮ ಮಾಹಿತಿಯನ್ನು ನೀಡದವರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

5914 ಯುವ ಮತದಾರರು: ಇಂದಿನ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 5914 ಮಂದಿ ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ. 2026ರ ಅಕ್ಟೋಬರ್ 1ನ್ನು ಆರ್ಹತಾ ದಿನವಾಗಿ ಪರಿಗಣಿಸಿ ಈ ದಿನಾಂಕಕ್ಕೆ 18 ವರ್ಷ ಪೂರ್ಣಗೊಳ್ಳುವವರನ್ನು ಫಾರ್ಮ್-6ರ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇವರಲ್ಲಿ ಬೈಂದೂರಿ ನಿಂದ 1112, ಕುಂದಾಪುರದಿಂದ 991, ಉಡುಪಿಯಿಂದ 1103, ಕಾಪುವಿನಿಂದ 1272 ಹಾಗೂ ಕಾರ್ಕಳದಿಂದ 1436 ಮಂದಿ ಸೇರ್ಪಡೆಗೊಂಡಿದ್ದಾರೆ.

132 ಹೆಚ್ಚುವರಿ ಮತಗಟ್ಟೆ ಸೇರ್ಪಡೆ: ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 1200ಕ್ಕಿಂತ ಅಧಿಕ ಮತದಾರರಿರುವ ಮತದಾನ ಕೇಂದ್ರಗಳ ಪುನರ್‌ವಿಂಗಡಣೆ ಮಾಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು 132 ಹೊಸ ಮತದಾನ ಕೇಂದ್ರಗಳನ್ನು ಸೃಷ್ಟಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹಿಂದಿದ್ದ 1112 ಮತಗಟ್ಟೆಗಳ ಸಂಖ್ಯೆ ಈಗ 1244ಕ್ಕೇರಿದೆ. ಬೈಂದೂರಿನಲ್ಲಿ 48, ಕುಂದಾಪುರ 16, ಉಡುಪಿ 21, ಕಾಪು 22, ಕಾರ್ಕಳದಲ್ಲಿ 25 ಹೆಚ್ಚುವರಿ ಮತಗಟ್ಟೆಗಳು ಸೇರ್ಪಡೆಗೊಳ್ಳಲಿದೆ ಎಂದು ಡಿಸಿ ತಿಳಿಸಿದರು.

ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಹೆಸರು, ವಯಸ್ಸು, ಲಿಂಗ, ವಿಳಾಸ, ಭಾವಚಿತ್ರ ಹಾಗೂ ಮತದಾನ ಕೇಂದ್ರದ ವಿವರಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು. ಕರಡು ಮತದಾರರ ಪಟ್ಟಿಯು ಸಂಬಂಧಪಟ್ಟ ಬಿಎಲ್‌ಒ, ಇಆರ್‌ಒ ಕಚೇರಿ, ತಾಲೂಕು ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿ ಗಳ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಎಡಿಸಿ ಅಬೀದ್ ಗದ್ಯಾಳ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಆಯೋಗದಿಂದ ನೋಟೀಸು ಪಡೆದಿರುವವರ ವಿಧಾನಸಭಾವಾರು ವಿವರ ಹೀಗಿದೆ.

ಕ್ಷೇತ್ರ                      ನೋ ಮ್ಯಾಪಿಂಗ್         ತಾರ್ಕಿಕ ವ್ಯತ್ಯಾಸ             ಒಟ್ಟು

ಬೈಂದೂರು                  3891                          11275                  15166

ಕುಂದಾಪುರ                  4233                         06945                   11178

ಉಡುಪಿ                        13255                      23499                   36754

ಕಾಪು                            5971                      14850                      20821

ಕಾರ್ಕಳ                         4553                      09234                      13787

ಜಿಲ್ಲೆಯಲ್ಲಿ                     31903                      65803                      97706

ವಿಚಾರಣೆಗೆ ಹೆಚ್ಚುವರಿ ಎಇಆರ್‌ಒಗಳ ನೇಮಕ

ಎನ್ಯುಮರೇಷನ್ ಹಂತದಲ್ಲಿ ಮತದಾರರ ವಿವರಗಳು ಹಿಂದಿನ ಮತದಾರರ ಪಟ್ಟಿಯೊಂದಿಗೆ ಲಿಂಕೇಜ್ ಆಗಿರುವ ಪ್ರಕರಣಗಳು ಹಾಗೂ ಲಿಂಕೇಜ್ ಆದ ಬಳಿಕ ಪರಿಶೀಲನೆ ಸಂದರ್ಭದಲ್ಲಿ ಕಂಡಬರುವ ತಾರ್ಕಿಕ ವ್ಯತ್ಯಾಸಗಳ ಪ್ರಕರಣ ಗಳನ್ನು ಗುರುತಿಸಿ ಸಂಬಂಧಪಟ್ಟ ಇಆರ್‌ಒಗಳು ನಿಯಮಾನುಸಾರ ನೋಟೀಸು ಜಾರಿಗೊಳಿಸುವರು. ಕೆಲವು ಸಂದರ್ಭಗಳಲ್ಲಿ ಇಆರ್‌ಒಗಳು ಸುವೋಮೋಟೊ ಆಗಿಯೂ ನೋಟೀಸು ಜಾರಿಗೊಳಿಸಲು ಅವಕಾಶಗಳಿವೆ. ಆಗ ಮತದಾರರಿಗೆ ತಮ್ಮ ಹಕ್ಕನ್ನು ಪ್ರತಿಪಾದಿಸಲು ಹಾಗೂ ಅತ್ಯ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗು ವುದು ಎಂದು ಜಿಲ್ಲಾಧಿಕಾರಿ ಸ್ವರೂಪ ತಿಳಿಸಿದರು.

ಇದಕ್ಕಾಗಿ ಪರಿಶೀಲನೆ ಮತ್ತು ವಿಚಾರಣೆ ವೇಳೆ ಮತದಾರರಿಗೆ ಅನುಕೂಲವಾಗಲು ಹೆಚ್ಚುವರಿಯಾಗಿ 120 ಮಂದಿ ಎಇಆರ್‌ಒ ಹಾಗೂ ಹೆಚ್ಚುವರಿ ಎಇಆರ್‌ಒಗಳನ್ನು ನೇಮಿಸಲಾಗಿದೆ. ಅವರು ಆಯಾ ಗ್ರಾಪಂ, ನಗರಪ್ರದೇಶ ವಾರ್ಡ್ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಸುವರು ಎಂದೂ ಅವರು ಹೇಳಿದರು.

ಈ ವಿಷಯದಲ್ಲಿ ಮತದಾರರಿಗೆ ಬಿಎಲ್‌ಒಗಳು ಅಗತ್ಯ ಸಹಕಾರ, ಮಾರ್ಗದರ್ಶನ ನೀಡುವರು. ಮತದಾರರು ತಮ್ಮ ವ್ಯಾಪ್ತಿಯ ಬಿಎಲ್‌ಒಗಳು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಮಾನ್ಯತೆ ಪಡೆದ ಎಲ್ಲಾ ರಾಜಕೀಯ ಪಕ್ಷಗಳು ನಿಯೋಜಿಸುವ ಬಿಎಲ್‌ಒಗಳು ಸಹ ಅವರಿಗೆ ಬೇಕಾದ ಮಾರ್ಗದಶನ ನೀಡಬಹುದು.

"ವಿಚಾರಣೆ ವೇಳೆ ಆಯಾ ಮತದಾರ ಖುದ್ದಾಗಿ ಇಆರ್‌ಒ ಮುಂದೆ ಹಾಜರಾಗಿ ದಾಖಲೆ ಮಂಡಿಸಬೇಕು. ಅವರ ಬದಲಿಯಾಗಿ ಬೇರೆಯವರಿಗೆ ವಿಷಯ ಮಂಡಿಸಲು ಅವಕಾಶವಿಲ್ಲ. ಜೊತೆಗೆ ಯಾರನ್ನಾದರೂ ಕರೆತರಲು ಅವಕಾಶವಿದೆ".

-ಸ್ವರೂಪ ಟಿ.ಕೆ., ಜಿಲ್ಲಾಧಿಕಾರಿ ಉಡುಪಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor