×
Ad

ಕಾರ್ಕಳ : ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

Update: 2026-06-23 13:57 IST

ಕಾರ್ಕಳ : ಕಾರ್ಕಳದ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ), ಜೆಸಿಐ ಕಾರ್ಕಳ ಮತ್ತು ಇತರ ದಾನಿಗಳ ನೆರವಿನಿಂದ ಕಾರ್ಕಳ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ 90% ಅಂಕಗಳನ್ನು ಪಡೆದ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷ 25 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿವೇತನಗಳನ್ನು ವಿತರಿಸುವ ಯೋಜನೆ ಇದ್ದು, ಅದರ ಉದ್ಘಾಟನಾ ಕಾರ್ಯಕ್ರಮವು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು, ಶಿಕ್ಷಣವು ಮಾನವನ ಮೂಲಭೂತ ಅವಶ್ಯಕತೆ ಆಗಿದೆ. ಇಂದಿನ ದಿನಗಳಲ್ಲಿ ಶಿಕ್ಷಣರಂಗವು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಸಿಇಟಿ ಮೊದಲಾದ ಪರೀಕ್ಷೆಗಳಲ್ಲಿ ಇಂದು ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದು, ಅವರಿಗೆ ಸಮಾಜದ ನೆರವು ಅಗತ್ಯ ಇದೆ. ಅಮ್ಮನ ನೆರವು ಸಂಸ್ಥೆಯ ಮೂಲಕ ಅವಿನಾಶ್ ಜಿ. ಶೆಟ್ಟಿ ಅವರು ಈ ಸಮಾಜಕ್ಕೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಿದ್ದಾರೆ. ಅವರಿಗೆ ಮತ್ತು ಅವರ ನೆರವಿಗೆ ನಿಂತ ಎಲ್ಲಾ ದಾನಿಗಳನ್ನೂ ನಾನು ಅಭಿನಂದಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳದ ಶಾಸಕರಾದ ವಿ. ಸುನೀಲ್ ಕುಮಾರ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ನೆರವು ಆರೋಗ್ಯಪೂರ್ಣ ಸಮಾಜದ ನಿರ್ಮಾಣವನ್ನು ಮಾಡುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಆರೂವರೆ ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿವೇತನಗಳನ್ನು ಅತಿಥಿಗಳು ಹಸ್ತಾಂತರ ಮಾಡಿದರು.

ತುಳು ಸಿನಿಮಾದ ಪ್ರಸಿದ್ಧ ನಟರಾದ ಅರ್ಜುನ್ ಕಾಪಿಕಾಡ್ ಅವರು ಶುಭಾಶಂಸನೆ ಮಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಬ್ಬ ಕಲಾವಿದ ಇರುತ್ತಾನೆ. ಕಲೆಯನ್ನು ನಂಬಿ ಬದುಕುವವರನ್ನು ಕಲೆಯು ಎಂದಿಗೂ ಕೈಬಿಡುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಬೈಲೂರು ಸರಕಾರಿ ಕಾಲೇಜಿನ ಟಾಪರ್ ವಿದ್ಯಾರ್ಥಿಗಳಿಗೆ ನೀಡಲಾಗುವ ದೇಶಾ ಫೌಂಡೇಶನ್ ಸಂಸ್ಥೆಯ 1,05,000 ರೂ. ಮೊತ್ತದ ಆರು ವಿದ್ಯಾರ್ಥಿ ವೇತನಗಳನ್ನು ಡಾ. ಮೋಹನ್ ಆಳ್ವ ಮತ್ತು ವಿ. ಸುನೀಲ್ ಕುಮಾರ್ ಅವರು ಹಸ್ತಾಂತರ ಮಾಡಿ ಅಭಿನಂದಿಸಿದರು. ಪ್ರಾಂಶುಪಾಲರು ದೇಶಾ ಟ್ರಸ್ಟ್‌ನ ನೆರವನ್ನು ಸ್ಮರಿಸಿದರು.

ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸ್ಥಾಪಕರಲ್ಲಿ ಒಬ್ಬರಾದ ಡಾ. ಗಣನಾಥ ಶೆಟ್ಟಿ, ತುಳು ಸಿನೆಮಾ ವಿತರಕರಾದ ಸಚಿನ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಂತೋಷ್ ವಾಗ್ಲೆ, ಸಮಾಜ ಸೇವಕರಾದ ಸುಮಿತ್ ಬೈಲೂರು, ಕಾಲೇಜಿನ ಪ್ರಾಚಾರ್ಯರಾದ ಸೀತಾರಾಮ, ಉಪಪ್ರಾಚಾರ್ಯರಾದ ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷರಾದ ಸ್ಟೀವನ್ ಡಿಸೋಜಾ ಕಾರ್ಯಕ್ರಮದ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಅಮ್ಮನ ನೆರವು ಫೌಂಡೇಶನ್ ಇದರ ಪ್ರವರ್ತಕರಾದ ಅವಿನಾಶ್ ಜಿ. ಶೆಟ್ಟಿ ಅವರು ಎಲ್ಲರ ನೆರವನ್ನು ಸ್ಮರಿಸಿದರು. ಫೌಂಡೇಶನ್ ಮಾರ್ಗದರ್ಶಕರಾದ ವಸಂತ್ ಎಂ. ಅವರು ಸ್ವಾಗತಿಸಿದರು. ಶಿಕ್ಷಕ ರಾಜೇಂದ್ರ ಭಟ್ ಕೆ. ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News