ಉಡುಪಿ | ರಾ.ಹೆದ್ದಾರಿ-66 ಮೇಲ್ದರ್ಜೆಗೆ: ಯೋಜನಾ ವರದಿ ತಯಾರಿಗೆ ಹೆ. ಪ್ರಾಧಿಕಾರದಿಂದ ಎಜೆನ್ಸಿಗಳ ನಿಯುಕ್ತಿ
ಸಾಂದರ್ಭಿಕ ಚಿತ್ರ PC | GROK
ಉಡುಪಿ, ನ.29: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ನಿರಂತರ ಅಪಘಾತಗಳು, ಬಾಕಿ ಉಳಿದಿರುವ ಸರ್ವಿಸ್ ರಸ್ತೆಗಳ ನಿರ್ಮಾಣ, ಪ್ರಮುಖವಾಗಿ ಕುಂದಾಪುರದಿಂದ- ಹೆಜಮಾಡಿ -ಸುರತ್ಕಲ್ ವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಯೋಜನಾ ವರದಿಯ (ಡಿಪಿಆರ್) ತಯಾರಿಗೆ ಏಜೆನ್ಸಿಯೊಂದನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಿಸಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈ ಸಂಬಂಧ ನ.25ರಂದು ಪತ್ರವೊಂದನ್ನು ಬರೆದಿರುವ ಎನ್ಎಚ್ಎನ ಪ್ರಾದೇಶಿಕ ಅಧಿಕಾರಿ ವಿ.ಪಿ.ಬ್ರಾಹ್ಮಣಕರ್ ಈ ವಿಷಯ ತಿಳಿಸಿದ್ದಾರೆ.
ಸಂಸದ ಕೋಟ ಅವರು ಪತ್ರ ಬರೆದು ಆಗ್ರಹಿಸಿರುವಂತೆ ಕುಂದಾಪುರ ದಿಂದ ಸುರತ್ಕಲ್ ನಡುವೆ ಬಾಕಿ ಉಳಿದಿರುವ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ರಾ.ಹೆ.-66ರಲ್ಲಿ ಬರುವ ಕೋಟ ಜಂಕ್ಷನ್, ಬ್ರಹ್ಮಾವರ ಪೇಟೆ, ಪಡುಬಿದ್ರಿ ಜಂಕ್ಷನ್ ಹಾಗೂ ಮೂಲ್ಕಿ ನಗರಗಳಲ್ಲಿ ದೀರ್ಘಾವಧಿ ಅಭಿವೃದ್ಧಿಗಾಗಿ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಮಾರ್ಕ್ ಸಿವಿಲ್ ಇಂಜಿನಿಯರಿಂಗ್ ಸರ್ವಿಸಸ್ ಲಿ.ನ ಸಹಯೋಗದೊಂದಿಗೆ ಡಿಪಿಆರ್ ಸಲಹಾ ಸಂಸ್ಥೆ ಧ್ರುವ ಕನ್ಸಲ್ಟೆನ್ಸಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ನಿಗದಿಪಡಿಸಿದ ಏಜೆನ್ಸಿಗಳು ಸುರತ್ಕಲ್ ನಿಂದ ಕುಂದಾಪುರವರೆಗಿನ ಎನ್.ಹೆಚ್ 66ರ ಅಭಿವೃದ್ಧಿಗಾಗಿ ಯೋಜನಾ ವರದಿಯನ್ನು ಸಿದ್ಧಪಡಿಸಲಿದೆ ಎಂದು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.