ಭಟ್ಕಳ: ಶ್ರೀವಲಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಆಚರಣೆ
ಭಟ್ಕಳ: ಪರಿಸರ ಜಾಗೃತಿ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಭಟ್ಕಳದ ರೋಟರಿ ಕ್ಲಬ್ ಹಾಗೂ ಇಂಟರ್ಯಾಕ್ಟ್ ಕ್ಲಬ್ನ ಜಂಟಿ ಆಶ್ರಯದಲ್ಲಿ ಇಲ್ಲಿನ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯ ಆವರಣದಲ್ಲಿ "ವನಮಹೋತ್ಸವ" (ಸಸಿ ನೆಡುವ ಕಾರ್ಯಕ್ರಮ) ನಡೆಯಿತು.
ಶಾಲಾ ಆವರಣದಲ್ಲಿ ವಿವಿಧ ಜಾತಿಯ ಉಪಯುಕ್ತ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಯುವ ಪೀಳಿಗೆಯ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀವಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮಮತಾ ಎಂ. ಭಟ್ಕಳ, ಇಂಟರ್ಯಾಕ್ಟ್ ಸಂಯೋಜಕರಾದ ಸಂಜಯ ಗುಡಿಗಾರ, ಶಾಲಾ ಶಿಕ್ಷಕ ವೃಂದ ಹಾಗೂ ಇಂಟರ್ಯಾಕ್ಟ್ ಕ್ಲಬ್ನ ವಿದ್ಯಾರ್ಥಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಭಟ್ಕಳ ರೋಟರಿ ಕ್ಲಬ್ ಪರವಾಗಿ ನೂತನ ಅಧ್ಯಕ್ಷರಾದ ರೋ. ಶ್ರೀನಾಥ್ ಪೈ, ಕಾರ್ಯದರ್ಶಿ ರೋ. ಅನಮ್ ಅಲಾ ಹಾಗೂ ಇತರ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.