×
Ad

ವಿಮಾನ ಇಂಧನ ದರ ಸ್ಥಿರೀಕರಣ: ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ?

ಈ ಯೋಜನೆಯಿಂದ ವಿಮಾನ ಪ್ರಯಾಣ ದರ ನಿಯಂತ್ರಣಕ್ಕೆ ಬರಲಿದೆಯೇ?

Update: 2026-06-05 19:23 IST

ಸಾಂದರ್ಭಿಕ ಚಿತ್ರ | Photo Credit : magnific

ಪಶ್ಚಿಮ ಏಷ್ಯಾದ ಇಂಧನ ಬಿಕ್ಕಟ್ಟಿನ ಹೊಡೆತದಿಂದ ದೇಶದ ವಿಮಾನಯಾನ ಕಂಪನಿಗಳಿಗೆ ರಕ್ಷಣೆ ನೀಡಲು ರೂ 10 ಸಾವಿರ ಕೋಟಿ ಮೊತ್ತದ ವಿಮಾನ ಇಂಧನ (ATF) ಸ್ಥಿರೀಕರಣ ನಿಧಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು 'ಬೆಲೆ ಸ್ಥಿರೀಕರಣ ನಿಧಿ' ಯೋಜನೆಯಡಿ, ಹೊಸದಿಲ್ಲಿಯಲ್ಲಿ ವಿಮಾನ ಇಂಧನ ದರವನ್ನು ಪ್ರತಿ ಲೀಟರ್‌ಗೆ ರೂ115 ಅಥವಾ ಪ್ರತಿ ಕಿಲೋ ಲೀಟರ್‌ಗೆ ರೂ1.15 ಲಕ್ಷ ಎಂದು ನಿಗದಿಪಡಿಸಿವೆ.

ಪ್ರಸ್ತುತ ಹೊಸದಿಲ್ಲಿಯಲ್ಲಿರುವ ಇಂಧನ ದರಕ್ಕೆ ಹೋಲಿಸಿದರೆ ಈ ನಿಗದಿತ ಬೆಲೆಯು ಲೀಟರ್‌ಗೆ ಸುಮಾರು ರೂ 10ರಷ್ಟು ಹೆಚ್ಚಾಗಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳು ತೀವ್ರ ಏರಿಳಿತ ಕಾಣುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾದರೆ ಈ ವ್ಯವಸ್ಥೆಯು ವಿಮಾನಯಾನ ಸಂಸ್ಥೆಗಳಿಗೆ ರಕ್ಷಣಾ ಕವಚವಾಗಲಿದೆ.

ಈ ನೂತನ ಯೋಜನೆ ಏನು? ಇದರಿಂದ ವಿಮಾನ ಪ್ರಯಾಣ ದರಗಳು ಅಗ್ಗವಾಗಲಿವೆಯೇ? ಇಂಧನ ದರದ ಆಘಾತದಿಂದ ಕಂಗೆಟ್ಟಿರುವ ಭಾರತೀಯ ವಿಮಾನಯಾನ ಸಂಸ್ಥೆಗಳು ಮತ್ತು ತೈಲ ಕಂಪನಿಗಳಿಗೆ ಅತ್ಯಂತ ನಿರ್ಣಾಯಕ ಸಮಯದಲ್ಲಿ ಈ ಯೋಜನೆ ಹೇಗೆ ನೆರವಾಗಲಿದೆ? ಎಂಬುದನ್ನು ನೋಡೋಣ

ಏನಿದು ವಿಮಾನ ಇಂಧನ ಯೋಜನೆ?

ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ಈ ಯೋಜನೆಯಡಿ, ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಭಾಗವಹಿಸುವ ಭಾರತೀಯ ವಿಮಾನಯಾನ ಸಂಸ್ಥೆಗಳ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳಿಗೆ ನಿಗದಿಪಡಿಸಲಾದ ಸ್ಥಿರ ದರದಲ್ಲೇ ಇಂಧನವನ್ನು ಪೂರೈಸಲಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳು ಎಷ್ಟೇ ಏರಿಳಿತ ಕಂಡರೂ ಈ ನಿಗದಿತ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸ್ಥಿರ ದರದಲ್ಲಿ ಇಂಧನ ಮಾರಾಟ ಮಾಡುವುದರಿಂದ ತೈಲ ಕಂಪನಿಗಳಿಗೆ ಆಗುವ ನಷ್ಟವನ್ನು 'ಬೆಲೆ ಸ್ಥಿರೀಕರಣ ನಿಧಿ'ಯ ಮೂಲಕ ಭರ್ತಿ ಮಾಡಿಕೊಡಲಾಗುತ್ತದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಕುಸಿದಾಗ ಸಿಗುವ ಲಾಭವನ್ನು, ಈ ಹಿಂದೆ ನೀಡಲಾಗಿದ್ದ ಆರ್ಥಿಕ ನೆರವನ್ನು ಸರಿದೂಗಿಸಲು ಬಳಸಲಾಗುತ್ತದೆ ಮತ್ತು ಆ ಹಣವನ್ನು ಮರಳಿ ಭಾರತದ ಸಂಚಿತ ನಿಧಿಗೆ ಜಮಾ ಮಾಡಲಾಗುತ್ತದೆ.

ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶಕರಾದ ರೋಹಿತ್ ರಾಜ್ ಅವರ ಪ್ರಕಾರ, ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಇಂಧನದ ಸ್ಥಿರ ದರ ಪ್ರತಿ ಲೀಟರ್‌ಗೆ 114.50 ರೂಪಾಯಿ ಆಗಿದ್ದರೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಇದು ಪ್ರತಿ ಲೀಟರ್‌ಗೆ ಸುಮಾರು 139 ರೂಪಾಯಿ ಇರಲಿದೆ. ವಿವಿಧ ರಾಜ್ಯಗಳು ವಿಧಿಸುವ ತೆರಿಗೆಗಳ ಪ್ರಮಾಣದಲ್ಲಿ ವ್ಯತ್ಯಾಸವಿರುವುದರಿಂದ, ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಇಂಧನ ದರಗಳು ಭಿನ್ನವಾಗಿರುತ್ತವೆ.

ಇಂಧನ ದರ ಏರಿಕೆಯ ಒತ್ತಡದಿಂದಾಗಿ ಗಗನಕ್ಕೇರುತ್ತಿರುವ ವಿಮಾನ ಪ್ರಯಾಣ ದರವನ್ನು ನಿಯಂತ್ರಿಸಲು ಈ ಕ್ರಮ ನೆರವಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ. “ಪ್ರಯಾಣಿಕರ ದೃಷ್ಟಿಯಿಂದ ಈ ನಿರ್ಧಾರದ ಅತ್ಯಂತ ಪ್ರಮುಖ ಪ್ರಯೋಜನವೆಂದರೆ, ಇಂಧನ ಬೆಲೆಗಳ ದಿಢೀರ್ ಏರಿಕೆಯಿಂದಾಗಿ ವಿಮಾನ ಟಿಕೆಟ್ ದರಗಳಲ್ಲಿ ಆಗುತ್ತಿದ್ದ ಹಠಾತ್ ಹೆಚ್ಚಳವನ್ನು ತಡೆಯಲು ಇದು ಸಹಾಯ ಮಾಡುತ್ತದೆ. ವಿಮಾನಯಾನ ಸಂಸ್ಥೆಗಳು ತೀವ್ರ ಇಂಧನ ಬೆಲೆ ಏರಿಳಿತದ ಹೊಡೆತಕ್ಕೆ ಸಿಲುಕುವುದನ್ನು ತಪ್ಪಿಸುವ ಮೂಲಕ, ಆ ಹೊರೆಯನ್ನು ಪ್ರಯಾಣಿಕರ ಮೇಲೆ ಹೇರದಂತೆ ತಡೆಯುವುದು ಮತ್ತು ದರಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ” ಎಂದು ರೋಹಿತ್ ರಾಜ್ ತಿಳಿಸಿದ್ದಾರೆ.

×
Ad

ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ದೇಶವು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಮಾನ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗಿವೆ.

ಇದರಿಂದಾಗಿ ತೈಲ ಮಾರಾಟ ಕಂಪನಿಗಳು ದೇಶೀಯ ವಿಮಾನಗಳಿಗೆ ನಷ್ಟದಲ್ಲೇ ಇಂಧನ ಪೂರೈಸುತ್ತಿದ್ದು, ಇದು ಅವರ ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರೊಂದಿಗೆ ಗ್ರಾಹಕರಿಗೆ ಮಾರಾಟ ಮಾಡುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಮೇಲೂ ಈ ಕಂಪನಿಗಳು ನಷ್ಟವನ್ನು ಭರಿಸುತ್ತಿವೆ.

ಇತ್ತ ಭಾರತೀಯ ವಿಮಾನಯಾನ ಸಂಸ್ಥೆಗಳು ಕೂಡ ತೀವ್ರ ಸಂಕಷ್ಟ ಎದುರಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳಿಗೆ ಮಾರುಕಟ್ಟೆ ಆಧಾರಿತ ಪೂರ್ಣ ಪ್ರಮಾಣದ ಬೆಲೆಯನ್ನು ಪಾವತಿಸಬೇಕಿರುವುದರಿಂದ ಅವುಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರಗಳು ತೀವ್ರ ಏರಿಳಿತ ಕಾಣುತ್ತಿರುವ ಈ ನಿರ್ಣಾಯಕ ಸಂದರ್ಭದಲ್ಲಿ, ಗರಿಷ್ಠ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿರಲಿರುವ ಈ ಹೊಸ ವ್ಯವಸ್ಥೆಯು ತೈಲ ಕಂಪನಿಗಳು ಮತ್ತು ಭಾರತೀಯ ವಿಮಾನಯಾನ ಸಂಸ್ಥೆಗಳೆರಡರ ಸಂಕಷ್ಟವನ್ನೂ ತಗ್ಗಿಸಲಿದೆ ಎಂದು ಸರ್ಕಾರ ಆಶಿಸಿದೆ.

ಇದು ಕೇವಲ ತಾತ್ಕಾಲಿಕ ಮತ್ತು ಒಂದು ಬಾರಿಯ ಸ್ಥಿರ ವ್ಯವಸ್ಥೆಯಾಗಿದ್ದು, ಭವಿಷ್ಯದಲ್ಲಿ ಈ ಮಾನದಂಡವನ್ನು ಬದಲಾಯಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ರೋಹಿತ್ ರಾಜ್ ಸ್ಪಷ್ಟಪಡಿಸಿದ್ದಾರೆ. “ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಸ್ಥಿರಗೊಂಡ ತಕ್ಷಣ, ತೈಲ ಕಂಪನಿಗಳು ಆ ಹಣವನ್ನು ಮರಳಿ ಭಾರತದ ಸಂಚಿತ ನಿಧಿಗೆ ಪಾವತಿಸಲಿವೆ. ಒಮ್ಮೆ ಲೆಕ್ಕದ ಹೊಂದಾಣಿಕೆ ಪೂರ್ಣಗೊಂಡೊಡನೆ ಈ ಇಡೀ ಯೋಜನೆ ಕೊನೆಗೊಳ್ಳುತ್ತದೆ. ಈ ಯೋಜನೆ ಗರಿಷ್ಠ ಮೂರು ವರ್ಷಗಳ ಅವಧಿಗೆ ಅಥವಾ ಲೆಕ್ಕದ ಹೊಂದಾಣಿಕೆ ಮುಗಿಯುವವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರಲಿದೆ” ಎಂದು ಹೇಳಿದ್ದಾರೆ.

ಇದು ಸ್ವಯಂಪ್ರೇರಿತ ಸೌಲಭ್ಯವಾಗಿದ್ದು, ಕೇವಲ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮಾತ್ರ ಲಭ್ಯವಿರುತ್ತದೆ. ವಿದೇಶಿ ಸಂಸ್ಥೆಗಳಿಗೆ ಇದು ಅನ್ವಯಿಸುವುದಿಲ್ಲ. ವಿಮಾನಯಾನ ಸಂಸ್ಥೆಗಳು ಮತ್ತು ತೈಲ ಕಂಪನಿಗಳ ನಡುವಿನ ಒಪ್ಪಂದದ ಮೂಲಕ ಇದನ್ನು ಜಾರಿಗೊಳಿಸಲಾಗುವುದು. ಈ ಒಪ್ಪಂದದ ಅನ್ವಯ, ವಿಮಾನಯಾನ ಸಂಸ್ಥೆಗಳು ಗರಿಷ್ಠ ಮೂರು ವರ್ಷಗಳ ಅವಧಿಗೆ ಕಡ್ಡಾಯವಾಗಿ ಈ ತೈಲ ಕಂಪನಿಗಳಿಂದಲೇ ವಿಮಾನ ಇಂಧನವನ್ನು ಖರೀದಿಸಬೇಕಾಗುತ್ತದೆ.

ಯೋಜನೆಯ ಅನುಷ್ಠಾನದ ಕಾಲಮಿತಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ರಾಜ್, ಪ್ರಸ್ತುತ ಹಂತದಲ್ಲಿ ನಿಖರವಾದ ದಿನಾಂಕವನ್ನು ನೀಡಲು ಸಾಧ್ಯವಿಲ್ಲದಿದ್ದರೂ, ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ತಿಳಿಸಿದರು. ಇದರ ಕಾರ್ಯವಿಧಾನಗಳ ಕುರಿತು ಸದ್ಯ ಕೆಲಸ ನಡೆಯುತ್ತಿದ್ದು, ಈಗಾಗಲೇ ವಿಮಾನಯಾನ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಇದೊಂದು ಐಚ್ಛಿಕ ವ್ಯವಸ್ಥೆಯಾಗಿದ್ದು, ಕಡ್ಡಾಯವಲ್ಲದ ಕಾರಣ, ಈ ಯೋಜನೆಯ ಪ್ರಯೋಜನ ಪಡೆಯಲು ಆಸಕ್ತಿ ಇರುವ ಸಂಸ್ಥೆಗಳು ತಮ್ಮ ಒಪ್ಪಿಗೆಯನ್ನು ಸೂಚಿಸಬೇಕಾಗುತ್ತದೆ ಎಂದು ಹೇಳಿರುವುದಾಗಿ ‌ʼದಿ ಇಂಡಿಯನ್ ಎಕ್ಸ್ ಪ್ರೆಸ್ʼ ವರದಿ ಉಲ್ಲೇಖಿಸಿದೆ.

►ಈ ಸ್ಥಿರ ಬೆಲೆಯ ಲೆಕ್ಕಾಚಾರ ಹೇಗೆ ಕೆಲಸ ಮಾಡುತ್ತದೆ?

ಸಾಮಾನ್ಯವಾಗಿ, ಭಾರತೀಯ ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚದಲ್ಲಿ ವಿಮಾನ ಇಂಧನ ಶೇಕಡಾ 40 ರಷ್ಟು ಪಾಲನ್ನು ಹೊಂದಿರುತ್ತದೆ. ಆದರೆ ಇತ್ತೀಚಿನ ಬೆಲೆ ಏರಿಕೆಯಿಂದಾಗಿ ಇದು ಶೇಕಡಾ 55 ರಿಂದ 60 ರಷ್ಟಕ್ಕೆ ಜಿಗಿದಿದೆ ಎಂದು ಭಾರತೀಯ ವಿಮಾನಯಾನ ಸಂಸ್ಥೆಗಳ ಒಕ್ಕೂಟ ತಿಳಿಸಿದೆ. ಇಂಧನ ದರ ಹೆಚ್ಚಳದ ಬೆನ್ನಲ್ಲೇ ಬಹುತೇಕ ಪ್ರಮುಖ ವಿಮಾನಯಾನ ಸಂಸ್ಥೆಗಳು ಇಂಧನ ಸರ್ಚಾರ್ಜ್ ಅನ್ನು ಹೆಚ್ಚಿಸಿದ್ದವು. ಅದರಲ್ಲೂ ವಿಶೇಷವಾಗಿ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ ಹೊರೆಯನ್ನು ಜಾಸ್ತಿ ಮಾಡಲಾಗಿತ್ತು. ಈ ಸರ್ಚಾರ್ಜ್ ಹೆಚ್ಚಳವು ಇಂಧನ ದರ ಏರಿಕೆಯಿಂದ ಉಂಟಾದ ನಷ್ಟದ ಕೇವಲ ಒಂದು ಭಾಗವನ್ನು ಮಾತ್ರ ಸರಿದೂಗಿಸುತ್ತದೆ ಎಂದು ಸಂಸ್ಥೆಗಳು ವಾದಿಸಿದ್ದವು. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಮಾನ ಇಂಧನ ದರವು ಮಾರ್ಚ್ ತಿಂಗಳಲ್ಲಿದ್ದ ಪ್ರತಿ ಲೀಟರ್‌ಗೆ 60.50 ರೂಪಾಯಿಯಿಂದ ಮೇ ತಿಂಗಳ ವೇಳೆಗೆ 142 ರೂಪಾಯಿಗೆ ತಲುಪಿತ್ತು. ಅಂದರೆ ಕೇವಲ ಎರಡು ತಿಂಗಳಲ್ಲಿ ಶೇಕಡಾ 135 ರಷ್ಟು ಭಾರೀ ಏರಿಕೆ ಕಂಡಿತ್ತು ಎಂದು ಸರ್ಕಾರ ಹೇಳಿದೆ.

ರೋಹಿತ್ ರಾಜ್ ಅವರ ಪ್ರಕಾರ, ಮಾರ್ಚ್ 1 ರಂದು ಯಾವುದೇ ಸರ್ಕಾರಿ ತೆರಿಗೆಗಳು ಮತ್ತು ಇತರ ಶುಲ್ಕಗಳು ಒಳಗೊಳ್ಳದ ಮುನ್ನ ವಿಮಾನ ಇಂಧನದ ಮೂಲ ಬೆಲೆ ಪ್ರತಿ ಲೀಟರ್‌ಗೆ 60.50 ರೂಪಾಯಿ ಆಗಿತ್ತು. ಇದು ಮುಂದಿನ ವಾರಗಳಲ್ಲಿ ಪ್ರತಿ ಲೀಟರ್‌ಗೆ ಗರಿಷ್ಠ 142 ರೂಪಾಯಿವರೆಗೂ ತಲುಪಿತ್ತು.

ಆದರೆ, ಎಪ್ರಿಲ್ 1 ರಂದು ಪ್ರಕಟಿಸಲಾದ ಮಾಸಿಕ ಬೆಲೆ ಪರಿಷ್ಕರಣೆಯಲ್ಲಿ, ತೈಲ ಕಂಪನಿಗಳು ದೇಶೀಯ ವಿಮಾನಗಳ ಇಂಧನ ದರವನ್ನು ಕೇವಲ ಶೇಕಡಾ 25 ರಷ್ಟು ಮಾತ್ರ ಹೆಚ್ಚಿಸಿದ್ದವು. ವಾಸ್ತವವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳಿಗೆ ಹೋಲಿಸಿದರೆ ಈ ಬೆಲೆ ದುಪ್ಪಟ್ಟಾಗಬೇಕಿತ್ತು. ಆದರೆ, ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಇಂಧನ ದರದಲ್ಲಿ ಮಾತ್ರ ಮಾರುಕಟ್ಟೆಗೆ ಅನುಗುಣವಾಗಿ ಪೂರ್ಣ ಪ್ರಮಾಣದ ಬೆಲೆ ಏರಿಕೆಯನ್ನು ಜಾರಿಗೊಳಿಸಲಾಗಿತ್ತು.

ಮಾರ್ಚ್ ತಿಂಗಳ ಮೂಲ ಬೆಲೆಯಾದ 60.50 ರೂಪಾಯಿಗೆ ಶೇಕಡಾ 25 ರಷ್ಟು ಹೆಚ್ಚಳವನ್ನು ಅನ್ವಯಿಸಿದರೆ, ಅದು 75.62 ರೂಪಾಯಿ ಆಗುತ್ತದೆ. ಇದಕ್ಕೆ ದೆಹಲಿಯ ಅಬಕಾರಿ ಸುಂಕ ಮತ್ತು ವ್ಯಾಟ್ ತೆರಿಗೆಗಳನ್ನು ಸೇರಿಸಿದಾಗ ಮಾರಾಟದ ಬೆಲೆ ಸುಮಾರು 104 ರೂಪಾಯಿ ಆಗಿತ್ತು. ಸರ್ಕಾರದ ಗರಿಷ್ಠ ಮಿತಿ ನಿಯಮದಿಂದಾಗಿ ಈ ಬೆಲೆ ಸಾಧ್ಯವಾಗಿತ್ತು. ಆದರೆ ಈಗಿನ ಹೊಸ ವ್ಯವಸ್ಥೆಯಡಿ… ನಾವು ಸಂಪೂರ್ಣವಾಗಿ ಸ್ಥಿರ ಬೆಲೆ ಕಾರ್ಯವಿಧಾನದ ಕಡೆಗೆ ಹೆಜ್ಜೆ ಇಡುತ್ತಿದ್ದೇವೆ” ಎಂದು ರಾಜ್ ಹೇಳಿದ್ದಾರೆ.

ವ್ಯಾಟ್, ಕೇಂದ್ರ ಅಬಕಾರಿ ಸುಂಕ, ವಿಮಾನ ನಿಲ್ದಾಣ ಶುಲ್ಕಗಳು ಹಾಗೂ ಸರಕು ಸಾಗಣೆ, ವಿಮೆ ಮತ್ತು ತೈಲ ಕಂಪನಿಗಳ ಲಾಭದ ನಿಕಟ ಬಿಂದುಗಳಂತಹ ಸ್ಥಿರ ವ್ಯತ್ಯಾಸಗಳನ್ನು ಹೊರತುಪಡಿಸಿ, ಮೂಲ ಬೆಲೆಯ ಮಟ್ಟದಲ್ಲೇ ಈ ಸ್ಥಿರ ದರವನ್ನು ನಿಗದಿಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅದರಂತೆ, ದೇಶೀಯ ವಿಮಾನ ಕಾರ್ಯಾಚರಣೆಗಾಗಿ ಈ ಮೂಲ ಬೆಲೆಯನ್ನು ಪ್ರತಿ ಲೀಟರ್‌ಗೆ 86.32 ರೂಪಾಯಿ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗಾಗಿ ಪ್ರತಿ ಲೀಟರ್‌ಗೆ 104.49 ರೂಪಾಯಿ ಎಂದು ನಿಗದಿಪಡಿಸಲಾಗಿದೆ.

ನಾವು ದೇಶೀಯ ವಿಮಾನ ಕಾರ್ಯಾಚರಣೆಗಾಗಿ ದೆಹಲಿಯನ್ನು ಉದಾಹರಣೆಯಾಗಿ ಇಟ್ಟುಕೊಂಡರೆ, ಮೂಲ ಬೆಲೆಗೆ ವಿಮಾನ ನಿಲ್ದಾಣ ಶುಲ್ಕಗಳು ಮತ್ತು ಸ್ಥಿರ ವ್ಯತ್ಯಾಸಗಳನ್ನು ಸೇರಿಸಿದಾಗ ಅದು 96.83 ರೂಪಾಯಿ ಆಗುತ್ತದೆ. ಇದರ ಮೇಲಿಂದ ವ್ಯಾಟ್ ಮತ್ತು ಕೇಂದ್ರ ಅಬಕಾರಿ ಸುಂಕವನ್ನು ಸೇರಿಸಿದಾಗ ಅಂತಿಮವಾಗಿ 115 ರೂಪಾಯಿ ಆಗುತ್ತದೆ. ಅದೇ ರೀತಿ, ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಾಗಿ ಭಾರತದಾದ್ಯಂತ ನಿಗದಿಯಾಗಿರುವ ಮೂಲ ಬೆಲೆ 104.49 ರೂಪಾಯಿ. ಇದಕ್ಕೆ ವಿಮಾನ ನಿಲ್ದಾಣ ಶುಲ್ಕ ಹಾಗೂ ಸ್ಥಿರ ವ್ಯತ್ಯಾಸಗಳನ್ನು ಸೇರಿಸಿದಾಗ ಅದು ಕೂಡ 115 ರೂಪಾಯಿಗೆ ಬಂದು ತಲುಪುತ್ತದೆ. ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ಕಾರ್ಯಾಚರಣೆಗಾಗಿ ಇಂಧನ ಖರೀದಿಸುವಾಗ ಯಾವುದೇ ವ್ಯಾಟ್ ಅಥವಾ ಕೇಂದ್ರ ಅಬಕಾರಿ ಸುಂಕ ಅನ್ವಯಿಸುವುದಿಲ್ಲ. ಹಾಗಾಗಿ, ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳೆರಡಕ್ಕೂ ಇಂಧನದ ಸ್ಥಿರ ಮಾರಾಟ ಬೆಲೆ ಪ್ರತಿ ಲೀಟರ್‌ಗೆ 115 ರೂಪಾಯಿ ಆಗಿರುತ್ತದೆ” ಎಂದಿದ್ದಾರೆ ರಾಜ್.

ಜೂನ್ 1 (ಸೋಮವಾರ) ನಡೆದ ವಿಮಾನ ಇಂಧನ ದರಗಳ ಮಾಸಿಕ ಪರಿಷ್ಕರಣೆಯಲ್ಲಿ, ತೈಲ ಕಂಪನಿಗಳು ಸತತ ಎರಡನೇ ತಿಂಗಳೂ ನಿಗದಿತ ದೇಶೀಯ ವಿಮಾನಗಳ ಇಂಧನ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿವೆ. ಇದರ ಜೊತೆಗೆ, ಅಂತಾರಾಷ್ಟ್ರೀಯ ವಿಮಾನಗಳ ಇಂಧನ ದರದಲ್ಲಿ ಶೇಕಡಾ 27 ರಷ್ಟು ಭಾರೀ ಕಡಿತ ಮಾಡುವ ಮೂಲಕ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮತ್ತೊಂದು ನಿರಾಳತೆ ನೀಡಲಾಗಿದೆ. ಈ ಕಡಿತದ ಬಳಿಕ, ಅಂತಾರಾಷ್ಟ್ರೀಯ ವಿಮಾನಗಳ ಇಂಧನ ದರವು ದೇಶೀಯ ವಿಮಾನಗಳ ಇಂಧನ ದರದ ಮಟ್ಟಕ್ಕೆ ಇಳಿಕೆಯಾಗಿದೆ.

►ಇಂಧನ ದರ ಏರಿಕೆ: ವಿಮಾನಯಾನ ಸಂಸ್ಥೆಗಳು ಮತ್ತು ತೈಲ ಕಂಪನಿಗಳಿಗೆ ಭಾರಿ ಪೆಟ್ಟು

ಕಳೆದ ವರ್ಷ ಎಪ್ರಿಲ್ ಅಂತ್ಯದಿಂದಲೇ ಪಾಕಿಸ್ತಾನವು ತನ್ನ ವೈಮಾನಿಕ ವಲಯವನ್ನು ಮುಚ್ಚಿರುವುದರಿಂದ ಭಾರತೀಯ ವಿಮಾನಯಾನ ಸಂಸ್ಥೆಗಳ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಈಗಾಗಲೇ ತೀವ್ರ ಒತ್ತಡದಲ್ಲಿದ್ದವು. ಈಗ ಇದರ ಜೊತೆಗೆ ಪಶ್ಚಿಮ ಏಷ್ಯಾದ ಯುದ್ಧವು ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದು, ಹೆಚ್ಚಿನ ವೈಮಾನಿಕ ನಿರ್ಬಂಧಗಳು ಮತ್ತು ವಿಮಾನ ಇಂಧನ ದರಗಳ ತೀವ್ರ ಏರಿಕೆಯು ಅವುಗಳ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಏಕೆಂದರೆ, ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರಹೋಗುವ ಒಟ್ಟು ಅಂತಾರಾಷ್ಟ್ರೀಯ ವಿಮಾನ ಸಂಚಾರದ ಬಹುದೊಡ್ಡ ಪಾಲು ಪಶ್ಚಿಮ ಏಷ್ಯಾ ವಲಯದ ಮೂಲಕವೇ ನಡೆಯುತ್ತದೆ.

ಭಾರತದ ಎಲ್ಲಾ ಪ್ರಮುಖ ವಿಮಾನಯಾನ ಸಂಸ್ಥೆಗಳು ಈ ಬಿಕ್ಕಟ್ಟಿನಿಂದ ತೊಂದರೆಗೆ ಸಿಲುಕಿದ್ದರೂ, 'ಏರ್ ಇಂಡಿಯಾ' ಸಂಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಯುರೋಪ್ ಮತ್ತು ಉತ್ತರ ಅಮೆರಿಕಾಕ್ಕೆ ಅತಿ ಹೆಚ್ಚು ವಿಮಾನಗಳನ್ನು ನಿರ್ವಹಿಸುವ ಏಕೈಕ ಭಾರತೀಯ ಸಂಸ್ಥೆ ಏರ್ ಇಂಡಿಯಾ ಆಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ದೀರ್ಘಾವಧಿಯ ವಿಮಾನ ಪ್ರಯಾಣದ ಬಹುತೇಕ ಮಾರ್ಗಗಳು ಪಶ್ಚಿಮ ಏಷ್ಯಾದ ಕಾರಿಡಾರ್ ಮೂಲಕವೇ ಹಾದುಹೋಗುತ್ತವೆ.

ಹೀಗಾಗಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಏರ್ ಇಂಡಿಯಾ ಸಂಸ್ಥೆಯು ಜೂನ್-ಆಗಸ್ಟ್ ಅವಧಿಯಲ್ಲಿ ಸುಮಾರು ಶೇಕಡಾ 27 ರಷ್ಟು ಕಡಿಮೆ ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸಲಿದೆ. ಜೂನ್-ಜುಲೈ ಅವಧಿಯಲ್ಲಿ ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನೂ ಸಹ ಏಪ್ರಿಲ್-ಮೇ ತಿಂಗಳ ಮಟ್ಟಕ್ಕೆ ಹೋಲಿಸಿದರೆ ಸುಮಾರು ಶೇಕಡಾ 27 ರಷ್ಟು ಕಡಿತಗೊಳಿಸಿದೆ.

ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ವಲಯದ ತೈಲ ಕಂಪನಿಗಳ ಮೇಲಾಗಿರುವ ಪ್ರತಿಕೂಲ ಪರಿಣಾಮದ ಕುರಿತು ಸೋಮವಾರ ಮಾತನಾಡಿದ್ದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು, "ದೇಶೀಯ ವಿಮಾನಗಳಿಗೆ ಇಂಧನ ಮಾರಾಟ ಮಾಡುವುದರಿಂದ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ ಸುಮಾರು 30 ರೂಪಾಯಿ ಅಥವಾ ಪ್ರತಿ ಕಿಲೋ ಲೀಟರ್‌ಗೆ 30,000 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ" ಎಂದಿದ್ದರು.

ಆದರೆ, ಸರ್ಕಾರದ ಈ ನೂತನ 'ಬೆಲೆ ಸ್ಥಿರೀಕರಣ ವ್ಯವಸ್ಥೆ'ಯು ಕೇವಲ ಮುಂದಿನ ದಿನಗಳಿಗೆ ಮಾತ್ರ ಅನ್ವಯಿಸಲಿದ್ದು, ತೈಲ ಕಂಪನಿಗಳು ವಿಮಾನ ಇಂಧನ ಮಾರಾಟದಲ್ಲಿ ಇದುವರೆಗೆ ಅನುಭವಿಸಿರುವ ನಷ್ಟವನ್ನು ಈ ಯೋಜನೆಯು ಭರ್ತಿ ಮಾಡಿಕೊಡುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News