×
Ad

ಮಾಣಿ ಯುವಕ ಮಂಡಲ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ

Update: 2023-09-07 23:01 IST

ಬಂಟ್ವಾಳ : ಮಾಣಿ ಯುವಕ ಮಂಡಲ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಬುಧವಾರ ಮಾಣಿಯ ಗಾಂಧಿ ಮೈದಾನದಲ್ಲಿ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಶ್ರೀ ಕೃಷ್ಣ ಪರಮಾತ್ಮನ ಆದರ್ಶ ಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ. ಸಾಮರಸ್ಯ, ಭಾವೈಕ್ಯತೆ, ಬಾಂಧವ್ಯದ ಮೂಲಕ ಜೀವನ ನಡೆಸಬೇಕಾದರೆ ಮೊಸರು ಕುಡಿಕೆ ಉತ್ಸವದಂತಹ ಕಾರ್ಯಕ್ರಮಗಳು ಜಾತಿ,ಮತ, ಧರ್ಮ, ಭಾಷೆಗಳ ವ್ಯತ್ಯಾಸವಿಲ್ಲದೆ ಆಯೋಜಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾಣಿ ಶ್ರೀ ಉಳ್ಳಾಲ್ತಿ ದೇವಸ್ಥಾನ ಆಡಳಿತ ಮೊಕ್ತೇಸರ ಎಂ ಸಚಿನ್ ರೈ ಮಾಣಿಗುತ್ತು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಕೆ.ಮಾಣಿ, ಸದಸ್ಯ ಮೆಲ್ವಿನ್ ಮಾರ್ಟಿಸ್, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೂಸಪ್ಪ ಪೂಜಾರಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ಅತಿಥಿಗಳಾಗಿ ಭಾಗವಹಿಸಿದ್ದರು.

ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರಾದ ಹಬೀಬ್ ಕೊಡಾಜೆ, ಮೂಸಾ ಕರೀಂ ಮಾಣಿ, ಮಜೀದ್ ಮಾಣಿ, ಮಾಣಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಇನಾಮ್ ಇಸ್ಮಾಯಿಲ್ ಮಾಣಿ, ಹರೀಶ್ ಮಾಣಿ, ಬೇಬಿ ಸುವರ್ಣ, ಮಾಣಿ ಯುವಕ ಮಂಡಲ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ ಸಾಗು, ಕಾರ್ಯದರ್ಶಿ ಜಗದೀಶ್ ಜೈನ್, ಕೋಶಾಧಿಕಾರಿ ನಾಗರಾಜ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ದಯಾನಂದ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಧನುಷ್ ಶೆಟ್ಟಿ ಮತ್ತು ತಂಡ ಪ್ರಥಮ, ಚಿರಾಗ್ ಶೆಟ್ಟಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಚಿರಾಗ್ ಶೆಟ್ಟಿ ಉತ್ತಮ ದಾಳಿಗಾರ, ಸೈಫುಲ್ಲಾ ಖಾನ್ ಉತ್ತಮ ಹಿಡಿತಗಾರ ಹಾಗೂ ಧನುಷ್ ಶೆಟ್ಟಿ ಸವ್ಯಸಾಚಿ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಮಾಣಿ ಯುವಕ ಮಂಡಲ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News