ಮಂಗಳೂರು ವಿವಿಯಲ್ಲಿ ʼಸ್ವಾಸ್ಥ್ಯ ಸಂಪದ-2025ʼ : ರಾಷ್ಟ್ರೀಯ ವಿಚಾರಸಂಕಿರಣದ ಮಾಹಿತಿ ಪತ್ರ ಬಿಡುಗಡೆ
ಕೊಣಾಜೆ: ಮಂಗಳೂರು ವಿವಿಯ ಜೀವವಿಜ್ಞಾನ ವಿಭಾಗ, ಸೂಕ್ಷ್ಮಾಣುಜೀವ ವಿಜ್ಞಾನದ ಆಶ್ರಯದಲ್ಲಿ ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ ಡಿ.12 ರಿಂದ ಡಿ.13 ರವರೆಗೆ ನಡೆಯಲಿರುವ "ಸ್ವಾಸ್ಥ್ಯ ಸಂಪದ-2025" ಔಷಧೀಯ ಸಸ್ಯಗಳ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣದ ಮಾಹಿತಿ ಪತ್ರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಶುಕ್ರವಾರ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಔಷಧೀಯ ಸಸ್ಯಗಳ ಮಹತ್ವ ಮತ್ತು ಈ ನಿಟ್ಟಿನಲ್ಲಿ ನಡೆದಿರುವ ಅಧ್ಯಯನ, ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣವು ಮಹತ್ತರವಾದ ಪಾತ್ರವನ್ನು ವಹಿಸಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ವಿವೇಕ್ ಆಳ್ವ, ಪ್ರೊ. ಸಮ್ಮೇಳನದ ಕಾರ್ಯದರ್ಶಿಗಳಾದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಎಂ.ಜಯಶಂಕರ್, ಪ್ರಾಧ್ಯಾಪಕಿ ಪ್ರೊ.ತಾರಾವತಿ, ಡಾ.ಸುಬ್ರಹ್ಮಣ್ಯ ಪದ್ಯಾಣ, ಫರ್ಹಾನ್ ಝಮೀರ್ ಮುಂತಾದವರು ಉಪಸ್ಥಿತರಿದ್ದರು.
ʼಸ್ವಾಸ್ಥ್ಯ ಸಂಪದ – 2025ʼ :
ʼಸ್ವಾಸ್ಥ್ಯ ಸಂಪದ – 2025ʼ ಸಮ್ಮೇಳನವು ಭಾರತೀಯ ವೈದ್ಯಕೀಯ ವಿಜ್ಞಾನ, ಆಯುರ್ವೇದ ಚಿಕಿತ್ಸೆ, ಪಾರಂಪರಿಕೆ ಚಿಕಿತ್ಸೆ ವಿಧಾನ, ಸೂಕ್ಷ್ಮಾಣು ಜೀವಿಗಳು, ಸಸ್ಯ ಮತ್ತು ಪ್ರಾಣಿಗಳ ಔಷಧಿಯ ಮೂಲ, ಕಿಣ್ವಗಳು ಮತ್ತು ಜೈವಿಕ ವಸ್ತುಗಳ ಪಾತ್ರ ಸೇರಿದಂತೆ ಆಧುನಿಕ ತಂತ್ರಜ್ಞಾನದ ಮೂಲಕ ಆರೋಗ್ಯ ವೃದ್ಧಿ ಬಗ್ಗೆ ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಸಂಶೋಧನ ಸಾಧನೆಗಳನ್ನು ಸಂಶೋಧಕರುಗಳು ಮಂಡಿಸಲಿದ್ದಾರೆ. ಉತ್ತಮ ಸಂಶೋಧನಾ ಪ್ರಬಂಧ ಮಂಡನೆಗೆ ಪ್ರಶಸ್ತಿಯನ್ನು ನೀಡಲಾಗುವುದು. ಆಸಕ್ತಿಯುಳ್ಳ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರು, ವಿಜ್ಞಾನಿಗಳು ಹಾಗೂ ಪಾರಂಪರಿಕೆ ವೈದ್ಯ ಚಿಕಿತ್ಸಕರು ಭಾಗವಹಿಸುವಂತೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.