×
Ad

ಉಡುಪಿ ನಗರಸಭೆಯಲ್ಲಿ ಇ-ಕಚೇರಿ ತಂತ್ರಾಂಶ ಅನುಷ್ಠಾನ

ಇ-ತಂತ್ರಾಂಶ ಮೂಲಕ ಕಡತಗಳ ನಿರ್ವಹಣೆ: ಅರ್ಜಿ ವಿಲೇವಾರಿಯಲ್ಲಿ ಪಾರದರ್ಶಕತೆ

Update: 2025-08-25 14:19 IST

ಉಡುಪಿ: ಅರ್ಜಿ ವಿಲೇವಾರಿಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ನಗರಸಭೆಯಲ್ಲಿ ಇ-ಆಫೀಸ್(ಇ-ಕಚೇರಿ) ತಂತ್ರಾಂಶವನ್ನು ಅಳವಡಿಸಲಾಗಿದೆ. ಇದರಿಂದ ಕಡತಗಳ ನಿರ್ವ ಹಣೆ ಹಾಗೂ ವಿಲೇವಾರಿ ಆನ್‌ಲೈನ್ ಮೂಲಕವೇ ನಡೆಯಲಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯಲಿದೆ.

ರಾಜ್ಯ ಸರಕಾರ 2019-20ನೇ ಸಾಲಿನ ಆಯ-ವ್ಯಯದಲ್ಲಿ ಎಲ್ಲ ಸರಕಾರಿ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಕಡ್ಡಾಯಗೊಳಿ ಸಲಾಗುವುದು ಎಂಬುದಾಗಿ ಘೋಷಿಸಿತ್ತು. ಅದರ ಭಾಗವಾಗಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಕಚೇರಿಗಳು, ವಿವಿಧ ಇಲಾಖೆಯಲ್ಲಿ ಈಗಾಗಲೇ ಇ-ಕಚೇರಿ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದೆ.

ಪ್ರಸಕ್ತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಈ ಸಾಫ್ಟ್‌ವೇರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಉಡುಪಿ ನಗರಸಭೆಯಲ್ಲಿ ತಂತ್ರಾಂಶವನ್ನು ಅಳವಡಿಸಿ ಆ.21ರಿಂದ ಅನುಷ್ಠಾನಕ್ಕೆ ತರಲಾಗಿದೆ. ಇದೀಗ ಈ ಯೋಜನೆ ಜಾರಿಯಾಗುವುದರಿಂದ ನಗರಸಭೆಯ ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಲಿದೆ.

ಕಡತಗಳ ಪರಿಶೀಲನೆ ಸುಲಭ

ಭಾರತ ಸರಕಾರದ ಇ-ಆಡಳಿತ ಯೋಜನೆಯಡಿಯಲ್ಲಿ ಕಚೇರಿ ಕೆಲಸವನ್ನು ಡಿಜಿಟಲೀಕರಣಗೊಳಿಸಲು ರಾಷ್ಟ್ರೀಯ ವಾಹಿತಿ ಕೇಂದ್ರ (ಎನ್‌ಐಸಿ) ಇ-ಆಫೀಸ್ ಅಭಿವದ್ಧಿಪಡಿಸಿದೆ.

ಕರ್ನಾಟಕದಲ್ಲಿ ಇ-ಆಡಳಿತ ಕೇಂದ್ರವು ಇದರ ಅನುಷ್ಠಾನದ ಮೇಲ್ವಿಚಾರಣೆ ನಡೆಸಲಿದ್ದು, ಇದರಿಂದ ನಾಗರಿಕರಿಗೆ ಸರಕಾರಿ ಸೇವೆಗಳನ್ನು ಟ್ರ್ಯಾಕ್ ವಾಡಲು ಅನುಕೂಲವಾಗಲಿದೆ. ಇದರಲ್ಲಿ ಸಿಬ್ಬಂದಿಗೆ ಹೊಣೆಗಾರಿಕೆ ವಹಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ.

ಆನ್‌ಲೈನ್ ಸೇವೆ ಹೊರತುಪಡಿಸಿ ಉಳಿದ ಸೇವೆಗಳ ಭೌತಿಕ ಕಡತ ನಿರ್ವಹಣೆ ಇ-ತಂತ್ರಾಂಶ ಮೂಲಕ ನಡೆಯಲಿದ್ದು, ಪೌರಾಯುಕ್ತರಿಗೆ ಸೂಪರ್ ಮಾನಿಟರಿಂಗ್ ಮಾಡಲು ಸುಲಭವಾಗಲಿದೆ. ಯಾವ ಕಡತ ಯಾರ ಬಳಿ ಬಾಕಿ ಉಳಿದಿದೆ ಎಂಬುದನ್ನು ಕ್ಷಣಾರ್ಧದಲ್ಲಿ ತಿಳಿಯಬಹುದು. ಯಾಕಾಗಿ ಬಾಕಿ ಉಳಿದಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಸಾರ್ವಜನಿಕರು ತಮ್ಮ ಅರ್ಜಿಗಳ ಸ್ಥಿತಿಗತಿಗಳ ವಿವರವನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದು. ಜೊತೆಗೆ ಕಡತ ಅಥವಾ ದಾಖಲೆಗಳು ಕಳೆದುಹೋಗಿವೆ ಎಂಬ ದೂರುಗಳಿಗೆ ಅವಕಾಶವಿರುವುದಿಲ್ಲ.

ಉಡುಪಿ ನಗರಸಭೆಯಲ್ಲಿ ಇ-ಆಫೀಸ್‌ಗೆ ಸಂಬಂಧಿಸಿದ ಎಲ್ಲ ರೀತಿಯ ಸಂಪನ್ಮೂಲಗಳು ಲಭ್ಯ ಇವೆ. ಈಗಾಗಲೇ ತಂತ್ರಾಂಶವನ್ನು ಅಳವಡಿಸಿ ಪ್ರಾಯೋಗಿಕವಾಗಿ ಇ-ಆಫೀಸ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಕುರಿತು ಎರಡು ದಿನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಲ್ಲಾ ಕಡತಗಳ ನಿರ್ವಹಣೆ ಹಾಗೂ ವಿಲೇವಾರಿ ಆನ್‌ಲೈನ್ ಮೂಲಕವೇ ಮಾಡಲಾಗುವುದು

-ಮಹಂತೇಶ್ ಹಂಗರೇಗಿ,ಪೌರಾಯುಕ್ತರು, ಉಡುಪಿ ನಗರಸಭೆ

ಉಡುಪಿ ನಗರಸಭೆಯು ಇ-ಆಫೀಸ್ ತಂತ್ರಾಂಶ ಅಳವಡಿಕೆಯಿಂದಾಗಿ ಕಡತಗಳು ಸಂಪೂರ್ಣವಾಗಿ ಪೇಪರ್ ಮುಕ್ತವಾಗಿ ಕಾರ್ಯನಿರ್ವಹಿಸಲಿವೆ. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮೊಬೈಲ್ ನಂಬರ್ ಜೊತೆಗೆ ಇ-ಮೇಲ್ ಐಡಿ ಕಡ್ಡಾಯವಾಗಿ ನಮೂದಿಸಬೇಕು. ಆಗ ಕಡತ ಸಂಖ್ಯೆ ನಿರ್ವಹಣೆ ಸುಲಭವಾಗುತ್ತದೆ. ಈ ನೂತನ ಸೌಲಭ್ಯದ ಪ್ರಯೋಜನವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು.

-ಪ್ರಭಾಕರ ಪೂಜಾರಿ,ಅಧ್ಯಕ್ಷರು, ನಗರಸಭೆ ಉಡುಪಿ


ತಿಂಗಳಿಗೆ ಸರಾಸರಿ 2,000 ಅರ್ಜಿಗಳು

ಉಡುಪಿ ನಗರಸಭೆಗೆ ಸರಕಾರ ಆನ್‌ಲೈನ್ ಸೇವೆ ಹೊರತುಪಡಿಸಿ ಭೌತಿಕವಾಗಿ ತಿಂಗಳಿಗೆ ಎರಡೂವರೆ ಸಾವಿರಕ್ಕಿಂತ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ಮೇ ತಿಂಗಳಲ್ಲಿ ಖಾತಾ ವರ್ಗಾವಣೆ, ಇ-ಖಾತೆ, ಮಾಹಿತಿ ಹಕ್ಕು, ಆರೋಗ್ಯ ವಿಭಾಗ, ಸರ್ಕಾರಿ ಕಚೇರಿಗಳ ಅರ್ಜಿ, ಶಾಸಕರು ಹಾಗೂ ಅಧ್ಯಕ್ಷರಿಂದ 2,307 ಅರ್ಜಿಗಳು, ಜೂನ್‌ನಲ್ಲಿ 2,497 ಅರ್ಜಿಗಳು, ಜುಲೈನಲ್ಲಿ 16ರವರೆಗೆ 1,103 ಅರ್ಜಿಗಳು ಬಂದಿವೆ.

ವಾರ್ಷಿಕವಾಗಿ 25 ಸಾವಿರಕ್ಕಿಂತ ಹೆಚ್ಚಿನ ಕಡತಗಳ ನಿರ್ವಹಣೆಯೇ ಉಡುಪಿ ನಗರಸಭಾ ಆಡಳಿತಕ್ಕೆ ಸವಾಲಿನ ಸಂಗತಿಯಾಗಿತ್ತು. ಆದರೆ ಇ-ತಂತ್ರಾಂಶದಿಂದಾಗಿ ಕಡತಗಳನ್ನು ಜೋಪಾನವಾಗಿಟ್ಟುಕೊಳ್ಳುವ ತಲೆಬಿಸಿಯೂ ದೂರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News