ಜು.24: ವಿದ್ಯಾರ್ಥಿಗಳೊಂದಿಗೆ ಸ್ಪೀಕರ್ ಯು.ಟಿ.ಖಾದರ್ ಸಂವಾದ
ಮಂಗಳೂರು: ಮಂಜನಾಡಿ ಸಮೀಪದ ಹೂ ಹಾಕುವಕಲ್ಲು ಪಿಎಮ್ಶ್ರೀ ದ.ಕ.ಜಿಪಂ.ಉನ್ನತೀಕರಿಸಿದ ಹಿ.ಪ್ರಾ.ಶಾಲೆಗೆ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಜು.24ರಂದು ಬೆಳಗ್ಗೆ 9ಕ್ಕೆ ಭೇಟಿ ನೀಡಿ 5,6,7ನೇ ತರಗತಿಯ ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಸಂವಹನ ಜೀವನ ಕೌಶಲ ಕಲಿಕಾ ಸಾಮಗ್ರಿ ಕಿಟ್ಗಳನ್ನು ವಿತರಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಜನ ಶಿಕ್ಷಣ ಟ್ರಸ್ಟ್, ದೇಶ್ಪಾಂಡೆ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ಗ್ರಾಪಂಗಳ ಸಹಯೋಗದಲ್ಲಿ ಉಳ್ಳಾಲ ತಾಲೂಕಿನ ಹೂ ಹಾಕುವಕಲ್ಲು, ಮುದುಂಗಾರು ಕಟ್ಟೆ, ಇರಾ ತಾಳಿತ್ತ ಬೆಟ್ಟು, ಪರಪು, ಮೊಂಟೆಪದವು, ಪಾಣೇಲ ಬೇರಿಕೆ, ಕುತ್ತಾರ್, ಕೊಣಾಜೆ ಪದವು, ಕಲ್ಕಟ್ಟ, ಬೆಳ್ಮ ದೇರಳಕಟ್ಟೆ ಶಾಲೆಗಳಲ್ಲಿ 5,6,7ನೇ ತರಗತಿಯ ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಸಂವಹನ ಜೀವನ ಕೌಶಲ ವಿಶೇಷ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ವಿಶೇಷ ಕಲಿಕಾ ಕಾರ್ಯ ಕ್ರಮ ದಲ್ಲಿ 364 ಹುಡುಗಿಯರು ಮತ್ತು 294 ಹುಡುಗಿಯರ ಸಹಿತ 658 ಮಕ್ಕಳು ಆಸಕ್ತಿಯಿಂದ ಕಲಿಯುತ್ತಿ ದ್ದಾರೆ. ವಿಶೇಷ ತರಬೇತಿ ಹೊಂದಿದ ಕೇಂದ್ರ ಸಂಪನ್ಮೂಲ ವ್ಯಕ್ತಿಗಳು ಜೀವನ ಕೌಶಲದೊಂದಿಗೆ ಇಂಗ್ಲಿಷ್ ಸಂವಹನ ತರಬೇತಿ ನೀಡುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.