ಕೃಷ್ಣಾಪುರ: ಕುಲಾಲ ಸಂಘದಿಂದ ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ
ಸುರತ್ಕಲ್, ಸೆ.24: ಕುಲಾಲ ಸಂಘ ಕೃಷ್ಣಾಪುರ ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮವು ರವಿವಾರ ಸಂಘದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮಹಾನಗರ ಪಾಲಿಕೆಯ ಸದಸ್ಯ ಲೋಕೇಶ್ ಬೊಳ್ಳಾಜೆ, ಕುಲಾಲ ಸಮುದಾಯದ ಬಂಧುಗಳು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂಚೂಣಿಗೆ ಬರುವ ಅಗತ್ಯತೆ ಇದೆ ಎಂದು ನುಡಿದರು.
ಕುಲಾಲರ ಯಾನೆ ಮೂಲ್ಯರ ಮಾತೃ ಸಂಘ ಮಂಗಳೂರು ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ನಿಯಮಿತ ಚಕ್ರಸೌಧ ಕುಳಾಯಿ ಇದರ ಅಧ್ಯಕ್ಷ ಮಯೂರ್ ಉಳ್ಳಾಲ ಅವರು ಮಾತನಾಡಿ, ಸಮುದಾಯದ ವಿದ್ಯಾರ್ಥಿ ಗಳು ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ಧಿಗೆ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕೆಂದು ನುಡಿದರು.
ಇದೇ ಸಂದರ್ಭ ಸಮುದಾಯದ ಸಾಧಕರು, ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಕಲಾಯಿತು. ಪ್ರೇಮಾನಂದ ಕುಲಾಲ್ ಕೋಡಿಕಲ್ ಉಪಸ್ಥಿತರಿದ್ದು ಮಾತನಾಡಿದರು. ಕುಲಶೇಖರ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ದಾಮೋದರ ಎ., ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಸುಂದರ ಕುಲಾಲ್, ಕೃಷ್ಣಾಪುರ ಕುಲಾಲ ಸಂಘದ ಅಧ್ಯಕ್ಷ ಚಂದ್ರಹಾಸ ಕುಲಾಲ್, ಕುಲಾಲ ಮಹಿಳಾ ಮಂಡಲದ ಅಧ್ಯಕ್ಷೆ ಚೇತನ ಅನಿಲ್ ಹಾಗೂ ಮಾಲತಿ ದಯಾನಂದ್, ಲಶೇಶ್ ಕುಲಾಲ್, ಸತೀಶ್ ಸಾಲ್ಯಾನ್, ವಿಶ್ವನಾಥ್ ಬಿ. ಮೂಲ್ಯ, ಮಾಧವ ಬಂಗೇರ ಉಪಸ್ಥಿತರಿದ್ದರು.
ಮಹಿಳಾ ಸಂಘದ ಕೋಶಾಧಿಕಾರಿ ಶ್ರೀಮತಿ ಲತಾ ಲೀಲಾದರ ಬಿ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪರಾಜ್ ಬಿ. ಮೂಲ್ಯ ಸ್ವಾಗತಿಸಿದರು. ಗೀತಾ ರವಿ ಧನ್ಯವಾದ ಸಮರ್ಪಿಸಿದರು. ಶ್ರೀನಾಥ್ ಕುಲಾಲ್ ಪ್ರಾಸ್ತಾವಿಕ ಮಾತನಾಡಿದರು.