ಕುಲಾಲ - ಕುಂಬಾರರಿಗೆ ರಾಜಕೀಯದಲ್ಲಿ ಕಡೆಗಣನೆ: ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಆರೋಪ
ಮಂಗಳೂರು, ಜ.14: ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟು ಇರುವ ಕುಲಾಲ/ಕುಂಬಾರರಿಗೆ ಇಲ್ಲಿಯವರೆಗೆ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಇದು ಕುಲಾಲ ಕುಂಬಾರರ ಸಮಾಜಕ್ಕೆ ಅತೀ ದೊಡ್ಡ ಅನ್ಯಾಯ ಎಂದು ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಬೇಸರ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ಅವರು, ನಮ್ಮ ಸಮಾಜದ ಜನಸಂಖ್ಯೆಯನ್ನು ಪರಿಗಣಿಸಿ ಆಯಾ ರಾಜಕೀಯ ಪಕ್ಷದಲ್ಲಿ ಇರುವವರು ಕುಲಾಲ/ಕುಂಬಾರರನ್ನು ಪರಿಗಣಿಸಿ ಗೌರವ ಸ್ಥಾನಮಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಮುಂದೆ ನಡೆಯುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೂಡ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಮ್ಮನ್ನು ಪರಿಗಣಿಸಬೇಕು. ವಿಧಾನಸಭೆ, ಪರಿಷತ್ ಹಾಗೂ ಸಂಸತ್ ಚುನಾವಣೆಯಲ್ಲಿಯೂ ಸೂಕ್ತ ಸ್ಥಾನಮಾನ ಸಿಗಬೇಕು. ದೇವರಾಜ ಅರಸು ನಿಗಮದಲ್ಲಿ 103 ಜಾತಿಗಳನ್ನು ಸೇರಿದ 600ರಿಂದ 700 ಕೋ.ರೂ ಅನುದಾನ ಕೊಡುತ್ತಿರುವ ಸರಕಾರ ಕುಲಾಲ ಕುಂಬಾರರಿಗೆ ಅನುದಾನ ನೀಡುತ್ತಿಲ್ಲ. ಹೀಗಾಗಿ ನಮ್ಮ ಅಭಿವೃದ್ದಿ ನಿಗಮ ದೊಂದಿಗೆ 250 ಕೋ.ರೂ. ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಮಂಜಪ್ಪ ಬಿಜೈ, ರಾಜೇಂದ್ರ ಕುಮಾರ್, ಟಿ.ಶೇಷಪ್ಪ ಮೂಲ್ಯ, ವಿಶ್ವನಾಥ ಬಂಗೇರ ಕುಳಾಯಿ, ಸೋಮಯ್ಯ ಹನೈನಡೆ, ಗಿರೀಶ್ ಎಂ.ಪಿ.ಕುತ್ತಾರ್, ದೇವಪ್ಪ ಕುಲಾಲ್ ಪಂಜಿಕಲ್ಲು ಉಪಸ್ಥಿತರಿದ್ದರು.