ಉಳ್ಳಾಲ: ಮೀಫ್ನಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಕೇಂದ್ರ ಸಮಿತಿ ಮಂಗಳೂರು ಇದರ ವತಿಯಿಂದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಉಳ್ಳಾಲ ಇವರ ಸಹಯೋಗದೊಂದಿಗೆ ಆಯ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಎರಡು ದಿವಸಗಳ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರವನ್ನು ಇಸ್ಲಾಹಿ ವಿದ್ಯಾ ಸಂಸ್ಥೆಯಲ್ಲಿ ಜ.12ರಂದು ನಡೆಯಿತು.
ಇಸ್ಲಾಹಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಝಾಕ್ ಜಿ. ಉದ್ಘಾಟಿಸಿದರು.
ಸಮಾರೋಪ ಸಮಾರಂಭದಲ್ಲಿ ವಿಧಾನ ಸಭಾ ಸ್ಪೀಕರ್ ಡಾ.ಯು.ಟಿ. ಖಾದರ್ ಫರೀದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಮೀಫ್ ಹಮ್ಮಿಕೊಂಡ ಇಂತಹಾ ಎಸ್ಎಸ್ಎಲ್ಸಿ ಕಾರ್ಯಾಗಾರಗಳಲ್ಲಿ ಮೀಫ್ನ ಹಲವು ಸದಸ್ಯರು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದ್ದು, ಈ ಶ್ರಮವನ್ನು ಸಾರ್ಥಕಗೊಳಿಸಲು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ತೇರ್ಗಡೆಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳ ಮುಂದಿನ ಜೀವನವು ಉತ್ತಮಗೊಳ್ಳಬೇಕಾದಲ್ಲಿ ಎಸ್ಎಸ್ಎಲ್ಸಿಯು ಒಂದು ಪ್ರಮುಖ ಘಟ್ಟವಾ ಗಿದ್ದು, ಮುಖ್ಯವಾಗಿ ಬಾಲಕರು ಹೆಚ್ಚಿನ ಶ್ರಮ ವಹಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದೆ ಬರಬೇಕಾದದ್ದು ಕಾಲದ ಬೇಡಿಕೆಯಾಗಿದೆ ಎಂದು ಒತ್ತಿ ಹೇಳಿದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಡಿಡಿಪಿಐ ಜಿ.ಎಸ್.ಶಶಿಧರ್ , ಬಿಇಒ ಎಚ್.ಆರ್. ಈಶ್ವರ ಮತ್ತು ಜಿಲ್ಲಾ ವಿಷಯ ಪರಿವೀಕ್ಷಕರು ಲಕ್ಷ್ಮೀ ನಾರಾಯಣ್ ಸಮಯೋಚಿತವಾಗಿ ಮಾತನಾಡಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದುವರೆಗೆ ಈ ವರ್ಷ ಸರಕಾರಿ ಶಾಲಾ ವಿದ್ಯಾರ್ಥಿಗಳು ಸೇರಿ ಒಟ್ಟು 15 ಕಾರ್ಯಗಾರಗಳನ್ನು ಮೀಫ್ ನಡೆಸಿದ್ದು , ಮುಂದಿನ ದಿನಗಳಲ್ಲಿ ಜಿಲ್ಲೆಯ ಮೌಲಾನಾ ಆಜಾದ್ ವಿದ್ಯಾ ಸಂಸ್ಥೆ ಗಳನ್ನು ಸೇರಿಸಿ, ಇನ್ನು ನಾಲ್ಕು ಕಾರ್ಯಗಾರಗಳನ್ನು ಸಂಘಟಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ ತಿಳಿಸಿದರು.
ಬೆಂಗಳೂರು ಯುನಿವರ್ಸಿಟಿಯಿಂದ ಇತ್ತೀಚಿಗೆ ಗೌರವ ಡಾಕ್ಟರೇಟ್ ಪಡೆದ ಸ್ಪೀಕರ್ಯು.ಟಿ. ಖಾದರ್ ಅವರನ್ನು ಇಸ್ಲಾಹಿ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಉಳ್ಳಾಲ ತಾಲೂಕಿನ ಆರು ಮೀಫ್ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟೀಯ ಪ್ರಶಸ್ತಿ ವಿಜೇತ ಯಾಕೂಬ್ ಕಾಯರ್ತಡ್ಕ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಶರೀಫ್ ನಾರಾವಿ ಎರಡು ದಿವಸಗಳ ತರಬೇತಿಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮೀಫ್ನ ಉಪಾಧ್ಯಕ್ಷ ಪರ್ವೆಝ್ ಅಲಿ, ಕಾರ್ಯದರ್ಶಿ ಅನ್ವರ್ ಹುಸೈನ್ ಗೂಡಿನಬಳಿ ಮತ್ತು ಶೇಕ್ ರಹ್ಮತುಲ್ಲಾ, ಕಾರ್ಯಕಾರಿ ಸದಸ್ಯರುಗಳಾದ ಬಿ.ಎ. ನಝೀರ್, ಶರೀಫ್ ಬಜ್ಪೆ, ಕಾರ್ಯಕ್ರಮದ ಸಂಚಾಲಕ ಅಝೀಝ್ ಅಂಬರ್ವ್ಯಾಲಿ, ಇಸ್ಲಾಹಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಬಾಷಾ, ಕಾರ್ಯದರ್ಶಿ ಅಹ್ಮದ್ ಕುಂಞಿ ಮಾಸ್ಟರ್, ಸದಸ್ಯರಾದ ಅಬ್ದುಲ್ ಲತೀಫ್, ಅಬೂಹುರೈರ ,ನಿರ್ವಹಣಾಧಿಕಾರಿ ಆಯಿಷಾ ಸಬೀನಾ ಕೈಸಿರೀನ್, ಪ್ರಾಂಶುಪಾಲ ಸುಮಂಗಲಾ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಮತ್ತು ಮ್ಯಾನೇಜರ್ ಅನಿಲಾ ಶೆಟ್ಟಿ ಉಪಸ್ಥಿತರಿದ್ದರು.
ಮೀಫ್ನ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಸ್ವಾಗತಿಸಿದರು, ಇಸ್ಲಾಹಿ ಶಾಲಾ ಶಿಕ್ಷಕರಾದ ಮುಹಮ್ಮದ್ ಮೂನಿಸ್ ಅಹ್ಸಾನ್ ವಂದಿಸಿದರು. ಇಸ್ಲಾಹಿ ವಿದ್ಯಾ ಸಂಸ್ಥೆಯ ಶಿಕ್ಷಕಿ ನಿತಾಶ ಕಾರ್ಯಕ್ರಮ ನೆರೆವೇರಿಸಿದರು.
ಎರಡು ದಿನಗಳ ಕಾರ್ಯಾಗಾರದ ಪ್ರಾಯೋಜಕತ್ವವನ್ನು ಉಳ್ಳಾಲದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ವಹಿಸಿತ್ತು.