ಮಂಗಳೂರು: ಸಿಲಿಕಾನ್ ಬೀಚ್ ಪ್ರೋಗ್ರಾಂನ ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ ಗೆ ಚಾಲನೆ
ಮಂಗಳೂರು, ಆ. 9: ‘ಬ್ಯಾಕ್ ಟು ಊರು’ ಪರಿಕಲ್ಪನೆಗೆ ಪೂರಕವಾಗಿ ಸಿಲಿಕಾನ್ ಬೀಚ್ ಪ್ರೋಗ್ರಾಂ ಮೂಲಕ ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ ರೂಪಿಸಿರುವುದು ಶ್ಲಾಘನೀಯ. ಕಂಪೆನಿ ಸ್ಥಾಪನೆ, ಅಭಿವೃದ್ಧಿಗೆ ಬೇಕಾದ ಮಾದರಿ ನಮ್ಮಲ್ಲೇ ಇದ್ದು, ಸಮೀಕ್ಷೆಯೊಂದರ ಪ್ರಕಾರ ಶೇ.95ರಷ್ಟು ಜನರು ಮರಳಿ ಮಂಗಳೂರಿಗೆ ಆಗಮಿಸಲು ಉತ್ಸುಕತೆ ತೋರಿದ್ದಾರೆ ಎಂಬುದು ಆಶಾದಾಯಕ ಬೆಳವಣಿಗೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ನಗರದ ಯೆಯ್ಯಾಡಿಯಲ್ಲಿ ಶನಿವಾರ ಸಿಲಿಕಾನ್ ಬೀಚ್ ಪ್ರೋಗ್ರಾಂ ಮೂಲಕ ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಐಟಿಗೆ ಸಂಬಂಧಿಸಿ ವಿಶ್ವದೆಲ್ಲಡೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮರಳಿ ಮಂಗಳೂರಿಗೆ ಆಗಮಿಸಲು ಹೋಮ್ ಕಮಿಂಗ್ ವೇದಿಕೆ ಉತ್ತಮವಾಗಿದೆ. ಐಟಿ ಹೊರತಾಗಿಯೂ ಈ ಪರಿಕಲ್ಪನೆ ವ್ಯಾಪಕಗೊಳ್ಳಬೇಕು. ಸಂಘಟಿತವಾಗಿ ಇದಕ್ಕೆ ವೇಗ ದೊರೆಯಬೇಕು. 'ಬ್ಯಾಕ್ ಟು ಊರು' ಪರಿಕಲ್ಪನೆಯಡಿ ಸಂಸದರ ಕಚೇರಿ ಇತ್ತೀಚೆಗೆ ಬೊಲ್ಪು ಕಾರ್ಯಕ್ರಮ ಆಯೋಜಿಸಿತ್ತು. ಮಂಗಳೂರನ್ನು ಋಣಾತ್ಮಕವಾಗಿ, ಪದೇ ಪದೇ ಅಪರಾಧ ಸಂಭವಿಸುವ ಪ್ರದೇಶ ಎಂದು ಬಿಂಬಿಸಲಾಗುತ್ತಿದ್ದು, ಧನಾತ್ಮಕ ವಿಷಯಗಳ ಮೂಲಕ ಮಂಗಳೂರು ಪ್ರಚಾರಗೊಳ್ಳಬೇಕು ಎಂದರು.
ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಚಾಲಕ ರೋಹಿತ್ ಭಟ್ ಮಾತನಾಡಿ, ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ ಕರಾವಳಿ ಕರ್ನಾಟಕಕ್ಕೆ ಮರಳಲು ಅನುಭವಿ ವೃತ್ತಿಪರರನ್ನು ಬೆಂಬಲಿಸುವ ಒಂದು ಉಪಕ್ರಮವಾಗಿದೆ. ತಮ್ಮ ಹುಟ್ಟೂರು ಪ್ರದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವೃತ್ತಿಜೀವನ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಮರು ಶೋಧಿಸಲು ಸಹಾಯ ಮಾಡುವ ಈ ಉಪಕ್ರಮವು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯಿಂದ ನಡೆಸಲ್ಪಡುತ್ತದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ 40ಕ್ಕೂ ಹೆಚ್ಚು ಹೊಸ ಕಂಪೆನಿಗಳು ಇಲ್ಲಿ ಆರಂಭಗೊಂಡಿದ್ದು, 8,000ಕ್ಕೂ ಮೀರಿ ಉದ್ಯೋಗಗಳನ್ನು ಸೃಷ್ಟಿಸಿವೆ. ಮುಂಬರುವ ದಿನಗಳಲ್ಲಿ ಅವಕಾಶಗಳು ಇನ್ನಷ್ಟು ವೃದ್ಧಿಸಲಿದ್ದು, ಅನುಭವಿ ವೃತ್ತಿಪರರು ಭಾರತದ ಸಿಲಿಕಾನ್ ಬೀಚ್ ಗೆ ತೆರಳಲು ಈಗ ಸೂಕ್ತ ಸಮಯವಾಗಿದೆ. ಕರಾವಳಿಗೆ ಮರಳಿ ಬರುವ ಪ್ರತಿಯೊಬ್ಬ ವೃತ್ತಿಪರ ತಾನೂ 15-25 ಇತರ ವೃತ್ತಿಪರ ಅಥವಾ ಹೊಸ ಪದವೀಧರರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ತನ್ನ ಪ್ರದೇಶದಿಂದ ಪ್ರತಿಭಾ ಪಲಾಯನವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಸಿಐಐ ಮಂಗಳೂರು ಅಧ್ಯಕ್ಷ ನಟರಾಜ್ ಹೆಗ್ಡೆ, ಕೆಸಿಸಿಐ ಗೌರವ ಕಾರ್ಯದರ್ಶಿ ಅಶ್ವಿನ್ ಪೈ ಮಾರೂರು, ವಿವಿಧ ಕಂಪೆನಿ, ಸಂಸ್ಥೆಗಳ ಪ್ರತಿನಿಧಿಗಳಾದ ಚೇತನ್ ದೀಕ್ಷಿತ್, ಶ್ಯಾಮಪ್ರಸಾದ್ ಹೆಬ್ಬಾರ್, ಪ್ರಶಾಂತ್ ಶೆಣೈ, ಮುಕೇಶ್ ಎಸ್., ಅದಿತಿ ಉಪಸ್ಥಿತರಿದ್ದರು.